ಡಿಸಿ ಮನೆಯಲ್ಲೇ ತಲೆಗೆ ಗುಂಡಿಕ್ಕಿಕೊಂಡು ಪೊಲೀಸ್ ಪೇದೆ ಆತ್ಮಹತ್ಯೆ
ಬೆಳಗಾವಿ, ಮೇ 6: ಬೆಳಗಾವಿ ಜಿಲ್ಲಾಧಿಕಾರಿ ನಿವಾಸದಲ್ಲಿ ಕರ್ತವ್ಯ ನಿರತ ಪೋಲಿಸ್ ಪೇದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ನಗರ ಮೀಸಲು ಸಶಸ್ತ್ರ ಪೊಲೀಸ್ ಪೇದೆ ಕಿತ್ತೂರ ತಾಲೂಕಿನ ಅಂಬಡಗಟ್ಟಿಯ ಪ್ರಕಾಶ್(30) ಮೃತಪಟ್ಟ ಪೊಲೀಸ್ ಪೇದೆಯಾಗಿದ್ದಾರೆ.
ವಿಶ್ವೇಶ್ವರಯ್ಯ ನಗರದಲ್ಲಿರುವ ಬೆಳಗಾವಿ ಜಿಲ್ಲಾಧಿಕಾರಿ ಎಸ್ಬಿ ಬೊಮ್ಮನಹಳ್ಳಿ ನಿವಾಸದಲ್ಲಿ ಈ ಘಟನೆ ನಡೆದಿದೆ. ಕರ್ತವ್ಯದ ವೇಳೆ ಸೆಕ್ಯೂರಿಟಿ ರೂಮ್ ನಲ್ಲಿ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಲೋಕೆಶ್ ಹಾಗೂ ಡಿಸಿ ಎಸ್ಬಿ ಬೊಮ್ಮನಹಳ್ಳಿ ಭೇಟಿ ಪರಿಶೀಲನೆ ನಡೆಸಿದರು.
ಸ್ಥಳಕ್ಕೆ ಬಂದಿದ್ದ ಪೇದೆ ಪ್ರಕಾಶ್ ತಾಯಿ ಆಕ್ರಂದನ ಮುಗಿಲು ಮುಟ್ಟಿತ್ತು. ಎರಡು ಮಕ್ಕಳಿರುವ ಪೇದೆ ಪ್ರಕಾಶ್ ಮನೆಗೆ ಹೋಗದೆ ಎರಡು ತಿಂಗಳಾಗಿತ್ತು. ಕೊರೊನಾದಿಂದ ನಿರಂತರ ಡ್ಯೂಟಿಯೇ ಪೊಲೀಸ್ ಪೇದೆಗೆ ಮುಳುವಾಯಿತಾ ಎಂಬ ಆರೋಪಗಳು ಪೊಲೀಸ್ ಪೇದೆ ಆತ್ಮಹತ್ಯೆಯಲ್ಲಿ ಕೇಳಿ ಬಂದಿದೆ.