ಬೆಳಗಾವಿ: ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಮತ್ತೆ ಕಿರಿಕ್
ಬೆಳಗಾವಿ, ಜೂನ್ 01: ಕಾಂಗ್ರೆಸ್ನಲ್ಲಿ ಈಗ ಎಲ್ಲೆಲ್ಲೂ ಅಸಮಾಧಾನ ತಾಂಡವವಾಡುತ್ತಿದೆ. ಆದರೆ ಇದರ ಮೂಲ ಹುಡುಕಿದರೆ ಸಿಗುವುದು ಬೆಳಗಾವಿ. ಅಲ್ಲೇ ಮೊದಲಿಗೆ ಅಸಮಾಧಾನ ಹುಟ್ಟಿದ್ದು, ಈಗ ಮತ್ತೆ ಅಲ್ಲಿ ಅಸಮಾಧಾನ ಹೊಗೆ ಆಡುತ್ತಿದೆ.
ಕಾಂಗ್ರೆಸ್ನ ಹಿರಿಯ ಮುಖಂಡರ ಸಂಧಾನದ ಬಳಿಕ ಪರಸ್ಪರ ವೈರತ್ವ ಮರೆತಿದ್ದ ಸಚಿವ ಸತೀಶ್ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಡುವೆ ಮತ್ತೆ ಕೋಪದ ಕಿಡಿ ಹತ್ತಿದೆ.
ನರೇಂದ್ರ ಮೋದಿ ಮಂತ್ರಿ ಮಂಡಲದಲ್ಲಿ 'ಅಂಗಡಿ' ತೆರೆದ ಸುರೇಶ್
ಆಗ ಪಿಎಲ್ಡಿ ಬ್ಯಾಂಕ್ ಚುನಾವಣೆ ವಿಷಯಕ್ಕೆ ರಾಜ್ಯವೇ ನೋಡುವಂತೆ ಕಿತ್ತಾಡಿದ್ದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈಗ ನೀರಿನ ಯೋಜನೆ ವಿಷಯಕ್ಕೆ ವೈರತ್ವ ಸಾಧಿಸುತ್ತಿದ್ದಾರೆ. ಬೆಳಗಾವಿ ನಗರಕ್ಕೆ ನೀರಿನ ಯೋಜನೆ ಕುರಿತು ಇಬ್ಬರೂ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದು, ಇದೇ ಈ ಇಬ್ಬರೂ ಮುಖಂಡರ ನಡುವೆ ಮತ್ತೆ ಅಸಮಾಧಾನ ಉಂಟಾಗುವಂತೆ ಮಾಡಿದೆ.
ಬೆಂಗಳೂರಲ್ಲಿ ರಮೇಶ್ ಜಾರಕಿಹೊಳಿ ಸರಣಿ ಸಭೆ, ಮಹೇಶ್ ಕಮಟಳ್ಳಿ ಭೇಟಿ!
ರೈತರ ಪರ ನಿಂತಿರುವ ಲಕ್ಷ್ಮಿ ಹೆಬ್ಬಾಳ್ಕರ್
ನೀರಿನ ಯೋಜನೆಗೆ ಭೂಮಿ ನೀಡಿದ ರೈತರ ಪರ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಿಂತಿದ್ದು, ರೈತರು ಕಳೆದುಕೊಂಡ ಭೂಮಿಗೆ ಸೂಕ್ತ ಪರಿಹಾರವನ್ನು ಸರ್ಕಾರ ನೀಡಿಲ್ಲವೆಂದು ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ಆದರೆ ಸಚಿವ ಸತೀಶ್ ಜಾರಕಿಹೊಳಿ ಅವರು ಈ ವಿಷಯದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ನಿಲವು ತಳೆದಿದ್ದಾರೆ.
ಡಿಸಿ ಬದಲಾದರೆ ನ್ಯಾಯ ಕೊಡಿಸುವೆ: ಲಕ್ಷ್ಮಿ
ಲಕ್ಷ್ಮಿ ಹೆಬ್ಬಾಳ್ಕರ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದ್ದು, ಸರ್ಕಾರಿ ಅಧಿಕಾರಿಗಳ ಸಭೆಯಲ್ಲಿ ಕುರ್ಚಿಗಳನ್ನು ಮುರಿದು ಆಕ್ರೋಶ ಹೊರಹಾಕಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಡಿಸಿ ಬದಲಾದರೆ ರೈತರಿಗೆ ನಾನು ನ್ಯಾಯ ಕೊಡಿಸುತ್ತೇನೆ ಎಂದಿದ್ದರು.
2009ರಲ್ಲಿಯೇ ಭೂಮಿ ಒತ್ತುವರಿ ಆಗಿದೆ: ಸತೀಶ್
ಇದು ಸತೀಶ್ ಜಾರಕಿಹೊಳಿ ಅವರನ್ನು ಕೆರಳಿಸಿದ್ದು, ಭೂಮಿ ಒತ್ತುವರಿ 2009 ರಲ್ಲಿಯೇ ಆಗಿದೆ. ಪರಿಹಾರವೂ ಆಗಲೇ ಬಿಡುಗಡೆ ಆಗಿದೆ. ಈ ವಿಷಯದಲ್ಲಿ ಡಿಸಿ ಅಸಾಹಯಕರು, 'ಸರ್ಕಾರದಿಂದ ಅನ್ಯಾಯವಾಗಿದ್ದರೆ ಸಹಿಸಿಕೊಳ್ಳಬೇಕಷ್ಟೆ' ಎಂದಿದ್ದಾರೆ.
ತಮ್ಮದೇ ಸರ್ಕಾರದ ವಿರುದ್ಧ ಹೆಬ್ಬಾಳ್ಕರ್ ಪ್ರತಿಭಟನೆ
ಇದು ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಬೆಂಬಲಿಗರನ್ನು ಮತ್ತಷ್ಟು ಕೆರಳಿಸಿದ್ದು, ಸರ್ಕಾರವು ಭೂಮಿ ಕಳೆದುಕೊಂಡವರಿಗೆ ಕೇವಲ 3 ಲಕ್ಷ ಮಾತ್ರ ನೀಡುವುದಾದರೆ ನಾವು ಸರ್ಕಾರದ ವಿರುದ್ಧವೇ ಪ್ರತಿಭಟನೆ ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ.
ವಿಷಯ 2009ರಲ್ಲೇ ತೀರ್ಮಾನವಾಗಿದೆ
ಸತೀಶ್ ಜಾರಕಿಹೊಳಿ ಮಾಧ್ಯಮಗಳೊಂದಿಗೆ ಇಂದು ಮಾತನಾಡಿ, ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಈ ವಿಷಯ 2009ರಲ್ಲಿಯೇ ತೀರ್ಮಾನವಾಗಿದೆ. ಈಗಾಗಲೇ ಒಂದು ಬಾರಿ ರೈತರ ಪರಿಹಾರ ಹಣ ವಾಪಸ್ ಹೋಗಿದೆ, ಮತ್ತೊಮ್ಮೆ ಹೋದರೆ ಕಷ್ಟವಾಗುತ್ತದೆ, ಆಗ ಸ್ಥಳೀಯ ಶಾಸಕರು ರೈತರ ಕಷ್ಟ ತೀರಿಸುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.