ಸಿಡಿ ಪ್ರಕರಣ; ಯುವತಿ ಪ್ರತ್ಯಕ್ಷ, ಜಾರಕಿಹೊಳಿ ದೇವಾಲಯಕ್ಕೆ!
ಬೆಳಗಾವಿ, ಮಾರ್ಚ್ 30; ಮಾಜಿ ಸಚಿವ, ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿಗೆ ಮಂಗಳವಾರ ಪ್ರತ್ಯಕ್ಷಳಾಗಿದ್ದಾಳೆ. ನ್ಯಾಯಾಲಯಕ್ಕೆ ಹಾಜರಾದ ಯುವತಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆಯನ್ನು ನೀಡಿದ್ದಾಳೆ.
ಮಂಗಳವಾರ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಪ್ರತ್ಯಕ್ಷಳಾಗಿದ್ದಾಳೆ. 28 ದಿನಗಳಿಂದ ಪೊಲೀಸರು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದರು. ಇಂದು ಪೊಲೀಸರ ಬಿಗಿ ಭದ್ರತೆಯಲ್ಲಿಯೇ 24ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹೇಳಿ ಕೊಟ್ಟಿದ್ದಾಳೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ವಕೀಲ ಶ್ಯಾಮ್ಸುಂದರ್ ಮಹತ್ವದ ಹೇಳಿಕೆ
ಯುವತಿ ಮಂಗಳವಾರ ಬೆಂಗಳೂರಿನಲ್ಲಿ ಪ್ರತ್ಯಕ್ಷವಾದರೆ ರಮೇಶ್ ಜಾರಕಿಹೊಳಿ ಗೋಕಾಕ್ನಲ್ಲಿದ್ದರು. ಸೋಮವಾರ ಬೆಂಗಳೂರಿನಲ್ಲಿ ಪೊಲೀಸ್ ವಿಚಾರಣೆ ಎದುರಿಸಿದ ಬಳಿಕ ಅವರು ಗೋಕಾಕ್ನ ನಿವಾಸಕ್ಕೆ ಪ್ರಯಾಣ ಬೆಳೆಸಿದ್ದರು.
ಸಿಡಿ ಪ್ರಕರಣದ ತನಿಖೆಯಲ್ಲಿ ಎಸ್ಐಟಿ ತಂಡ ಎಡವಿದ್ದು ಎಲ್ಲಿ?
ರಮೇಶ್ ಜಾರಕಿಹೊಳಿ ಮಧ್ಯಾಹ್ನ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರದ ಮಹಾಲಕ್ಷ್ಮೀ ದೇವಾಲಯಕ್ಕೆ ಭೇಟಿ ನೀಡಿದರು. ಸುಮಾರು ಅರ್ಧಗಂಟೆಗಳ ಕಾಲ ದೇವಾಲಯದಲ್ಲಿದ್ದ ಅವರು ಬಳಿಕ ಗೋಕಾಕ್ಗೆ ವಾಪಸ್ ಆದರು.
ವಿಶೇಷ ಕೋರ್ಟ್ ಮುಂದೆ ಸಿಡಿ ಲೇಡಿ ಹಾಜರು, ಹೇಳಿಕೆ ದಾಖಲು
ಬುಧವಾರ ರಮೇಶ್ ಜಾರಕಿಹೊಳಿ ಪುನಃ ಬೆಂಗಳೂರಿಗೆ ಆಗಮಿಸಲಿದ್ದಾರೆ. ಏಪ್ರಿಲ್ 2ರಂದು ಅವರು ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಈಗಾಗಲೇ ಸೂಚನೆ ಕೊಡಲಾಗಿದೆ.
ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಪ್ರತ್ಯಕ್ಷಳಾಗುತ್ತಿದ್ದಂತೆ ರಮೇಶ್ ಜಾರಕಿಹೊಳಿ ಬಂಧಿಸಬೇಕು ಎಂಬ ಒತ್ತಾಯ ಹೆಚ್ಚಾಗಿದೆ. ಯುವತಿ ಪರ ವಕೀಲ ಜಗದೀಶ್, "ನಮ್ಮ ಮಾತನ್ನು ನಡೆಸಿಕೊಟ್ಟಿದ್ದೇವೆ. ಆರೋಪಿಯನ್ನು ಬಂಧಿಸಿ" ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬುಧವಾರ ಬೆಂಗಳೂರಿಗೆ ಆಗಮಿಸುವ ರಮೇಶ್ ಜಾರಕಿಹೊಳಿ ವಕೀಲರ ಜೊತೆ ಮುಂದಿನ ಕಾನೂನು ಪ್ರಕ್ರಿಯೆ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆ ಇದೆ. ಪೊಲೀಸರು ಅವರನ್ನು ಬಂಧಿಸಲಿದ್ದಾರೆಯೇ? ಕಾದು ನೋಡಬೇಕಿದೆ.
ರಮೇಶ್ ಜಾರಕಿಹೊಳಿ ಬೆಳಗಾವಿಯಲ್ಲಿದ್ದರೂ ಇಂದು ಲೋಕಸಭಾ ಉಪ ಚುನಾವಣೆ ನಾಮಪತ್ರ ಸಲ್ಲಿಕೆಗೆ ಗೈರಾದರು. ಬಿಜೆಪಿ ಅಭ್ಯರ್ಥಿ ಮಂಗಲ ಸುರೇಶ್ ಅಂಗಡಿ ಯಡಿಯೂರಪ್ಪ ಸೇರಿದಂತೆ ವಿವಿಧ ನಾಯಕರ ಉಪಸ್ಥಿತಿಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.