ರಾಮುಲು ಅವರನ್ನು ಡಿಸಿಎಂ ಮಾಡುತ್ತಾರೆ ಅಂತಾ ಅಂದ್ಕೊಂಡಿದ್ವಿ, ಆದ್ರೆ ಆಗ್ಲಿಲ್ಲ
ಬೆಳಗಾವಿ, ಅಕ್ಟೋಬರ್ 14: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಶ್ರೀರಾಮುಲು ಅವರನ್ನು ಡಿಸಿಎಂ ಮಾಡುತ್ತಾರೆ ಅಂದುಕೊಂಡಿದ್ವಿ. ಆದರೆ ರಾಮುಲು ಅವರನ್ನು ಬಿಟ್ಟು ಬೇರೆಯವರಿಗೆ ಅವಕಾಶ ನೀಡಿದ್ದಾರೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಸನ್ನಾನಂದಪುರಿ ಸ್ವಾಮೀಜಿ, ಶ್ರೀರಾಮುಲು ಅವರ ಖಾತೆ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಎಸ್ಟಿ ಸಮಾಜಕ್ಕೆ ಮೀಸಲಾತಿ ಸಂಬಂಧ ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ರಾಜಕೀಯದಲ್ಲಿ ಆದ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು. ಬಿಜೆಪಿ ಸರ್ಕಾರ ವಾಲ್ಮೀಕಿ ಸಮಾಜವನ್ನು ನಿರ್ಲಕ್ಷಿಸುತ್ತಿದೆ. ಈ ಸಂಬಂಧ ನಾನೇ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ನಾಯಕರ ಗಮನ ಸೆಳೆದಿದ್ದೇನೆ. ಎಸ್ಟಿ ಮೀಸಲಾತಿ ಹೆಚ್ಚಿಸಲು ಅ.20 ರಿಂದ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಸಿಎಂ ಯಡಿಯೂರಪ್ಪ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ
ವಾಲ್ಮೀಕಿ ಜಯಂತಿಗೂ ಮುನ್ನವೇ ನಮ್ಮ ಬೇಡಿಕೆ ಈಡೇರಬೇಕು. ಹಿಂದಿನ ಸಮ್ಮಿಶ್ರ ಸರ್ಕಾರ ಇದಕ್ಕಾಗಿ ಆಯೋಗ ರಚಿಸಿತ್ತು. ಆದರೆ ಬೇಡಿಕೆ ಈಡೇರುವ ಮುನ್ನವೇ ಸಮ್ಮಿಶ್ರ ಸರ್ಕಾರ ಪತನವಾಯಿತು. ಮೀಸಲಾತಿ ಹೆಚ್ಚಿಸಲು ನಮ್ಮ ಸಮಾಜದ ಜನಪ್ರತಿನಿಧಿಗಳೂ ಸಹ ಸಿಎಂ ಬಳಿ ಮನವಿ ಮಾಡಿದ್ದಾರೆ ಎಂದು ಹೇಳೀದರು. ವರದಿ ಬಂದ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಿಎಂ ಹೇಳಿದ್ದರು, ಆದರೆ ವರದಿ ಬಂದು 3 ತಿಂಗಳು 13 ದಿನಗಳಾದರೂ ಸಿಎಂ ಯಡಿಯೂರಪ್ಪ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ರಾಜ್ಯಾದ್ಯಂತ 10 ದಿನ ಧರಣಿ ನಡೆಸುತ್ತಿದ್ದೇವೆ. ಬಳಿಕ ಬೆಂಗಳೂರು ಚಲೋ ಹೋರಾಟ ಆರಂಭಿಸುತ್ತೇವೆ, ಸಿಎಂ ಬಳಿ ನಿಯೋಗ ತೆರಳಿ ಮನವಿ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಶೇ.3 ರಿಂದ ಶೇ.7.5ಕ್ಕೆ ಹೆಚ್ಚಿಸಬೇಕು
ದೇಶದಲ್ಲಿ 50 ಲಕ್ಷದಷ್ಟು ವಾಲ್ಮೀಕಿ ಸಮುದಾಯದವರು ನೆಲೆಸಿದ್ದಾರೆ. ಎಸ್ಟಿ ಮೀಸಲಾತಿಯಿಂದ ರಾಜ್ಯದಲ್ಲಿ 15 ಶಾಸಕರು, ಇಬ್ಬರು ಸಂಸದರು ಆಯ್ಕೆ ಆಗಿದ್ದಾರೆ. ಔದ್ಯೋಗಿಕವಾಗಿ ಶೇ.3 ರಿಂದ ಶೇ.7.5ಕ್ಕೆ ಹೆಚ್ಚಿಸಬೇಕು ಎಂದು ದಶಕಗಳಿಂದ ಹೋರಾಡುತ್ತಿದ್ದೇವೆ.
ಸಮುದಾಯದ ಶಾಪ ಬಿಜೆಪಿ ಸರ್ಕಾರಕ್ಕೂ ತಟ್ಟಲಿದೆ
ನಮ್ಮ ಸಮಾಜವನ್ನು ಯಾಮಾರಿಸಲು ಇನ್ಮುಂದೆ ಯಾರಿಂದಲೂ ಆಗಲ್ಲ. ಎಸ್ಟಿ ಸಮಾಜಕ್ಕೆ ಮೀಸಲಾತಿ ಹೆಚ್ಚಿಸಲು ಹಿಂದಿನ ಸಮ್ಮಿಶ್ರ ಸರ್ಕಾರ ಹಿಂದೇಟು ಹಾಕಿತು. ಸಮಾಜದ ಶಾಪವೇ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಯಿತೆಂದರು.
ಲಿಂಗಸೂಗೂರಲ್ಲಿ ನಡೆದಿದ್ದ ಸಮಾವೇಶದಲ್ಲಿ ಎಸ್ಟಿ ಸಮಾಜಕ್ಕೆ ಮೀಸಲಾತಿ ಹೆಚ್ಚಿಸುವುದಾಗಿ ಯಡಿಯೂರಪ್ಪ ಘೋಷಿಸಿದ್ದರು. ಅಧಿಕಾರಕ್ಕೆ ಬಂದು ವರ್ಷ ಉರಳಿದ್ದು, ಮೀಸಲಾತಿ ಹೆಚ್ಚಿಸಿಲ್ಲ ಏಕೆ? ಎಂದು ಪ್ರಶ್ನಿಸಿದ ಸ್ವಾಮೀಜಿ, ಸಮುದಾಯದ ಶಾಪ ಬಿಜೆಪಿ ಸರ್ಕಾರಕ್ಕೂ ತಟ್ಟಲಿದೆ ಎಂದು ವಾಗ್ದಾಳಿ ನಡೆಸಿದರು.
ಅ.31ಕ್ಕೆ ಬೆಂಗಳೂರು ಚಲೋ
ಬೇಡ ಸಮಾಜದ ಶಕ್ತಿ ಕಾಂಗ್ರೆಸ್, ಜೆಡಿಎಸ್ ಗೆ ಗೊತ್ತಿದೆ. ಸಿಎಂ ಪ್ರತಿನಿಧಿಸುವ ಶಿಕಾರಿಪುರದಿಂದಲೇ ನಾನು ಸಮಾಲೋಚನೆ ಸಭೆಗೆ ಚಾಲನೆ ನೀಡಿದ್ದೇನೆ. ಮೀಸಲಾತಿ ಹೆಚ್ಚಿಸಲು ಆಗ್ರಹಿಸಿ ಅ.20 ರಿಂದ ಪ್ರೀಡಂ ಪಾರ್ಕ್ ನಲ್ಲಿ 10 ದಿನ ಧರಣಿ ನಡೆಸುತ್ತೇನೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅ.31ಕ್ಕೆ ಬೆಂಗಳೂರು ಚಲೋ ಆರಂಭಿಸಿ, ನಮ್ಮ ಸಾಂವಿಧಾನಿಕ ಹಕ್ಕು ಪಡೆಯಲು ಹೋರಾಡುತ್ತೇವೆ ಎಂದು ಬೆಳಗಾವಿಯಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿಕೆ ನೀಡಿದರು.