ಮೇ 23ರ ತನಕ ಏನೂ ಮಾತನಾಡಲ್ಲ : ರಮೇಶ್ ಜಾರಕಿಹೊಳಿ
Recommended Video
ಬೆಳಗಾವಿ, ಮೇ 08 : 'ಮೇ 23ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಮಾತನಾಡುತ್ತೇನೆ. ಈಗ ಏನೂ ಮಾತನಾಡುವುದಿಲ್ಲ' ಎಂದು ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ಬುಧವಾರ ರಮೇಶ್ ಜಾರಕಿಹೊಳಿ ಅವರು ಗೋಕಾಕ್ಗೆ ಆಗಮಿಸಿದ್ದಾರೆ. ಏಪ್ರಿಲ್ 23ರಂದು ಲೋಕಸಭಾ ಚುನಾವಣೆಗೆ ಮತದಾನ ಮಾಡಿದ ಬಳಿಕ ರಮೇಶ್ ಜಾರಕಿಹೊಳಿ ಬೆಂಗಳೂರಿಗೆ ತೆರಳಿದ್ದರು. ಏ.24ರಿಂದ ಬೆಂಗಳೂರಿನಲ್ಲಿಯೇ ಇದ್ದರು.
ರಮೇಶ್ ಜಾರಕಿಹೊಳಿ ತಂತ್ರದಿಂದಾಗಿ ಕಾಂಗ್ರೆಸ್ಗೆ ಹಿನ್ನಡೆ?
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಪುತ್ರ ಅಮರ್ ಜಾರಕಿ ಹೊಳಿ ಜೊತೆ ರಮೇಶ್ ಜಾರಕಿಹೊಳಿ ಆಗಮಿಸಿದರು. ಬೆಳಗಾವಿಯಿಂದ ಗೋಕಾಕ್ಗೆ ಅವರು ತೆರಳಿದರು.ರಮೇಶ್ ಜಾರಕಿಹೊಳಿ ಮುಂದಿನ ನಡೆ ಏನು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರಿಗೆ ಬಂದ ರಮೇಶ್ ಜಾರಕಿಹೊಳಿ ಹೇಳಿದ್ದೇನು?
ರಮೇಶ್ ಜಾರಕಿಹೊಳಿ ಅವರ ಇಬ್ಬರು ಬೆಂಬಲಿಗರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದರು. ಗೋಕಾಕ್ಗೆ ಆಗಮಿಸಿರುವ ಅವರು ಮುಂದಿನ ನಡೆ ಬಗ್ಗೆ ಬೆಂಬಲಿಗರ ಜೊತೆ ಸಭೆ ನಡೆಸುವ ನಿರೀಕ್ಷೆ ಇದೆ.....
ರಮೇಶ್ ಜಾರಕಿಹೊಳಿ ರಾಜೀನಾಮೆ ಹೇಳಿಕೆ : ಯಾರು, ಏನು ಹೇಳಿದರು?
ರಾಜೀನಾಮೆ ಬಾಂಬ್ ಸಿಡಿಸಿದ್ದರು
ಏಪ್ರಿಲ್ 23ರಂದು ಬೆಳಗಾವಿಯಲ್ಲಿ ಮಾತನಾಡಿದ್ದ ರಮೇಶ್ ಜಾರಕಿಹೊಳಿ ಅವರು, 'ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ' ಎಂದು ಹೇಳಿದ್ದರು. ಆದರೆ, ಬೆಂಗಳೂರಿಗೆ ಬಂದ ಬಳಿಕ ತಮ್ಮ ವರಸೆಯನ್ನು ಬದಲಿಸಿದ್ದರು. ಅವರ ಬೆಂಗಳೂರು ಭೇಟಿ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು.
ಒಬ್ಬನೇ ರಾಜೀನಾಮೆ ಕೊಡುವುದಿಲ್ಲ
ಬೆಂಗಳೂರಿಗೆ ಬಂದ ಬಳಿಕ ಮಾತನಾಡಿದ್ದ ರಮೇಶ್ ಜಾರಕಿಹೊಳಿ ಅವರು, 'ಒಬ್ಬನೇ ರಾಜೀನಾಮೆ ನೀಡಿದರೆ ಏನೂ ಪ್ರಯೋಜನವಿಲ್ಲ. ಒಂದಿಷ್ಟು ಜನ ಸೇರಿ ರಾಜೀನಾಮೆ ನೀಡುತ್ತೇವೆ. ರಾಜೀನಾಮೆ ನೀಡುವುದಂತೂ ಸತ್ಯ. ಪಕ್ಷದಲ್ಲಿ ಇನ್ನೂ ಕೆಲವರ ಜೊತೆ ಚರ್ಚೆ ನಡೆಸಬೇಕಿದೆ' ಎಂದು ಹೇಳಿದ್ದರು.
ಅಳಿಯನಿಂದ ಮಾಹಿತಿ ಸಂಗ್ರಹ
ರಮೇಶ್ ಜಾಕಿಹೊಳಿ ಅವರು ಏಪ್ರಿಲ್ 24ರಿಂದ ಬೆಂಗಳೂರಿನಲ್ಲಿಯೇ ಇದ್ದರು. ಆದರೆ, ಗೋಕಾಕ್ ಮತ್ತು ಬೆಳಗಾವಿಯಲ್ಲಿನ ರಾಜಕೀಯ ಬೆಳವಣಿಗೆ ಕುರಿತು ಅಳಿಯ ಅಂಬಿರಾವ್ ಪಾಟೀಲ್ರಿಂದ ಮಾಹಿತಿ ಪಡೆಯುತ್ತಿದ್ದರು.
ಸೋಮವಾರ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಜನಪ್ರತಿನಿಧಿಗಳ ಸಭೆಗೂ ಅವರು ಗೈರಾಗಿದ್ದರು. ಆದರೆ, ಸತೀಶ್ ಜಾರಕಿಹೊಳಿ ಆ ಸಭೆಯಲ್ಲಿ ಪಾಲ್ಗೊಂಡಿದ್ದದರು.
ಮಾತನಾಡುವುದು ಮುಗಿದ ಅಧ್ಯಾಯ
ಸೋಮವಾರ ಬೆಳಗಾವಿಯಲ್ಲಿ ಮಾತನಾಡಿದ್ದ ಸತೀಶ್ ಜಾರಕಿಹೊಳಿ ಅವರು, 'ರಮೇಶ್ ಜಾರಕಿಹೊಳಿ ಅವರಿಗೆ ಪಕ್ಷ ಬಿಡುವಂತೆ ಯಾರೂ ಹೇಳಿಲ್ಲ. ಪಕ್ಷದ ಕಾರ್ಯಕರ್ತರಾಗಲಿ, ಸಿದ್ದರಾಮಯ್ಯ ಅವರಾಗಲಿ ಯಾರೂ ಹೇಳಿಲ್ಲ. ಪಕ್ಷದಲ್ಲಿ ಇರುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ' ಎಂದು ಹೇಳಿದ್ದರು.