ಇನ್ಸುಲಿನ್ ಮರೆತು ಬೆಳಗಾವಿ ಏರ್ ಪೋರ್ಟ್ ನಲ್ಲಿ ಕಾದುಕುಳಿತ ಸಿದ್ದರಾಮಯ್ಯ
ಬೆಳಗಾವಿ, ಅಕ್ಟೋಬರ್ 19: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಗಳೂರಿನಿಂದ ಬಾದಾಮಿಗೆ ತೆರಳುವ ಅವಸರದಲ್ಲಿ ಮನೆಯಲ್ಲಿದ್ದ ಇನ್ಸುಲಿನ್ ಅನ್ನೇ ಮರೆತು ಬಂದಿದ್ದು, ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇನ್ಸುಲಿನ್ಗಾಗಿ ಕಾದು ಕುಳಿತುಕೊಳ್ಳುವಂತಾಯಿತು.
ಕೆಡಿಪಿ ಸಭೆ ಸೇರಿದಂತೆ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಬಾದಾಮಿಗೆ ತೆರಳಲು ಸಿದ್ದರಾಮಯ್ಯ ಆಗಮಿಸಿದ್ದರು. ಆದರೆ ಬೆಂಗಳೂರಿನಿಂದ ಬರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಇನ್ಸುಲಿನ್ ತೆಗೆದುಕೊಳ್ಳುವುದನ್ನು ಮರೆತು ಬಂದಿದ್ದಾರೆ. ಇದರಿಂದಾಗಿ ಒಂದು ಗಂಟೆಗೂ ಅಧಿಕ ಕಾಲ ಸಾಂಬ್ರಾ ವಿಮಾನ ನಿಲ್ದಾಣದಲ್ಲೇ ಕಾಲ ಕಳೆಯುವಂತಾಯಿತು..
ಉಪಚುನಾವಣೆ: ಕಾಂಗ್ರೆಸ್ಸಿಗೆ ಪೆಡಂಭೂತದಂತೆ ಕಾಡುತ್ತಿರುವ ಬಿಜೆಪಿಯ ಈ ಬ್ರಹ್ಮಾಸ್ತ್ರ
ಈ ಕುರಿತು ಮಾಹಿತಿ ನೀಡಿದ ರಾಮದುರ್ಗದ ಮಾಜಿ ಶಾಸಕ ಅಶೋಕ ಪಟ್ಟಣ ಅವರು, ಮಧುಮೇಹ ಕಾಯಿಲೆಗಾಗಿ ಸಿದ್ದರಾಮಯ್ಯ ಅವರು ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದರು. ಆದರೆ ಬೆಂಗಳೂರಿನಿಂದ ಬರುವಾಗ ಇನ್ಸುಲಿನ್ ಮರೆತು ಬಂದಿದ್ದಾರೆ. ಅವರು ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಬೆಳಗಾವಿ ನಗರದಿಂದ ಕಾಂಗ್ರೆಸ್ ಕಾರ್ಯಕರ್ತರು ಇನ್ಸುಲಿನ್ ತಂದು ನೀಡಿದ್ದರು. ಆದರೆ ಆ ಇನ್ಸುಲಿನ್ ತಾನು ತೆಗೆದುಕೊಳ್ಳುವುದಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದು, ಇನ್ಸುಲಿನ್ ತರಿಸಲು ಮಾಜಿ ಶಾಸಕ ಅಶೋಕ್ ಪಟ್ಟಣ್ ಹರಸಾಹಸ ಪಡುತ್ತಿದ್ದರು. ಕೆಲ ಕಾಲದ ನಂತರ ಕೊನೆಗೂ ಇನ್ಸುಲಿನ್ ದೊರೆತು ಸಿದ್ದರಾಮಯ್ಯ ಅವರು ಹೊರಟರು.