ಚಿಕ್ಕೋಡಿ: ಜೊಲ್ಲೆಗೆ ಬಿಜೆಪಿ ಟಿಕೆಟ್, ಕತ್ತಿ ಸಹೋದರರ ಬಂಡಾಯ
Recommended Video
ಚಿಕ್ಕೋಡಿ, ಮಾರ್ಚ್ 30: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಅಣ್ಣಾ ಸಾಹೇಬ ಜೊಲ್ಲೆ ಅವರಿಗೆ ಬಿಜೆಪಿಯು ಟಿಕೆಟ್ ನೀಡಿದ್ದು, ಆಕಾಂಕ್ಷಿ ಆಗಿದ್ದ ರಮೇಶ್ ಕತ್ತಿ ಅವರಿಗೆ ಟಿಕೆಟ್ ಕೈತಪ್ಪಿರುವುದು ಬಂಡಾಯಕ್ಕೆ ಕಾರಣವಾಗುವ ಸರ್ವ ಸಾಧ್ಯತೆ ಇದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಯಡಿಯೂರಪ್ಪ ಆಪ್ತ ಶಾಸಕ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ಅವರು ಚಿಕ್ಕೋಡಿ ಕ್ಷೇತ್ರದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು, ಆದರೆ ಅವರ ಬದಲಿಗೆ ಉದ್ಯಮಿ ಅಣ್ಣಾ ಸಾಹೇಬ ಜೊಲ್ಲೆ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದೆ.
ಉಮೇಶ್ ಕತ್ತಿ ಹಾಗೂ ರಮೇಶ್ ಕತ್ತಿ ಅವರು ಪಕ್ಷದ ನಿರ್ಧಾರದಿಂದ ಅಸಮಾಧಾನಗೊಂಡಿದ್ದು, ರಮೇಶ್ ಕತ್ತಿ ಅವರು ಈಗಾಗಲೇ ಹೈಕಮಾಂಡ್ ನಿರ್ಧಾರವನ್ನು ಕಟು ಮಾತಿನಿಂದ ಖಂಡಿಸಿದ್ದಾರೆ.
ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ
2009ರಲ್ಲಿ ಸಂಸದರಾಗಿದ್ದ ರಮೇಶ್ ಕತ್ತಿ ಪ್ರಸ್ತುತ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. 2014 ಕಳೆದ ಲೋಕಸಭೆ ಚುನಾವಣೆಯಲ್ಲಿ ಕೇವಲ 3 ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಈ ಬಾರಿ ಟಿಕೆಟ್ ಅವರಿಗೆ ದೊರೆಯುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅಚ್ಚರಿ ಎಂಬಂತೆ ಜೊಲ್ಲೆ ಅವರಿಗೆ ಟಿಕೆಟ್ ದೊರೆತಿದೆ.
ಕತ್ತಿ ಸಹೋದರರ ಬಂಡಾಯ ಬಿಜೆಪಿಗೆ ಆತಂಕ
ಉಮೇಶ್ ಕತ್ತಿ ಅವರು ಈ ಭಾಗದ ಪ್ರಬಲ ನಾಯಕರಾಗಿದ್ದು, ಅವರು ಬಂಡಾಯ ಎದ್ದರೆ ಚಿಕ್ಕೋಡಿಯಲ್ಲಿ ಬಿಜೆಪಿ ಗೆಲುವು ಕಷ್ಟವಾಗಲಿದೆ. ಈಗಾಗಲೇ ಅವರು ಸಹ ತಮ್ಮ ಅಸಮಾಧಾನ ಹೊರಹಾಕಿದ್ದು, ಏಪ್ರಿಲ್ 4 ರ ವರೆಗೆ ಕಾದು ನೋಡಿ ಎಂದು ಗುಡುಗಿದ್ದಾರೆ.
ರಮೇಶ್ ಕತ್ತಿ ಪಕ್ಷೇತರ ಅಭ್ಯರ್ಥಿಯಾಗುವ ಸಾಧ್ಯತೆ
ರಮೇಶ್ ಕತ್ತಿ ಅವರು ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಕತ್ತಿ ಅವರು ಪಕ್ಷೇತರರಾಗಿ ಸ್ಪರ್ಧಿಸಿದರೆ ಬಿಜೆಪಿ ಅಭ್ಯರ್ಥಿಗೆ ಭಾರಿ ಹಾನಿ ಆಗಲಿದೆ. ಮತ ವಿಭಜನೆ ಆಗಿ ಕಾಂಗ್ರೆಸ್ ಅಭ್ಯರ್ಥಿಗೆ ಲಾಭವಾಗಲಿದೆ.
ಶಾಸಕಿ ಶಶಿಕಲಾ ಜೊಲ್ಲೆ ಪತಿ
ಅಣ್ಣಾ ಸಾಹೇಬ ಜೊಲ್ಲೆ ಅವರು, ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಅವರ ಪತಿ. ಉದ್ಯಮಿಯೂ ಆಗಿರುವ ಅವರು 2014 ಹಾಗೂ 2018ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು. ಈಗ ಅವರು ಲೋಕಸಭೆ ಚುನಾವಣೆಯಲ್ಲಿ ಗಣೇಶ್ ಹುಕ್ಕೇರಿ ಅವರನ್ನು ಎದುರಿಸಬೇಕಿದೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರ ಎದುರಿಗೇ ಅವರು ಸೋಲನ್ನು ಅನುಭವಿಸಿದ್ದರು.
ಉಮೇಶ್ ಕತ್ತಿ ತೀವ್ರ ಅಸಮಾಧಾನ
ಹೈಕಮಾಂಡ್ ನಿರ್ಧಾರದಿಂದ ಅಸಮಧಾನಗೊಂಡಿರುವ ಉಮೇಶ್ ಕತ್ತಿ ಮಾತನಾಡಿ, ಜೊಲ್ಲೆ ಅವರ ಅತ್ಯುತ್ಸಾಹ ನೋಡಿ ಅವರಿಗೆ ಟಿಕೆಟ್ ನೀಡಿರಬಹುದು, ಇನ್ನೂ ಸಮಯವಿದೆ, ತಮ್ಮ ನಿರ್ಧಾರವನ್ನು ಬದಲಾಯಿಸಿ ಎಂದು ನಾನು ಹೈಕಮಾಂಡ್ ಮತ್ತು ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ ಎಂದಿದ್ದಾರೆ.
ಏಪ್ರಿಲ್ 4 ವರೆಗೆ ಕಾಯುತ್ತೇವೆ
ರಮೇಶ್ ಕತ್ತಿ ಅವರು ಸಂಸದರಾಗಿ ಹಿಂದೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರಿಗೆ ಟಿಕೆಟ್ ನೀಡದಿರುವುದು ಸರಿಯಲ್ಲ, ನಿರ್ಧಾರದ ಮರುಪರಿಶೀಲನೆ ಆಗಲೇಬೇಕು, ಏಪ್ರಿಲ್ 4 ವರೆಗೆ ಏನೇನು ಬದಲಾವಣೆ ಆಗುತ್ತದೆಯೋ ನೋಡೋಣ ಆನಂತರ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ ಎಂದು ಅವರು ಹೇಳಿದ್ದಾರೆ.