ಕಾಂಗ್ರೆಸ್ ಮಾತು ಕೇಳಿ ಕರ್ನಾಟಕ ಬಂದ್ ಮಾಡಬೇಡಿ; ರೈತರಿಗೆ ಈರಣ್ಣ ಕಡಾಡಿ ಮನವಿ
ಬೆಳಗಾವಿ, ಸೆಪ್ಟೆಂಬರ್ 27: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಭೂ ಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆಗಳ ತಿದ್ದುಪಡಿ ರೈತರ ಪರವಾಗಿವೆ. ಕಾಂಗ್ರೆಸ್ ನಾಯಕರ ಮಾತು ಕೇಳಿ ಕರ್ನಾಟಕ ಬಂದ್ ಮಾಡಬೇಡಿ ಎಂದು ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಮನವಿ ಮಾಡಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರ, ರಾಜ್ಯ ಸರ್ಕಾರ ರೈತ ಪರ ಕಾಯಿದೆಗಳನ್ನೇ ಜಾರಿಗೊಳಿಸಿವೆ. ಭೂ ಸುಧಾರಣೆ ಕಾಯ್ದೆ ರೈತರ ಶ್ರೇಯೋಭಿವೃದ್ಧಿಗೆ ಅನುಕೂಲ ಆಗಲಿದೆ. ಕಾಂಗ್ರೆಸ್ ಮಾತು ಕೇಳಿ ಮುಗ್ಧ ರೈತರು ಪ್ರತಿಭಟನೆಗೆ ಮುಂದಾಗುತ್ತಿದ್ದಾರೆ ಎಂದು ತಿಳಿಸಿದರು.
ಚಿತ್ರದುರ್ಗ: ಕರ್ನಾಟಕ ಬಂದ್ ಗೆ ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ವಿವಿಧ ಸಂಘಟನೆಗಳ ಬೆಂಬಲ
ರೈತರ ಅನುಕೂಲಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾಯ್ದೆ ತಿದ್ದುಪಡಿ ಮಾಡಿವೆ. ಆದರೆ ಕಾಂಗ್ರೆಸ್ ನಾಯಕರು ರೈತರಲ್ಲಿ ತಪ್ಪು ತಿಳಿವಳಿಕೆ ನೀಡುತ್ತಿದ್ದಾರೆ. ವಿರೋಧಿಗಳ ಮಾತು ಕೇಳಿ ರೈತ ಮುಖಂಡರು ಪ್ರತಿಭಟನೆಗೆ ಮುಂದಾಗಿದ್ದಾರೆಂದರು.
ಕಾಯ್ದೆ ತಿದ್ದುಪಡಿ ಬಗ್ಗೆ ಈಗಾಗಲೇ ರಾಜ್ಯಾದ್ಯಂತ ಜಾಗೃತಿ ಮೂಡಿಸಲಾಗಿದೆ. ನಾಳೆ ನಡೆಯುವ ಕರ್ನಾಟಕ ಬಂದ್ ಮುಷ್ಕರ ಹಿಂಪಡೆಯಬೇಕು. ರೈತ ಸಂಘಟನೆ ಮುಖಂಡರಲ್ಲಿ ನಾನು ಮನವಿ ಮಾಡುತ್ತೇನೆ ಎಂದರು.
ಭೂ ಸುಧಾರಣೆ ಕಾಯ್ದೆ ಬಗ್ಗೆ ರೈತರಲ್ಲಿ ತಪ್ಪು ತಿಳುವಳಿಕೆಗಳಿವೆ. ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಬಿಜೆಪಿ ಕೃಷಿ ಮೋರ್ಚಾ ಮಾಡುತ್ತಿದೆ. ರೈತರ ಏಳ್ಗೆಯೇ ನಮ್ಮ ಉದ್ದೇಶ. ರೈತರ ಹೆಸರಲ್ಲೇ ನಾವು ಅಧಿಕಾರಕ್ಕೆ ಬಂದಿದ್ದೇವೆ. ರೈತರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭರವಸೆ ನೀಡಿದರು.