ಡಿಸಿಎಂ ಸವದಿಗೆ ಟಿಕೆಟ್ ಕೊಟ್ರೆ ನನಗೂ ಕೊಡಿ: ರಾಜು ಕಾಗೆ ಪಟ್ಟು
ಬೆಳಗಾವಿ, ಸೆಪ್ಟೆಂಬರ್ 24: ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ರಾಜು ಕಾಗೆ ಬಂಡಾಯದ ಬಾವುಟ ಹಾರಿಸುವ ಮುನ್ಸೂಚನೆ ನೀಡಿದ್ದಾರೆ. ಡಿಸಿಎಂ ಲಕ್ಷ್ಮಣ್ ಸವದಿ ಅವರಿಗೆ ಟಿಕೆಟ್ ನೀಡಿದರೆ ನನಗೂ ನೀಡಲೇಬೇಕು ಎಂದು ಪಟ್ಟುಹಿಡಿದಿದ್ದಾರೆ. ಜೊತೆಗೆ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಅವರಿಗೆ ಟಿಕೆಟ್ ನೀಡಿದರೆ ತಾವು ಬಂಡಾಯ ಅಭ್ಯರ್ಥಿಯಾಗುವುದಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಇದರಿಂದ ಟಿಕೆಟ್ ಹಂಚಿಕೆ ವಿಚಾರ ಕಮಲ ಪಕ್ಷಕ್ಕೆ ಕಸಿವಿಸಿ ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ರಾಜು ಕಾಗೆ 32,942 ಮತಗಳ ಅಂತರದಿಂದ ಸೋಲುಂಡಿದ್ದರು. ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಾಗವಾಡ ಕ್ಷೇತ್ರದಿಂದ ಸ್ಪರ್ಧಿಸಿ ಕಾಗೆ ವಿರುದ್ಧ ಜಯಗಳಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಅನರ್ಹತೆಗೆ ಒಳಗಾಗಿದ್ದಾರೆ.
ಕಾಗವಾಡ ಉಪ ಚುನಾವಣೆ; ಬಿಜೆಪಿಗೆ ಟಿಕೆಟ್ ಹಂಚಿಕೆಯೇ ತಲೆನೋವು!
ಉಪಚುನಾವಣೆಯಲ್ಲಿ ಬಿಜೆಪಿ ಕಾಗವಾಡ ಕ್ಷೇತ್ರಕ್ಕೆ ಶ್ರೀಮಂತ ಪಾಟೀಲರಿಗೆ ಮಣೆ ಹಾಕಿದೆ. ಒಂದು ವೇಳೆ ಅನರ್ಹತೆಯ ವಿಚಾರಣೆಯಲ್ಲಿ ವ್ಯತಿರಿಕ್ತವಾದರೆ ಅವರ ಮಗ ಶ್ರೀನಿವಾಸ್ ಪಾಟೀಲ್ ಗೆ ಬಿಜೆಪಿ ಟಿಕೇಟ್ ನೀಡುವ ಸಾಧ್ಯತೆ ಇದೆ.
ಬಿಜೆಪಿಯ ಈ ನಡೆ ರಾಜು ಕಾಗೆಯ ಅಸಮಾಧಾನಕ್ಕೆ ಕಾರಣವಾಗಿದ್ದು, ಇಂದು ಉಗಾರ ಗ್ರಾಮದಲ್ಲಿ ಅಭಿಮಾನಿಗಳ ಸಭೆಯ ಮೂಲಕ ಬಂಡಾಯದ ಮುನ್ಸೂಚನೆ ನೀಡಿದ್ದಾರೆ. "ಹಲವು ವರ್ಷಗಳಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದೇನೆ. ಏಕಾಏಕಿ ಅನ್ಯಾಯವಾದರೆ ಹೇಗೆ ಸಹಿಸಿಕೊಂಡು ಸುಮ್ಮನಿರಬೇಕು. ನಾನು ಮಠದ ಸ್ವಾಮಿಯೂ ಅಲ್ಲ, ಬ್ರಹ್ಮಚಾರಿಯೂ ಅಲ್ಲ. ಶ್ರೀಂಮತ ಪಾಟೀಲ್ ಅವರಿಗೆ ಟಿಕೇಟ್ ಹೇಗೆ ಕೊಡುತ್ತಾರೋ ಎಂದು ನಾನು ನೋಡುತ್ತೇನೆ ಎಂದು ರಾಜು ಕಾಗೆ ಬಿಜೆಪಿಗೆ ಸವಾಲು ಹಾಕಿದ್ದಾರೆ.
ಅನರ್ಹ ಶಾಸಕರಿಗೆ ಮಾತು ಕೊಟ್ಟ ಸಿಎಂ ಯಡಿಯೂರಪ್ಪ
ಚುನಾವಣೆಯಲ್ಲಿ ಗೆಲ್ಲದಿದ್ದರೂ ಲಕ್ಷ್ಮಣ್ ಸವದಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಈ ಕಾರಣದಿಂದ ಅನರ್ಹ ಶಾಸಕ ಮಹೇಶ್ ಕಮಟಳ್ಳಿ ಕ್ಷೇತ್ರದಲ್ಲಿ ಸವದಿ ಅವರನ್ನು ಕಣಕ್ಕಿಳಿಸುವ ಮೂಲಕ ಅವರನ್ನು ಗೆಲ್ಲಿಸುವ ಲೆಕ್ಕಾಚಾರ ಬಿಜೆಪಿಯಲ್ಲಿ ನಡೆದಿದೆ. "ನಾನೂ ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದೇನೆ. ನನಗೇಕೆ ಟಿಕೆಟ್ ಇಲ್ಲ. ಸವದಿ ಅವರಿಗೆ ಟಿಕೆಟ್ ನೀಡಿದರೆ, ನನಗೂ ಟಿಕೆಟ್ ನೀಡಲೇಬೇಕು ಎಂದ ಪಟ್ಟು ಹಿಡಿದಿದ್ದಾರೆ. ಇದರಿಂದ ಹೇಗಾದರೂ ಮಾಡಿ ಉಪ ಚುನಾವಣೆಯಲ್ಲಿ ಸ್ಪಷ್ಟ ಬಹುಮತಕ್ಕೆ ಬೇಕಾದಷ್ಟು ಸ್ಥಾನಗಳನ್ನು ಹೊಂದಿ ತಾವು ಸಿಎಂ ಆಗಿ ಮುಂದುವರೆಯಬೇಕು ಎನ್ನುವ ಬಿಎಸ್ವೈ ಲೆಕ್ಕಾಚಾರಕ್ಕೆ ರಾಜು ಕಾಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯೇ ಹೆಚ್ಚು ಎನ್ನುವುದು ಈ ಭಾಗದಲ್ಲಿನ ರಾಜಕೀಯ ಪರಿಣಿತರ ಲೆಕ್ಕಾಚಾರ.