ಕೊಲ್ಲಾಪುರ ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಸಚಿವರ ಬೆಂಬಲಿಗರು
ಬೆಳಗಾವಿ, ಆಗಸ್ಟ್, 13 : ಇಲ್ಲಿ ಬೇಲಿನೇ ಎದ್ದು ಹೊಲ ಮೇಯ್ದಿದೆ. ರಾಜ್ಯದ ಗಡಿಭಾಗದಲ್ಲಿ ರೇವ್ ಪಾರ್ಟಿ ನಡೆಸಲು ಹೋಗಿದ್ದ ಸಚಿವರ ನಿಕಟವರ್ತಿ, ಸೆಕ್ರೆಟರಿ ಹಾಗೂ ಗುತ್ತಿಗೆದಾರರು ಸೇರಿದಂತೆ 9 ಮಂದಿಯನ್ನು ಕೊಲ್ಹಾಪುರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಹೌದು..ರಾಜ್ಯದ ಸಚಿವರೊಬ್ಬರಿಗೆ ನಿಕಟವರ್ತಿ ಕಿರಣ್ ಸಿಂಗ್ ರಜಪೂತ್ (42) ಮತ್ತು ಸೆಕ್ರೆಟರಿ ನಾಗರಾಜ್ ಹನುಮಂತಯ್ಯ, ಶಿಕ್ಷಣ ಇಲಾಖೆಯ ಹೇಮಂತ್ ರಾಮೇಗೌಡ, ಅರುಣ್ ಎಂ. ಇಂದ್ರಶಂಕರ್ ಬಂಧಿತ ಆರೋಪಿಗಳು.[ಕ್ರಿಕೆಟರ್ಸ್, ಸಿನಿ ತಾರೆಯರ ಮೇಲೆ ಚಾರ್ಜ್ ಶೀಟ್]
ಆರೋಪಿಗಳನ್ನು ಬಂಧಿಸಿದ ಕೊಲ್ಲಾಪುರ ಪೊಲೀಸರು ಇವರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದ್ದು, ಆಗಸ್ಟ್ 14ರ ಶುಕ್ರವಾರದವರೆಗೆ ಪೊಲೀಸ್ ವಶಕ್ಕೆ ನೀಡಲಾಗಿದೆ.
ಏನಿದು ಘಟನೆ?
ಕೆಲವು ದಿನಗಳ ಹಿಂದೆ ಸಚಿವರ ಬೆಂಬಲಿಗರು ಒಂದು ಸಣ್ಣ ಪಾರ್ಟಿ ಮಾಡಲು ನಿರ್ಧರಿಸಿದ್ದರು. ಇದರ ಉಸ್ತುವಾರಿಯನ್ನು ಕೃಷಿ ಪರ್ಯಟನ ಕೇಂದ್ರದ ಮಾಲೀಕ ಇಂದ್ರ ಶಂಕರ್ ಅವರಿಗೆ ವಹಿಸಿಕೊಡಲಾಗಿತ್ತು. ಈತ ಕೊಲ್ಲಾಪುರ ಜಿಲ್ಲೆಯ ಇಂಜೋಲ್ ತೋಟದ ಮನೆಯಲ್ಲಿ ರೇವ್ ಪಾರ್ಟಿಗೆ ವ್ಯವಸ್ಥೆ ಮಾಡಿದ್ದನು.
ದಿಢೀರ್ ತೋಟದ ಮನೆಗೆ ಆಗಮಿಸಿದ ಪೊಲೀಸರು ರೇವ್ ಪಾರ್ಟಿ ನಡೆಯುತ್ತಿರುವುದನ್ನು ಕಂಡು ಕೂಡಲೇ ಕಾರ್ಯಪ್ರವೃತ್ತರಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಒಡಿಶಾ ಮೂಲದ ಮಹಿಳೆ ಸೇರಿದಂತೆ ಸಚಿವರ ಬೆಂಬಲಿಗರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸಚಿವರ ಬೆಂಬಲಿಗರ ಇಬ್ಬರು ಕಾರು ಚಾಲಕರು ತಲೆಮರೆಸಿಕೊಂಡಿದ್ದು, ಅವರ ಶೋಧನಾ ಕಾರ್ಯ ಮುಂದುವರೆದಿದೆ.
ಸಚಿವಾಲಯದಿಂದ ಕೆಲಸ ಮಾಡಿಸಿಕೊಳ್ಳುವ ಉದ್ದೇಶದಿಂದ ಅಧಿಕಾರಿಗಳಿಗೆ ರೇವ್ ಪಾರ್ಟಿ ಆಯೋಜಿಸಲಾಗಿತ್ತು ಎಂದು ಶಂಕಿಸಿದ ಪೊಲೀಸರು ಇವರ ಬಳಿ ಇದ್ದ ಹಣ, ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಒಟ್ಟು 16 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕರ್ನಾಟಕ ಸರ್ಕಾರ ರೇವ್ ಪಾರ್ಟಿ ಮೇಲೆ ನಿಷೇಧ ಹೇರಿದೆ. ಆದರೆ ಕರ್ನಾಟಕ ಗಡಿ ಭಾಗಗಳಲ್ಲಿ, ಗೋವಾ, ಮಹಾರಾಷ್ಟ್ರ ಇನ್ನಿತರ ಪ್ರದೇಶಗಳಲ್ಲಿ ರೇವ್ ಪಾರ್ಟಿಗಳು ಕಡಿಮೆಯಾಗಿಯೇ ಇಲ್ಲ.