ಬೆಳಗಾವಿ ಸುವರ್ಣಸೌಧ ಅಧಿವೇಶನದ ಪ್ರಮುಖ ಬೆಳವಣಿಗೆಗಳು
ಆಡಳಿತ ಪಕ್ಷದ ಸಚಿವರ ಆಪ್ತ ಅಧಿಕಾರಿಗಳ ಮನೆ ಮೇಲೆ ನಡೆದ ದಾಳಿ ಕುರಿತು ಪ್ರತಿಪಕ್ಷಗಳು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಒಕ್ಕೊರಲಾಗಿ ಮುಗಿಬಿದ್ದವು.
ಬೆಳಗಾವಿ, ಡಿಸೆಂಬರ್, 2: ಬೆಂಗಳೂರಿನಲ್ಲಿ ನಡೆದ ಐಟಿ ದಾಳಿ ಸೇರಿದಂತೆ ಹಲವು ವಿಷಯಗಳ ಕುರಿತು ಇಂದು ಸದನದಲ್ಲಿ ಚರ್ಚೆಯಾಯಿತು. ಹಲವು ವಿಷಯಗಳ ಕುರಿತು ಸಚಿವರು ಸದನಕ್ಕೆ ಉತ್ತರಿಸಿದರು. ಇಂದಿನ ಅಂದಿ ವೇಶನದ ಪ್ರಮುಖ ಬೆಳವಣಿಗೆಗಳು
ಪ್ರತಿಪಕ್ಷಗಳ ಆಕ್ರೋಶ
ಬೆಂಗಳೂರಿನಲ್ಲಿ ಐಟಿ ದಾಳಿಯಿಂದ ರು.4.7ಕೋಟಿ ರು ಮೊತ್ತದ ಎರಡು ಸಾವಿರ ರೂ. ಮುಖಬೆಲೆಯ ನೋಟುಗಳು ಮತ್ತು 7 ಚಿನ್ನ ಹೊಂದಿರು ಇಬ್ಬರು ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದವು. [ಐಟಿ ದಾಳಿ: ಸದನದಲ್ಲಿ ಗದ್ದಲ, ಪರಂ- ಈಶ್ವರಪ್ಪ ವಾಗ್ದಾಳಿ]
ಅಧಿಕಾರಿಗಳ ಅಮಾನತು
ಪ್ರತಿಪಕ್ಷಗಳಿಗೆ ಉತ್ತರಿಸಿದ ಸಚಿವ ಪರಮೇಶ್ವರ್, ಅಕ್ರಮ ಹಣ ಹೊಂದಿದ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಪರಿಷತ್ ಗೆ ತಿಳಿಸಿದರು.
ನೈಸ್ ಹಗರಣ: ಸಿಬಿಐ ತನಿಖೆಗೆ ಶಿಫಾರಸು
ಬೆಂಗಳುರು- ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (ನೈಸ್) ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಈ ಕುರಿತು ಸಮಗ್ರ ತನಿಖೆ ಆಗಬೇಕೆಂದು ಜಂಟಿ ಸದನ ಸಮಿತಿ ಶಿಫಾರಸು ಮಾಡಿದೆ. ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಜಂಟಿ ಸದನ ಸಮಿತಿ ಶಿಫಾರಸ್ಸುಗಳನ್ನು ಮಂಡಿಸಿ ಮಾತನಾಡಿದರು.
ಗ್ರಾ.ಪಂ. ವಿದ್ಯುತ್ ಬಿಲ್ ಮನ್ನಾ ಇಲ್ಲ: ಸಚಿವ ಎಚ್. ಕೆ.ಪಾಟೀಲ್
ಮಾರ್ಚ್ 2016 ಅಂತ್ಯಕ್ಕೆ ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ 3997.49 ಕೋಟಿ ರೂ.ಗಳ ವಿದ್ಯುತ್ ಬಿಲ್ ಬಾಕಿ ಇದೆ. ಇದನ್ನು ಮನ್ನಾ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸಚಿವ ಎಚ್. ಕೆ.ಪಾಟೀಲ್ ಸದನಕ್ಕೆ ತಿಳಿಸಿದರು.
ರಾಯಚೂರಿನಲ್ಲಿ 13 ಕೈಗಾರಿಕೆಗಳ ಸ್ಥಾಪನೆ: ಸಚಿವ ದೇಶಪಾಂಡೆ
2013-14 ನೇ ಸಾಲಿನಿಂದ 2016 ರ ಸೆಪ್ಟೆಂಬರ್ 30 ರ ವರೆಗೆ ರಾಯಚೂರು ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಮತ್ತು ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿ ಸಭೆಗಳನ್ನು ಒಟ್ಟು 13 ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಎಂದು ಬೃಹತ್ ಮತ್ತು ಮಧ್ಯಮ ಕೈಗಾರಕೆ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.
ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ತಪ್ಪಿಸಲು ಕ್ರಮ: ಡಿ.ಕೆ. ಶಿವಕುಮಾರ್
ಬರಗಾಲ ಹಿನ್ನೆಲೆಯಲ್ಲಿ ಎಲ್ಲಾ ಕಡೆ ನೀರಿನ ಮಟ್ಟ ಕಡಿಮೆಯಾಗಿ ವಿದ್ಯುತ್ ಉತ್ಪಾದನೆ ಕಡಿತವಾಗಿದ್ದರೂ, ಬೇಸಿಗೆಯಲ್ಲಿ ಲೋಡ್ಶೆಡ್ಡಿಂಗ್ ತಪ್ಪಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ತಿಳಿಸಿದರು.
138.71 ಕೋಟಿ ರೂ. ಗ್ರಂಥಾಲಯ ಕರ ಸಂಗ್ರಹ : ಸಚಿವ ತನ್ವೀರ್ ಸೇಠ್
ರಾಜ್ಯದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಒಟ್ಟು 138.71 ಕೋಟಿ ರೂ.ಗಳ ಗ್ರಂಥಾಲಯ ಕರ ಸಂಗ್ರಹವಾಗಿದೆ ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ತನ್ವೀರ್ ಸೇಠ್ ತಿಳಿಸಿದರು.
ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ : ಸಚಿವ ತನ್ವೀರ್ ಸೇಠ್
ರಾಜ್ಯದಲ್ಲಿರುವ ಯಾವುದೇ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಕನ್ನಡ ಭಾಷೆ ಅಭಿವೃದ್ಧಿ ಮತ್ತು ಅದರ ಉಳಿವಿಗೆ ವಿವಿಧ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸ್ವಾಗತ ಸಮಿತಿ ಅಧ್ಯಕ್ಷ ತನ್ವೀರ್ ಸೇಠ್ ತಿಳಿಸಿದರು.
ಬಂಡವಾಳ ಹೂಡಿಕೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ : ಸಚಿವ ಆರ್ ವಿ ದೇಶಪಾಂಡೆ
ಕೇಂದ್ರ ಸರ್ಕಾರದ ವಾಣಿಜ್ಯ ಮಂತ್ರಾಲಯವು ಹೊರಡಿಸಿರುವ ಅಂಕಿ ಅಂಶಗಳಂತೆ 2016 ಜನವರಿಯಿಂದ ಸೆಪ್ಟೆಂಬರ್ ವರೆಗೆ ಕರ್ನಾಟಕ ರಾಜ್ಯಕ್ಕೆ 1.44 ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ಹರಿದು ಬಂದಿವೆ. ರಾಜ್ಯವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಆರ್. ವಿ. ದೇಶಪಾಂಡೆ ಅವರು ಸದನಕ್ಕೆ ತಿಳಿಸಿದರು.