ಚುನಾವಣೆ ನಡೆದಿದ್ದರೆ ಒಳ್ಳೆಯದಿತ್ತು: ರಮೇಶ್ ಜಾರಕಿಹೊಳಿ
ಬೆಳಗಾವಿ, ಸೆಪ್ಟೆಂಬರ್ 26: "ನಮ್ಮ ಸ್ನೇಹಿತರು ಚುನಾವಣೆ ಮುಂದೆ ಹೋಗಬೇಕು ಎಂದು ಬಯಸಿದ್ದರು. ಆದರೆ ವೈಯಕ್ತಿಕವಾಗಿ, ಚುನಾವಣೆ ನಡೆದಿದ್ದರೆ ಒಳ್ಳೆಯದಿತ್ತು ಎನಿಸುತ್ತಿದೆ" ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ಈ ಕುರಿತು ಗೋಕಾಕ್ ನಲ್ಲಿ ಮಾತನಾಡಿದ ಅವರು, "ಅನರ್ಹ ಪಟ್ಟದಿಂದ ನಾವು ಇನ್ನೂ ಮುಕ್ತಿಯಾಗಿಲ್ಲ. ಸಮ್ಮಿಶ್ರ ಸರ್ಕಾರದ ನಿರ್ಧಾರದಿಂದ ನಾನು ಮನನೊಂದಿದ್ದೇನೆ. ನಮ್ಮ ಮಾತು ಕಾಂಗ್ರೆಸ್ ಹೈಕಮಾಂಡ್ ಕೇಳಲಿಲ್ಲ. ನಾನು ಎಂದೂ ಪಕ್ಷ ವಿರೋಧಿಯಾಗಿ ಮಾತನಾಡಲಿಲ್ಲ. ಅನಿವಾರ್ಯವಾಗಿ ಪಕ್ಷದಿಂದ ಹೊರ ಬರಬೇಕಾದ ಸ್ಥಿತಿ ನಿರ್ಮಾಣವಾಯಿತು" ಎಂದರು.
ಜನ ಬೆನ್ನ ಹಿಂದೆ ಇರುವವರೆಗೂ ನಾನು ಹೀರೋನೇ ಎಂದ ರಮೇಶ್ ಜಾರಕಿಹೊಳಿ
"ನ್ಯಾಯಾಲಯದಿಂದ ನ್ಯಾಯ ಸಿಗುವ ವಿಶ್ವಾಸವಿದೆ. ಒಂದು ವೇಳೆ ರಮೇಶ ಕುಮಾರ್ ಅವರ ನಿರ್ಧಾರ ಎತ್ತಿ ಹಿಡಿದರೆ ಮುಂದೆ ಯಾವೊಬ್ಬ ಶಾಸಕರೂ ಕೆಲಸ ಮಾಡಲು ಸಾಧ್ಯವಿಲ್ಲ. ನನ್ನ ರಾಜೀನಾಮೆ ಮೂರು ತಿಂಗಳು ಯಾಕೆ ಪೆಂಡಿಂಗ್ ಇಟ್ಟರು? ರಾಜೀನಾಮೆ ಬಳಿಕೆ ಯಾಕೆ ಅಂಗೀಕಾರ ಮಾಡಲಿಲ್ಲ?" ಎಂದು ಪ್ರಶ್ನಿಸಿದರು.
"ರಾಜೀನಾಮೆ ಕೊಡುವುದು ನಮ್ಮ ಹಕ್ಕು. ರಾಜೀನಾಮೆ ಕೊಟ್ಟು ನಂತರ ಎಲ್ಲಿ ಬೇಕಾದರೂ ಹೋಗಬಹುದು. ಹಿರಿಯ ಸಚಿವರೊಬ್ಬರು ರಾಜೀನಾಮೆ ಪತ್ರ ಹರಿದು ಹಾಕಿದರು. ಈ ವಿಡಿಯೋ ನನ್ನ ಬಳಿ ಇದೆ. ಸಮಯ ಬಂದರೆ ವಿಡಿಯೋ ತೋರಿಸುತ್ತೇನೆ" ಎಂದರು.