ಒತ್ತುವರಿ ಮಾಡಿದವರನ್ನು ಶಿಕ್ಷಿಸದೆ ಬಿಡೆವು : ಜಾರ್ಜ್
ಬೆಳಗಾವಿ, ನವೆಂಬರ್ 23 : ಬೆಂಗಳೂರಿನ ರಾಜಕಾಲುವೆ ಒತ್ತುವರಿ ವಿಚಾರ ವಿಧಾನಸಭೆಯಲ್ಲಿ ಇಂದು (ನವೆಂಬರ್ 23) ಚರ್ಚೆಗೆ ಬಂತು. ಈ ಸಂಬಂಧ ಬೆಂಗಳೂರು ನಗರ ಉಸ್ತುವಾರಿ ಸಚಿವ ಜಾರ್ಜ್ ಅವರು 'ಒತ್ತುವರಿ ಮಾಡಿದವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ' ಎಂದು ಗುಡುಗಿದರು.
ಬೆಂಗಳೂರಿನಲ್ಲಿ 2083 ಮಂದಿಯಿಂದ ರಾಜಕಾಲುವೆ ಒತ್ತುವರಿ
ಕಲಾಪದಲ್ಲಿ ಶಾಸಕ ಪಿ.ಆರ್.ರಮೇಶ್ ಅವರು "ರಾಜಕಾಲುವೆಗಳ ನಿರ್ಮಾಣದಲ್ಲಿ ಹಣ ಲೂಟಿಯಾಗಿದೆ ಎಂದು ಆರೋಪ ಮಾಡಿದರು. ರಾಜ್ಯ ಕಾಲುವೆ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ 'ಲೋಕಾಯುಕ್ತದಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸದನಕ್ಕೆ ಮಾಹಿತಿ ನೀಡಲಾಗಿದೆ. ಆದರೆ ಇದು ಸುಳ್ಳು ನನ್ನ ವಿರುದ್ಧವೇ ಲೋಕಾಯುಕ್ತದಲ್ಲಿ ಪ್ರಕರಣ ಒಂದಿದೆ' ಎಂದು ಅವರು ಸತ್ಯ ಹೊರಹಾಕಿದರು.
ರಮೇಶ್ ಅವರ ಆರೋಪಗಳಿಗೆ ಉತ್ತರಿಸಿದ ಬೆಂಗಳೂರು ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ನಾವು ರಾಜಕಾಲುವೆ ವಿಚಾರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದೇವೆ, ಕಾಲುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ರಾಜಕಾಲುವೆ ಒತ್ತುವರಿ ಮಾಡಿರುವ ಸಂಸ್ಥೆಗಳ ಪಟ್ಟಿ ಬಹಿರಂಗ
ರಮೇಶ್ ಅವರಿಗೆ ವಸ್ತುಸ್ಥಿತಿಯ ಚಿತ್ರಣ ನೀಡಿದ ಜಾರ್ಜ್ 'ಹಣಕ್ಕೆ ಕೊರತೆ ಇಲ್ಲ ಆದರೆ ಕಾಮಗಾರಿ ನಿಧಾನವಾಗುತ್ತಿರುವುದಕ್ಕೆ ಭೌಗೋಳಿಕ ಕಾರಣಗಳಿವೆ. ನೀವು ಕೂಡ ಮೇಯರ್ ಆಗಿದ್ದವರು ನಿಮಗೂ ಸಮಸ್ಯೆಯ ಬಗ್ಗೆ ಅರಿವಿರಬೇಕು' ಎಂದರು.
ರಾಜಕಾಲುವೆ ಒತ್ತುವರಿ ತೆರವಿನ ಬಗ್ಗೆ ಇದೇ ವೇಳೆ ಮಾತನಾಡಿದ ಜಾರ್ಜ್ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಬೆಂಗಳೂರಿನಲ್ಲಿ ಚೆನ್ನಾಗಿ ನಡೆದಿದೆ. ಇನ್ನಷ್ಟು ತೆರವು ಕಾರ್ಯ ಮುಂದೆಯೂ ನಡೆಯಲಿದೆ. ಒತ್ತುವರಿ ಮಾಡಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.