ಎರಡು ವಸ್ತು ಕಳೆದುಕೊಂಡ ರಮೇಶ ಜಾರಕಿಹೊಳಿ; ಮೊದಲನೆಯದು ಯಾವುದು?
Recommended Video
ಬೆಳಗಾವಿ, ಆಗಸ್ಟ್ 20: "ರಮೇಶ ಜಾರಕಿಹೊಳಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ತಪ್ಪುವ ಮೂಲಕ ಎರಡನೇ ವಸ್ತುವನ್ನು ಕಳೆದುಕೊಂಡಿದ್ದಾರೆ" ಎಂದು ಮಾಜಿ ಸಚಿವ ಹಾಗೂ ರಮೇಶ್ ಸೋದರ ಸತೀಶ ಜಾರಕಿಹೊಳಿ ಮಂಗಳವಾರ ಹೇಳಿದ್ದಾರೆ. ಆ ಮೂಲಕ ರಮೇಶ ಜಾರಕಿಹೊಳಿ ಅವರು ಕಳೆದುಕೊಂಡ ಮೊದಲ ವಸ್ತು ಯಾವುದು ಎಂಬ ಪ್ರಶ್ನೆ ಉದ್ಭವ ಆಗುವಂತೆ ಮಾಡಿದ್ದಾರೆ.
ಆ ಪ್ರಶ್ನೆಗೆ ಸತೀಶ ಜಾರಕಿಹೊಳಿ ಅವರು ಮಾಧ್ಯಮದ ಮುಂದೆ ಉತ್ತರ ನೀಡಲಿಲ್ಲ. ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ರಮೇಶ ಜಾರಕಿಹೊಳಿ. ಇವತ್ತು ರಮೇಶ ಜಾರಕಿಹೊಳಿ ಎರಡನೇ ವಸ್ತು ಕಳೆದುಕೊಂಡಿದ್ದಾರೆ. ಸಮ್ಮಿಶ್ರ ಸರಕಾರದಲ್ಲಿ ರಮೇಶ ಜಾರಕಿಹೊಳಿ ಸಚಿವರಾಗುತ್ತಾರೆ ಎಂದುಕೊಂಡಿದ್ದೆವು. ಅದು ಕೈ ತಪ್ಪಿದೆ ಎಂದಿದ್ದಾರೆ.
15 ವರ್ಷಗಳ ಬಳಿಕ ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನವಿಲ್ಲ!
ಈಗಾಗಲೇ ಒಂದು ವಸ್ತು ಕಳೆದುಕೊಂಡಿರುವ ರಮೇಶ ಎರಡನೇ ವಸ್ತುವನ್ನು ಕಳೆದುಕೊಂಡಿದ್ದಾರೆ ಎಂದು ಹುಕ್ಕೇರಿ ತಾಲೂಕಿನ ಪಾಶ್ಚಾಪೂರದಲ್ಲಿ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು
ಬಿಜೆಪಿ ಹೈಕಮಾಂಡ್ ಬಾಲಚಂದ್ರ ಜಾರಕಿಹೊಳಿ ಮತ್ತು ಉಮೇಶ ಕತ್ತಿ ಇಬ್ಬರಿಗೂ ಸಚಿವ ಸ್ಥಾನ ನೀಡದೆ ದೊಡ್ಡ ಮಟ್ಟದ ಆಘಾತ ನೀಡಿದೆ. ಮಂತ್ರಿ ಸ್ಥಾನದ ಕನಸು ಕಂಡಿದ್ದ ಬೆಳಗಾವಿ ಜಿಲ್ಲೆಯ ಇಬ್ಬರು ಪ್ರಭಾವಿ ನಾಯಕರಿಗೆ ಕೊಕ್ ಕೊಟ್ಟಿದ್ದು, ಮಾಜಿ ಶಾಸಕ ಲಕ್ಷ್ಮಣ ಸವದಿ ಮತ್ತು ಶಾಸಕಿ ಶಶಿಕಲಾ ಜೋಲ್ಲೆಗೆ ಮಂತ್ರಿಗಿರಿ ನೀಡಲಾಗಿದೆ. ಇದು ಬಿಜೆಪಿ ಪಾಳಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಳಗಾವಿ ರಾಜಕಾರಣದಿಂದ ಬಿಎಸ್ ವೈ ಸರಕಾರಕ್ಕೂ ಅಪಾಯ!
ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರಕಾರಕ್ಕೆ ಮುಳುಗು ನೀರು ತಂದ ಬೆಳಗಾವಿ ಜಿಲ್ಲಾ ರಾಜಕಾರಣವು ಈಗ ಬಿ.ಎಸ್. ಯಡಿಯೂರಪ್ಪ ಸರಕಾರಕ್ಕೂ ಕಂಟಕವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಮಾಜಿ ಶಾಸಕ ಲಕ್ಷ್ಮಣ ಸವದಿ ಮತ್ತು ಶಶಿಕಲಾ ಜೊಲ್ಲೆಗೆ ಮಂತ್ರಿಗಿರಿ ನೀಡಿರುವುದು ಸವದತ್ತಿಯ ಶಾಸಕ ಆನಂದ ಮಾಮನಿ, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಜೆಪಿ ಸರಕಾರ ರಚನೆಯಲ್ಲಿ ಜಾರಕಿಹೊಳಿ ಸೋದರರ ಪಾತ್ರ
ಬಿಎಸ್ ವೈ ಸರಕಾರದ ಸಂಪುಟ ರಚನೆ ಮತ್ತೆ ಬೆಳಗಾವಿ ಜಿಲ್ಲೆಯಿಂದಲೇ ಬಂಡಾಯದ ಬಾವುಟ ಹಾರುವ ಲಕ್ಷಣಗಳು ಗೋಚರಿಸುತ್ತಿವೆ. ಕತ್ತಿ ಸೋದರರ ಮುಂದಿನ ನಡೆ ಏನು ಎಂಬುದು ಕೂಡ ಸಾಕಷ್ಟು ಕುತೂಹಲ ಕೆರಳಿಸಿದೆ. ಜೆಡಿಎಸ್- ಕಾಂಗ್ರೆಸ್ ದೋಸ್ತಿ ಸರಕಾರ ಪತನವಾಗಿ, ಬಿಜೆಪಿ ಸರಕಾರದ ರಚನೆಯಲ್ಲಿ ಇದೇ ಬೆಳಗಾವಿ ಜಿಲ್ಲೆಯ ಜಾರಕಿಹೊಳಿ ಸೋದರರ ಪರಿಶ್ರಮವಿದೆ.
ಯಡಿಯೂರಪ್ಪ ಸಂಪುಟದಲ್ಲಿ ಯಾವ ಜಾತಿಯ ಶಾಸಕರಿಗೆ ಸ್ಥಾನ?
ಸುಪ್ರೀಂ ಕೋರ್ಟ್ ತೀರ್ಪು ಕಾದು ನೋಡುವ ಉದ್ದೇಶ
ಇತ್ತೀಚಿನವರೆಗೂ ಯಾವುದೇ ಸರಕಾರ ರಚನೆ ಆದರೂ ಅದರಲ್ಲಿ ಜಾರಕಿಹೊಳಿ ಸೋದರರಲ್ಲಿ ಒಬ್ಬರಾದರೂ ಮಂತ್ರಿ ಆಗುತ್ತಿದ್ದರು. ಈಗ ಅನರ್ಹಗೊಂಡಿದ್ದರಿಂದ ರಮೇಶ ಜಾರಕಿಹೊಳಿ ಮತ್ತು ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಇಬ್ಬರಿಗೂ ಮಂತ್ರಿ ಸ್ಥಾನ ಸಿಕ್ಕಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ಕಾದು ನೋಡುವ ಉದ್ದೇಶದಿಂದ ಕೈ ಬಿಡಲಾಗಿದೆ ಎಂಬುದು ಕೂಡ ಚರ್ಚೆ ಆಗುತ್ತಿದೆ. ಆದರೆ ಆಪ್ತರ ಬಳಿ ಬಾಲಚಂದ್ರ ಜಾರಕಿಹೊಳಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಇಬ್ಬರು ಸಹೋದರರಿಗೆ ಟಾಂಗ್ ನೀಡಿದ್ದಾರೆ.
ಮಂತ್ರಿ ಸ್ಥಾನಕ್ಕಾಗಿ ಅವಮಾನ ಸಹಿಸಿಕೊಂಡಿದ್ದರು ಉಮೇಶ್ ಕತ್ತಿ
ಕತ್ತಿ ಸಹೋದರರು ಮತ್ತೆ ಮೌನಕ್ಕೆ ಶರಣಾಗಿದ್ದಾರೆ. ಅಂದು ಉಮೇಶ ಕತ್ತಿ ಸಹೋದರ ರಮೇಶ ಕತ್ತಿಗೆ ಟಿಕೆಟ್ ಕೈ ತಪ್ಪಿತ್ತು. ಆ ಅವಮಾನವನ್ನು ಸಹಿಸಿಕೊಂಡು, ಮಂತ್ರಿ ಸ್ಥಾನ ನೀಡಿ, ಸರಿ ಮಾಡುತ್ತಾರೆ ಎಂದುಕೊಂಡಿದ್ದ ಕತ್ತಿ ಸೋದರರಿಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದೆ. ಬೆಳಗಾವಿ ಜಿಲ್ಲೆಯ ಬಿಜೆಪಿಯಲ್ಲಿ ಮಂತ್ರಿಗಿರಿಯ ಅಸಮಾಧಾನ ದಟ್ಟವಾಗಿ ಹೊಗೆಯಾಡುತ್ತಿದ್ದು, ಮತ್ತೆ ಬಿಜೆಪಿ ಸರಕಾರಕ್ಕೆ ಬೆಳಗಾವಿ ಜಿಲ್ಲಾ ರಾಜಕಾರಣ ಮುಳುವಾಗುವ ಸಾಧ್ಯತೆ ಹೆಚ್ಚಾಗಿದೆ.