ಚಿತ್ರಗಳು: ಬೆಳಗಾವಿಯಲ್ಲಿ ಮತ್ತೆ ಮಳೆ; ಒಂದೇ ದಿನದಲ್ಲಿ ಪ್ರವಾಹದ ಭೀತಿ
Recommended Video
ಬೆಳಗಾವಿ, ಅಕ್ಟೋಬರ್ 21: ಜಿಲ್ಲೆಯಲ್ಲಿ ನಿನ್ನೆಯಿಂದ ಮತ್ತೆ ಜೋರು ಮಳೆಯಾಗುತ್ತಿದ್ದು, ಜನರಲ್ಲಿ ಆತಂಕ ಶುರುವಾಗಿದೆ. ಎರಡು ತಿಂಗಳ ಹಿಂದಷ್ಟೇ ಮಳೆಯಿಂದಾಗಿ ಸಾಕಷ್ಟು ಆಸ್ತಿ, ಪ್ರಾಣ ನಷ್ಟ ಸಂಭವಿಸಿದ್ದು, ಇದರಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.
ವಾಯುಭಾರ ಕುಸಿತ; ಕರಾವಳಿ, ಮಲೆನಾಡಲ್ಲಿ ಯೆಲ್ಲೊ ಅಲರ್ಟ್
ಭಾನುವಾರ ಆರಂಭವಾಗಿರುವ ಮಳೆ ಇಂದಿಗೂ ಮುಂದುವರೆಯುತ್ತಲೇ ಇದೆ. ಜಿಲ್ಲೆಯಲ್ಲಿ ಹಲವು ಗ್ರಾಮಗಳು ಜಲಾವೃತವಾಗುತ್ತಿದ್ದು, ಹಳ್ಳಕೊಳ್ಳಗಳು ಹರಿದು ರಸ್ತೆ ಸಂಪರ್ಕ ಕಡಿತಗೊಂಡಿವೆ.
ಗೋಡೆ ಬಿದ್ದು ವ್ಯಕ್ತಿ ಬಲಿ
ಖಾನಾಪುರ ತಾಲೂಕಿನ ಕಸಮಳಗಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ಮನೆಯೊಂದು ಕುಸಿದುಬಿದ್ದಿದೆ. ಮನೆಯೊಳಗಿದ್ದ ಲಿಯಾಕತ್ ಮಕಾನದಾರ (55) ಮೇಲೆ ಗೋಡೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಂಕೇಶ್ವರದಲ್ಲಿ ಧಾರಾಕಾರ ಮಳೆಯಿಂದಾಗಿ, ರಸ್ತೆಯಲ್ಲಿ ನಿಲ್ಲಿಸಿದ್ದ ಹಲವು ವಾಹನಗಳು ತೇಲಿ ಹೋಗಿವೆ. ಹಲವು ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳೆಲ್ಲ ಜಲಾವೃತವಾಗಿ, ಸಂಚಾರ ಅಸ್ತವ್ಯಸ್ತವಾಗಿದೆ.
ಮತ್ತೆ ಪ್ರವಾಹ, ಮನೆಗಳಿಗೆ ನುಗ್ಗಿದ ನೀರು
ರಾಮದುರ್ಗದ ಚಿಕ್ಕಹಂಪಿಹೊಳಿ, ಹಿರೇಹಂಪಿಹೊಳಿ ಸೇರಿದಂತೆ ಹಲವು ಹಳ್ಳಿಗಳು ಪ್ರವಾಹಕ್ಕೆ ತತ್ತರಿಸಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಂಟಮೂರಿ ಬಳಿ ನೀರು ತುಂಬಿ ಕೆಲವು ಸಮಯ ಸಂಚಾರ ಸ್ಥಗಿತಗೊಳಿಸಲಾಗಿತ್ತು. ವಾಹನಗಳು ಕಿಲೋಮೀಟರ್ ವರೆಗೆ ಸಾಲು ಹಚ್ಚಿ ನಿಂತಿದ್ದವು.
ಚಿತ್ರಗಳು : ಉಡುಪಿಯಲ್ಲಿ ದಿಢೀರ್ ಮಳೆ; ಕೊಚ್ಚಿ ಹೋದ ರಸ್ತೆ
ಇನಾಮಹೊಂಗಲ ಬಳಿಯ ಸೇತುವೆ ಮುಳಗಡೆ
ಸವದತ್ತಿ ತಾಲೂಕಿನ ಇನಾಮಹೊಂಗಲ ಬಳಿ ತುಪರಿ ಹಳ್ಳಕ್ಕೆ ನಿರ್ಮಿಸಲಾಗಿದ್ದ ಸೇತುವೆ ಮಳೆಯಿಂದಾಗಿ ಮುಳುಗಡೆಯಾಗಿದೆ. ಮಳೆಯ ರಭಸಕ್ಕೆ ಹಳ್ಳಕ್ಕೆ ನೀರು ಹರಿದು ಬಂದಿದ್ದು, ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ. ಸವದತ್ತಿ ಧಾರವಾಡ ರಸ್ತೆ ಸಂಚಾರ ಮತ್ತೆ ಸ್ಥಗಿತವಾಗಿದೆ.
ಸವದತ್ತಿ ತಾಲೂಕಿನ ಹೊಸೂರ ಗ್ರಾಮದ ಬಳಿ ಸೇತುವೆ ಮುಳುಗಡೆಗೊಂಡಿದ್ದು, ಮುನವಳ್ಳಿ- ಬೈಲಹೊಂಗಲ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪರ್ಕ ಕಡಿತಗೊಂಡಿದೆ. ಮುನವಳ್ಳಿ, ಗೊಂದಿ, ಕಾತ್ರಾಳ, ಯಕ್ಕುಂಡಿ, ಮಲ್ಲೂರ, ಸೋಗಲ ಕ್ಷೇತ್ರ, ಮಾಟೋಳ್ಳಿ ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ನೀರಿನಲ್ಲಿ ಶಾಲೆ ಮುಳುಗಡೆ
ಭಾರೀ ಮಳೆ ಹಿನ್ನೆಲೆಯಲ್ಲಿ ಮಲಪ್ರಭಾ ನದಿ ಒಳಹರಿವು ಮತ್ತೆ ಹೆಚ್ಚಳಗೊಂಡಿದ್ದು, ನವೀಲುತೀರ್ಥ ಜಲಾಶಯದಿಂದ 36094 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ರಾಮದುರ್ಗ ತಾಲೂಕಿನಲ್ಲಿ ಪ್ರವಾಹದ ಭೀತಿ ಹೆಚ್ಚಿದೆ. ಮಲಪ್ರಭಾ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಇಲ್ಲಿನ ಖಾಸಗಿ ಶಾಲೆಗೂ ನೀರು ನುಗ್ಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗದ ಪ್ರೇರಣಾ ಶಾಲೆ ಸೇರಿದಂತೆ ನದಿಪಾತ್ರದ ಗ್ರಾಮಗಳಿಗೆ ನೀರು ಸುತ್ತುವರೆಯುತ್ತಿದೆ. ರಾಮದುರ್ಗ, ಕಟಕೋಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಮಳೆ ಮುನ್ಸೂಚನೆ; ಕರಾವಳಿಯ 3 ಜಿಲ್ಲೆಗಳಲ್ಲಿ Yellow Alert
ನೀರಿನ ರಭಸಕ್ಕೆ ಕೊಚ್ಚಿಹೋದ ಸೇತುವೆ
ಬೈಲಹೊಂಗಲ ತಾಲೂಕಿನಲ್ಲೂ ಧಾರಾಕಾರ ಮಳೆ ಹಿನ್ನೆಲೆ ಹಿನ್ನೆಲೆ ಚಿಕ್ಕೋಪ್ಪ ಗ್ರಾಮದ ಬಳಿಯ ಸೇತುವೆ ಕೊಚ್ಚಿಕೊಂಡು ಹೋಗಿದೆ. ಹಳ್ಳದ ನೀರಿನ ರಭಸಕ್ಕೆ ಸೇತುವೆಗೆ ಹಾನಿಯಾಗಿದ್ದು, ಚಿಕ್ಕೋಪ್ಪದಿಂದ ಬೈಲಹೊಂಗಲ, ಅನಿಗೋಳ, ಹೊಸೂರಿಗೆ ಹೋಗುವ ಸಂಚಾರ ಸ್ಥಗಿತಗೊಂಡಿದೆ.