ಚೆನ್ನಮ್ಮನ ಕಿತ್ತೂರಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸಿದ್ಧತೆ ಪೂರ್ಣ
ಬೆಳಗಾವಿ, ಮಾ.11: ಚೆನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಶುಕ್ರವಾರ (ಮಾ.12) ನಡೆಯಲಿರುವ ದೇಶದ ಸ್ವಾತಂತ್ರ್ಯ ಸಂಗ್ರಾಮದ ಐತಿಹಾಸಿಕ ಮಹತ್ವ ಸಾರುವ "ಸ್ವಾತಂತ್ರ್ಯದ ಅಮೃತ ಮಹೋತ್ಸವ' ಸಮಾರಂಭದ ವೇದಿಕೆ ಸಜ್ಜಾಗಿದೆ.
ದೇಶದ ಆಯ್ದ 75 ಸ್ಥಳಗಳಲ್ಲಿ ಏಕಕಾಲಕ್ಕೆ ನಡೆಯಲಿರುವ ಅಮೃತ ಮಹೋತ್ಸವವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ವರ್ಚುವಲ್ ವೇದಿಕೆ ಮೂಲಕ ಚಾಲನೆ ನೀಡಲಿದ್ದಾರೆ.
ಬೆಳಗಾವಿ; ಸ್ವಾತಂತ್ರ್ಯ ಸಂಗ್ರಾಮ ಅಮೃತ ಮಹೋತ್ಸವಕ್ಕೆ ಮೋದಿ ಚಾಲನೆ
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶಾಸಕ ಮಹಾಂತೇಶ್ ದೊಡ್ಡಗೌಡ್ರ ಹಾಗೂ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಗುರುವಾರ ಸಂಜೆ ಕಿತ್ತೂರಿಗೆ ಭೇಟಿ ನೀಡಿ ವೇದಿಕೆ ಮತ್ತಿತರ ಸಿದ್ಧತೆಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಹಾಂತೇಶ ದೊಡ್ಡಗೌಡ್ರ, ""ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಇತಿಹಾಸ ನೆನಪಿಸುವ ಕೆಲಸವನ್ನು ಪ್ರಧಾನಮಂತ್ರಿಗಳು ಮಾಡುತ್ತಿದ್ದಾರೆ. ಇಂದಿನ ಯುವಪೀಳಿಗೆಗೆ ಸ್ವಾತಂತ್ರ್ಯ ಸಂಗ್ರಾಮದ ಕುರಿತು ತಿಳಿಸಿಕೊಡಲು ಇದೊಂದು ಅವಕಾಶವಾಗಿದೆ'' ಎಂದರು.
ಬೆಳಗಾವಿ ಪಾಲಿಕೆ ಎದುರು ಭಗವಾ ಧ್ವಜ ನೆಡಲು ಎಂಇಎಸ್ ಯತ್ನ, ಹೈಡ್ರಾಮಾ
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಬಾರಿ ಬಜೆಟ್ನಲ್ಲಿ ಮುಖ್ಯಮಂತ್ರಿಗಳು 50 ಕೋಟಿ ರೂಪಾಯಿ ಅನುದಾನ ನೀಡಿರುವುದಕ್ಕೆ ಶಾಸಕ ಮಹಾಂತೇಶ ದೊಡ್ಡಗೌಡ್ರ ಸಂತಸ ವ್ಯಕ್ತಪಡಿಸಿ, ಚನ್ನಮ್ಮನ ನಾಡಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ, ''ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಿತ್ತೂರಿನಲ್ಲಿ ಸಮಾರಂಭ ಏರ್ಪಡಿಸಲಾಗಿದೆ. ಮುಂದಿನ 75 ವಾರಗಳ ಕಾಲ ಜಿಲ್ಲೆಯಾದ್ಯಂತ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾರಂಭದ ಉದ್ಘಾಟನೆ ಅಂಗವಾಗಿ ಮಾ.12 ರಂದು 75 ಸೈಕ್ಲಿಸ್ಟ್ ಗಳಿಂದ 75 ಕಿ.ಮೀ ಸೈಕಲ್ ಮೆರವಣಿಗೆ ನಡೆಯಲಿದೆ'' ಎಂದರು.
ಇದಲ್ಲದೇ ಮಾ.12 ರಂದು ಕಿತ್ತೂರಿನಲ್ಲಿ ನಡೆಯಲಿರುವ ಮುಖ್ಯ ಸಮಾರಂಭದ ಜತೆಗೆ ಬೆಳಗಾವಿ ನಗರದಲ್ಲಿ ಕಾಂಗ್ರೆಸ್ ಬಾವಿ(ವೀರಸೌಧ) ಆವರಣದಲ್ಲಿ ಮಹಾತ್ಮಾ ಗಾಂಧೀಜಿ ಛಾಯಚಿತ್ರ ಪ್ರದರ್ಶನ ಹಾಗೂ ನಗರದ ಸರದಾರ ಪ್ರೌಢಶಾಲೆಯಲ್ಲಿ ಸರದಾರ ವಲ್ಲಭಭಾಯಿ ಪಟೇಲ್ ಅವರ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಅದೇ ರೀತಿ ನಿಪ್ಪಾಣಿಯಲ್ಲಿ ಸುಭಾಷ್ ಚಂದ್ರ ಬೋಸ್ ಕುರಿತು ಪ್ರದರ್ಶನ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಸ್ವಾತಂತ್ರ್ಯ ಯೋಧರ ಪಟ್ಟಿ ಲಭ್ಯವಿದ್ದು, ಅವರ ಮನೆ ಮನೆಗಳಿಗೆ ತೆರಳಿ ಗೌರವಿಸಲಾಗುವುದು. ಸ್ಥಳೀಯ ಸ್ವಾತಂತ್ರ್ಯ ಯೋಧರ ಕುರಿತು ಕೂಡ ಪ್ರದರ್ಶನ ಏರ್ಪಡಿಸಲಾಗುವುದು ಎಂದರು. ನಿಗದಿತ ಕಾರ್ಯಕ್ರಮದ ಬಳಿಕ ವೇದಿಕೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾಧ್ಯವಾದರೆ ದೇಶಭಕ್ತಿ ನಾಟಕಗಳನ್ನು ಪ್ರದರ್ಶಿಸುವಂತೆ ಜಿಲ್ಲಾಧಿಕಾರಿ ಸೂಚಿಸಿ, ವೇದಿಕೆ ಸೇರಿದಂತೆ ಸಿದ್ಧತೆಗಳ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.