ಬೆಳಗಾವಿಯಲ್ಲಿ ಭಯಂಕರ ಮಳೆ; ಚಿತ್ರ ನೋಡಿ...
ಬೆಳಗಾವಿ, ಆಗಸ್ಟ್ 7: ಬೆಳಗಾವಿಯಲ್ಲಿ ಮಳೆರಾಯನ ರೌದ್ರಾವತಾರ ಮುಂದುವರಿದಿದೆ. ಜಿಲ್ಲೆಯಾದ್ಯಂತ ಇಂದೂ ಭಾರೀ ಮಳೆಯಾಗಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಗೋಕಾಕ ತಾಲೂಕಿನ ಮೆಳವಂಕಿ ಗ್ರಾಮ ಪೂರ್ಣ ಜಲಾವೃತವಾಗುತ್ತಿದೆ. ನೂರಕ್ಕೂ ಅಧಿಕ ಜನರು ಗ್ರಾಮದಲ್ಲಿದ್ದಾರೆ. ಆದರೆ ರಕ್ಷಣಾ ಕಾರ್ಯ ಮಾತ್ರ ನಡೆಯುತ್ತಿಲ್ಲ. ಕಂಗಾಲಾದ ಜನ ಸಹಾಯ ಹಸ್ತಕ್ಕೆ ಕಾಯುತ್ತಿದ್ದಾರೆ.
ಕಾರವಾರದಲ್ಲೂ ಬಿರುಸಾಗಿದೆ ಮಳೆ; ನೆರೆಗೆ ನೂರಾರು ಮನೆಗಳು ಜಲಾವೃತ, ಇಬ್ಬರ ಸಾವು
ರಸ್ತೆ, ಹೊಲ, ಗದ್ದೆ ಎಲ್ಲಿ ನೋಡಿದರೂ ಕಾಣುತ್ತಿರುವುದು ಬರೀ ನೀರೇ. ಮಳೆ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದ ಜನ, ಈಗ ಮಳೆ ಯಾವಾಗ ನಿಲ್ಲುತ್ತದೆ ಎಂದು ಕಾಯುತ್ತಿದ್ದಾರೆ. ಮತ್ತೆ ಮೊದಲಿನಂತೆ ಬದುಕು ನಡೆದರೆ ಸಾಕು ಎಂದು ಬಯಸುತ್ತಿದ್ದಾರೆ. ಬೆಳಗಾವಿಯ ಮಳೆಯ ಭಯಾನಕತೆಯನ್ನು ತೋರುವ ಸಾಕಷ್ಟು ಘಟನೆಗಳು ಇಲ್ಲಿವೆ.
ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ
ಬೆಳಗಾವಿ ಜಿಲ್ಲೆಯಲ್ಲಿ ಹೈ ಅರ್ಲಟ್ ಘೋಷಿಸಲಾಗಿದೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 4 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬರಲಿದೆ. ಅದೇ ರೀತಿ ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳು ಉಕ್ಕಿ ಹರಿಯುತ್ತಿವೆ.
ಹಿಡಕಲ್ ಜಲಾಶಯದಿಂದ 90 ಸಾವಿರ ಕ್ಯೂಸೆಕ್ ಹಾಗೂ ನವಿಲು ತೀರ್ಥ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.
ಅಥಣಿ, ಚಿಕ್ಕೋಡಿ, ರಾಯಬಾಗ, ನಿಪ್ಪಾಣಿ, ಕಾಗವಾಡ, ಹುಕ್ಕೇರಿ, ಗೋಕಾಕ, ಮೂಡಲಗಿ, ಸವದತ್ತಿ, ರಾಮದುರ್ಗ ತಾಲೂಕಿನ ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ಬೆಳಗಾವಿ ಜಿಲ್ಲಾಡಳಿತದಿಂದ 24 ಗಂಟೆಗಳ ಕಾಲ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ.
ಪೆಟ್ರೋಲ್ ಗಾಗಿ ಗಂಟೆಗಟ್ಟಲೆ ಕಾದ ಜನ
ಮಳೆಯಿಂದಾಗಿ ಗೋಕಾಕ್ ನಗರ ಅರ್ಧದಷ್ಟು ಜಲಾವೃತವಾಗಿದೆ. ಹೀಗಾಗಿ ನಗರದ ಬಹುತೇಕ ಪೆಟ್ರೋಲ್ ಬಂಕ್ ಬಂದ್ ಆಗಿವೆ. ಪೆಟ್ರೋಲ್, ಡೀಸೆಲ್ ಗಾಗಿ ಜನರು ಪರದಾಡುತ್ತಿದ್ದು, ಒಂದೇ ಪೆಟ್ರೋಲ್ ಪಂಪ್ ತೆರೆದಿದೆ. ಅದಕ್ಕೇ ಜನ ಮುಗಿ ಬಿದ್ದಿದ್ದಾರೆ.
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಉರುಳಿದ ಮರ; ವಾಹನ ಸಂಚಾರ ಬಂದ್
ಮೇವಿಗಾಗಿ ತಳ್ಳಾಟ, ನೂಕು ನುಗ್ಗಲು
ಬೆಳಗಾವಿ ಜಿಲ್ಲೆಯ ಸದಲಗಾದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಸದಲಗಾ ಸೇರಿದಂತೆ ಹಲವು ಗ್ರಾಮಗಳ ಜನರು ಇದ್ದಾರೆ. ಕಳೆದ ಮೂರು ದಿನಗಳಿಂದ ಮೇವು ಇಲ್ಲದೇ ಉಪವಾಸ ಇದ್ದ ಜಾನುವಾರುಗಳಿಗಾಗಿ ಮೇವನ್ನು ತರಿಸಲಾಗಿತ್ತು. ಆದರೆ 600 ಜಾನುವಾರುಗಳಿಗೆ ಒಂದೇ ಲೋಡ್ ಮೇವು ಬಂದಿತ್ತು.
ಹೀಗಾಗಿ ಜನರು ಮೇವಿಗಾಗಿ ನೂಕುನುಗ್ಗಲಿನಲ್ಲಿ ಮುಗಿಬಿದ್ದಿದ್ದರು. ಮೇವು ಹಂಚಿಕೆ ಮಾಡುವಲ್ಲಿ ಚಿಕ್ಕೊಡಿ ತಾಲೂಕಿನ ಆಡಳಿತ ವಿಫಲವಾಗಿದೆ.
ಪತ್ತೆಗೆ ಮುಂದಾಗದ ಪೊಲೀಸರ ವಿರುದ್ಧ ಆಕ್ರೋಶ
ಬಳ್ಳಾರಿ ನಾಲೆಯಲ್ಲಿ ಕೊಚ್ಚಿಹೋದ ಯುವಕನ ಪತ್ತೆಗೆ ಮುಂದಾಗದ ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತದ ವಿರುದ್ಧ ಜನರು ಕಿಡಿಕಾರಿದ್ದಾರೆ.
ನಾಲ್ಕು ದಿನಗಳ ಹಿಂದೆ ಅಂಕಲಗಿ ಗ್ರಾಮದ ಬಳಿಯ ಬಳ್ಳಾರಿ ನಾಲೆಯಲ್ಲಿ ಶಿವಾನಂದ ನಾಯಿಕ (25) ಎಂಬ ಯುವಕ ಕೊಚ್ಚಿಕೊಂಡು ಹೋಗಿದ್ದ. ಈ ಕುರಿತು ಅಂಕಲಗಿ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಪೊಲೀಸರು ಹಾಗೂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.