ಬೆಳಗಾವಿ: ಕೋತಿಯನ್ನು ಕೊಂದ ವ್ಯಕ್ತಿಯನ್ನು ಬಂಧಿಸಲು ಒತ್ತಾಯ
ಬೆಳಗಾವಿ, ಡಿಸೆಂಬರ್ 12: ಕೋತಿಯ ಸಾವಿಗೆ ಮರುಗಿದ ಜನ, ಕೋತಿಯನ್ನು ಗುಂಡಿಟ್ಟು ಕೊಂದ ವ್ಯಕ್ತಿಯನ್ನು ಬಂಧಿಸಬೇಕು ಎಂದು ಪ್ರತಿಭಟನೆ ನಡೆಸಿದ ಮಾನವೀಯ ಘಟನೆಯೊಂದು ನಿನ್ನೆ (ಡಿಸೆಂಬರ್ 12) ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ನಡೆದಿದೆ.
ನಿಪ್ಪಾಣಿಯ ನಿಲೇಶ ಕುರುಬೆಟ್ಟ(55) ಎಂಬುವರ ಮನೆಯ ಬಳಿ ತೊಂದರೆ ಕೊಡುತ್ತಿದ್ದ ಕೋತಿಯೊಂದನ್ನು ಆತ ಬಂದೂಕಿನಿಂದ ಶೂಟ್ ಮಾಡಿ ಕೊಂದುಬಿಟ್ಟಿದ್ದಾನೆ.
ಸತ್ತ ಕೋತಿಯ ಶವವನ್ನು ಪೊಲೀಸ್ ಠಾಣೆ ಬಳಿ ಎತ್ತೊಯ್ದ ನಿಪ್ಪಾಣಿ ಸಾರ್ವಜನಿಕರು ಪೊಲೀಸ್ ಠಾಣೆ ಮುಂದೆ ಕೋತಿ ಶವವಿಟ್ಟು, ಕೋತಿಯನ್ನು ಕೊಂದ ನಿಲೇಶ ಕುರುಬೆಟ್ಟ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡಿದ್ದಾರೆ.
ಮಾನವೀಯತೆ ಮರೆತು ಮೃಗದಂತೆ ವರ್ತಿಸಿದ ವ್ಯಕ್ತಿಯನ್ನು ಬಂಧಿಸಿ ಪ್ರಾಣಿ ಹಿಂಸೆ ಮಾಡುವ ವ್ಯಕ್ತಿಗಳಿಗೆ ಬುದ್ಧಿ ಕಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಆದರೆ ನಿಪ್ಪಾಣಿ ಪೊಲೀಸರು ಕೋತಿ ಕೊಲೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರತಿಭಟನಾಕಾರರಿಗೆ ಸಮಜಾಯಿಷಿ ನೀಡಿ ಕಳಿಸಿಬಿಟ್ಟಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ತಾವು ಪ್ರಕರಣವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವುದಾಗಿ ಹೇಳಿ ನುಣುಚಿಕೊಂಡಿದ್ದಾರೆ. ಆದರೆ ಇಂದು ಚಿಕ್ಕೋಡಿ ಅರಣ್ಯಾಧಿಕಾರಿ ಎಂ.ಬಿ.ಗಣಾಚಾರಿ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಧಿಕಾರಿಗಳ ಇಬ್ಬಂದಿತನದಿಂದ ಬೇಸತ್ತ ಪ್ರತಿಭಟನಾಕಾರರು ಹಿಡಿಶಾಪ ಹಾಕಿ ಕೊನೆಗೆ ಕೋತಿಯ ಅಂತ್ಯಕ್ರಿಯೆ ಮಾಡಿ ಪ್ರತಿಭಟನೆ ಕೈಬಿಟ್ಟಿದ್ದಾರೆ.