ಮಹಾರಾಷ್ಟ್ರದಲ್ಲಿ ಮತ್ತೆ ಮಳೆ; ಉತ್ತರ ಕರ್ನಾಟಕದಲ್ಲಿ ಆರಂಭವಾಗಿದೆ ಪ್ರವಾಹ
ಬೆಳಗಾವಿ, ಸೆಪ್ಟೆಂಬರ್ 9: ಮಹಾರಾಷ್ಟ್ರದಲ್ಲಿ ಭಾರೀ ಮಳೆ ಮುಂದುವರೆದಿದೆ. ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹೊರಬಿಡುತ್ತಿರುವುದರಿಂದ ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಕಾಣಿಸಿಕೊಳ್ಳುತ್ತಿದೆ.
ಬೆಳಗಾವಿಯಲ್ಲೂ ಮಳೆಯಾಗುತ್ತಿದ್ದು, ಬೆಳಗಾವಿ ಗಡಿಯ ಚೋರ್ಲಾ ಘಾಟ್ ನಲ್ಲಿ ಗುಡ್ಡ ಕುಸಿತ ಉಂಟಾಗಿ ರಸ್ತೆ ಮೇಲೆ ಬೃಹತ್ ಬಂಡೆಗಲ್ಲುಗಳು ಉರುಳಿ ಬಿದ್ದಿವೆ. ಕುಸಿಯುತ್ತಿರುವ ರಸ್ತೆಯಿಂದಾಗಿ ವಾಹನಗಳು ಮುಂದೆ ಸಾಗದೇ ಅಲ್ಲಲ್ಲೇ ನಿಲ್ಲುವಂತಾಗಿದೆ. ಜೆಸಿಬಿ ಬಳಸಿ ರಸ್ತೆ ತೆರವುಗೊಳಿಸುತ್ತಿರುವ ಕಾರ್ಯ ನಡೆಯುತ್ತಿದ್ದರೂ, ಜೀವಭಯದಿಂದ ಯಾರೂ ಸಂಚರಿಸದಾಗಿದೆ. ಅತೀವ ಮಳೆಯಿಂದಾಗಿ ಭೂಕುಸಿತವಾಗುತ್ತಿದ್ದು, ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.
ದೂಧ್ ಸಾಗರ್- ಸೋನಾಲಿಯಂ ಮಧ್ಯೆ ರೈಲು ಹಳಿ ಮೇಲೆ ಗುಡ್ಡ ಕುಸಿತ
ಬೆಳಗಾವಿಯ ಸವದತ್ತಿಯ ಮಲಪ್ರಭಾ ಜಲಾಶಯದಿಂದ 21 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ರಾಮದುರ್ಗದ ಹಳ್ಳಿಗಳಿಗೆ ನೀರು ನುಗ್ಗಿದೆ. ರಾಮದುರ್ಗ ತಾಲ್ಲೂಕಿನ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಸುನ್ನಾಳ ಸರಕಾರಿ ಶಾಲೆ ಸೇರಿದಂತೆ ಮನೆಗಳಿಗೆ ನೀರು ನುಗ್ಗಿದ್ದು, ನದಿಪಾತ್ರದ ಜನ ಹಾಗೂ ಜಾನುವಾರುಗಳ ಸ್ಥಳಾಂತರ ಕಾರ್ಯ ಪ್ರಾರಂಭವಾಗಿದೆ.
ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವ ಕಾರಣದಿಂದ, ಕೃಷ್ಣಾ ನದಿ ಪ್ರವಾಹಕ್ಕೆ ಯಾದಗಿರಿಯಲ್ಲಿನ ಕೊಳ್ಳೂರು ಸಂಪರ್ಕ ಸೇತುವೆ ಜಲಾವೃತವಾಗಿದೆ. ಯಾದಗಿರಿ- ರಾಯಚೂರು ಸಂಪರ್ಕ ಕಲ್ಪಿಸುವ ಕೊಳ್ಳೂರು ಸೇತುವೆ ಮೇಲೆ ನೀರು ಹರಿಯಲು ಆರಂಭವಾಗಿದೆ. ಹೀಗಾಗಿ ಕಳೆದ ತಿಂಗಳು ಕೃಷ್ಣಾ ನದಿ ಪ್ರವಾಹಕ್ಕೆ ಮುಳುಗಿದ ಸೇತುವೆ ಈಗ ಮತ್ತೆ ಮುಳುಗಡೆಯಾಗಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ಮಹಾರಾಷ್ಟ್ರದಲ್ಲಿ ಮಳೆಯ ರೆಡ್ ಅಲರ್ಟ್, ಕರ್ನಾಟಕಕ್ಕೂ ಸಂಕಷ್ಟ
ಭೀಮಾ ನದಿ ತೀರದ ಕಂಗಳೇಶ್ವರ ದೇವಸ್ಥಾನ, ವೀರಾಂಜನೇಯ ಮಂದಿರವೂ ಮುಳುಗಡೆಯಾಗಿದ್ದು, ಕೃಷ್ಣಾ, ಭೀಮಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಅಪಾಯಮಟ್ಟ ಮೀರಿ ಹರಿಯುತ್ತಿವೆ. ಹಂಪಿಹೋಳಿ ಗ್ರಾಮ ಸಂಪೂರ್ಣ ಮುಳುಗಡೆಯಾಗಿದ್ದು, ಜನರನ್ನು ಸ್ಥಳಾಂತರಿಸುವ ಕಾರ್ಯ ಮುಂದುವರೆದಿದೆ.