ಬೆಳಗಾವಿಯಲ್ಲಿ 'ಪೊಲೀಸರೊಂದಿಗೆ ಒಂದು ದಿನ'
ಬೆಳಗಾವಿ, ನ. 14: ನಗರದಲ್ಲಿ ಹೆಚ್ಚುತ್ತಿರುವ ಗಲಭೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬೆಳಗಾವಿ ಪೊಲೀಸ್ ಇಲಾಖೆ ಧನಾತ್ಮಕ ಹೆಜ್ಜೆ ಇಟ್ಟಿದೆ. ದುಷ್ಕರ್ಮಿಗಳ ಬಂಧಿಸುವ ಜತೆಗೆ ಜನರೊಂದಿಗೆ ಬೆರೆಯುವ ನಿಟ್ಟಿನಲ್ಲಿ ಬೆಳಗಾವಿ ಪೊಲೀಸ್ ಆಯುಕ್ತರು ಕಾರ್ಯಕ್ರಮ ರೂಪಿಸಿದ್ದಾರೆ.
ಈ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಿದ ಬೆಳಗಾವಿ ಪೊಲೀಸ್ ಆಯುಕ್ತ ಎಸ್. ರವಿ, ಪೊಲೀಸರನ್ನು ಜನಸ್ನೇಹಿಗಳನ್ನಾಗಿಸಲು 'ಪೊಲೀಸರೊಂದಿಗೆ ಒಂದು ದಿನ' ಕಾರ್ಯಕ್ರಮ ರೂಪಿಸಲಾಗಿದೆ. ಇದರ ಪ್ರಕಾರ ಸಾರ್ವಜನಿಕರೊಂದಿಗೆ ಪೊಲೀಸರು ಸಂವಾದ ನಡೆಸುವರು.
ಪೊಲೀಸರೇ ಸಾರ್ವಜನಿಕ ಸ್ಥಳಗಳಿಗೆ ತೆರಳಿ ಜನರೊಂದಿಗೆ ಬೆರೆತು ಚರ್ಚಿಸಿ, ಅವರ ಸಮಸ್ಯೆಗಳನ್ನು ಪರಿಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅವರಿಂದಲೇ ಸಲಹೆ ಪಡೆಯಲಾಗುವುದು. ಶಾಲೆ-ಕಾಲೇಜುಗಳಿಗೂ ಭೇಟಿ ನೀಡಲಿದ್ದಾರೆ. ಈ ಕುರಿತು ಪೊಲೀಸರು ಆಯುಕ್ತರಿಗೆ ವರದಿ ನೀಡಲಿದ್ದಾರೆ ಎಂದು ತಿಳಿಸಿದರು. [ಪ್ರೇಮ ವಿವಾಹಕ್ಕೆ ಸಾಕ್ಷಿ, ಬೆತ್ತಲೆಗೊಳಿಸಿ ಥಳಿತ]
ಅಲ್ಲದೆ, ಪೊಲೀಸರಿಗೆ ತಾಂತ್ರಿಕತೆಯ ಶಿಕ್ಷಣ ನೀಡಲಾಗಿದ್ದು, ಸಂಚಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಡಿ ಇಡಲಾಗಿದೆ. ಜನರೊಂದಿಗೆ ಪೊಲೀಸರು ಠಾಣೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗೌರವದಿಂದ ವರ್ತಿಸಲು ಸೂಚಿಸಲಾಗಿದೆ ಎಂದು ಎಸ್. ರವಿ ವಿವರಿಸಿದರು.
ಅಲ್ಲದೆ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಮಾಜ ವಿರೋಧಿ ವ್ಯಕ್ತಿಗಳ ತಪಾಸಣೆ ಹಾಗೂ ಅವರ ಮಾಹಿತಿ ಕಲೆ ಹಾಕಲಾಗುತ್ತಿದೆ. ಗೂಂಡಾಗಿರಿ ಪ್ರದರ್ಶಿಸುವ ವ್ಯಕ್ತಿಗಳನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿ ಗಡೀಪಾರು ಮಾಡಲಾಗುವುದು ಎಂದು ತಿಳಿಸಿದರು.