ಕೆಪಿಸಿಸಿ ಅಧ್ಯಕ್ಷಗಾದಿ ಮೇಲೆ ಪ್ರಕಾಶ್ ಹುಕ್ಕೇರಿ ಟವಲ್
ಚಿಕ್ಕೋಡಿ, ಜೂನ್ 19-ಬೆಳಗಾವಿಯ ಅತ್ಯಂತ ಪ್ರಭಾವಿ ನಾಯಕ, ಕಾಂಗ್ರೆಸ್ಸಿನ ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಂಸರಾಗಿ ಆಯ್ಕೆಯಾದ ನಂತರ ಈಗೇನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಕೇಳಿದರೆ
ಕೆಪಿಸಿಸಿ ಅಧ್ಯಕ್ಷಗಾದಿ ಮೇಲೆ ಹುಕ್ಕೇರಿ ಟವಲ್:
ಅವರೇ ಹೇಳುವಂತೆ ಅವರೀಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನ ಅಲಂಕರಿಸಲು ಉತ್ಸುಕರಾಗಿದ್ದಾರಂತೆ. ರಾಜ್ಯ ಕೆಪಿಸಿಸಿ ಮುಖಂಡರು ತನಗೆ ಅಧ್ಯಕ್ಷ ಸ್ಥಾನ ನೀಡಿದರೆ ಅದನ್ನು ಯಶಸ್ವಿಯಾಗಿ ನಿಭಾಯಿಸುವೆ. ಆ ಶಕ್ತಿ-ಸಾಮರ್ಥ್ಯ ತಮ್ಮಲ್ಲಿದೆ ಎಂದು ಸ್ವತಃ ಪ್ರಕಾಶ್ ಹುಕ್ಕೇರಿ ಅವರೇ ಹೇಳಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಅವರು ಕೆಪಿಸಿಸಿ ಹಾಲಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟಕ್ಕೆ ಸೇರಿಕೊಂಡರೆ ಅವರು ತೆರವುಗೊಳಿಸುವ ಪಕ್ಷದ ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕದ ಸಮರ್ಥ್ಯ ವ್ಯಕ್ತಿಗೆ ನೀಡಬೇಕು ಎಂಬುದು ಈ ಭಾಗದ ಕಾಂಗ್ರೆಸ್ಸಿರ ನಿಲುವಾಗಿದೆ. ಮಾಜಿ ಸಚಿವ ವಿಎಸ್ ಕೌಜಲಗಿ ಬಿಟ್ಟರೆ ಉತ್ತರ ಕರ್ನಾಟಕಕ್ಕೆ ಅದರಲ್ಲೂ ಮುಂಬೈ ಕರ್ನಾಟಕಕ್ಕೆ ಪ್ರಾತಿನಿಧ್ಯ ದೊರಕಿಲ್ಲ' ಎಂದು ಪ್ರಕಾಶ್ ಹುಕ್ಕೇರಿ ಹೇಳಿದರು.
'ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಈ ಬಾರಿ ಉತ್ತರ ಕರ್ನಾಟಕದವರಿಗೆ ನೀಡಲು ಕಾಂಗ್ರೆಸ್ ಹೈಕಮಾಂಡ್ ಒಪ್ಪಬೇಕು' ಎಂದು ಪ್ರಕಾಶ್ ಹುಕ್ಕೇರಿ ಹೇಳಿದರು.