ದೋಸ್ತಿಗೆ ದಂಗು ಬಡಿಸಿದ ದೇವೇಗೌಡರು: ಇದು ಹೆಚ್ ಡಿಡಿ ಬಾಂಬ್!
ಬೆಳಗಾವಿ, ಡಿಸೆಂಬರ್.02: ರಾಜ್ಯದ ಪಾಲಿಗೆ ರಾಜಕೀಯ ಚಾಣಕ್ಯ ಎಂದು ಯಾರದರೂ ಇದ್ದರೆ ಅದು ಒನ್ ಆಂಡ್ ಒನ್ಲಿ ದೇವೇಗೌಡರು. ಮಾಜಿ ಪ್ರಧಾನಿ ಮಾಡುವ ರಾಜಕೀಯ ತಂತ್ರಗಳು ಯಾರಿಗೂ ಅರ್ಥ ಆಗುವುದಿಲ್ಲ. ಯಾವಾಗ ಯಾರಿಗೆ ಅಧಿಕಾರ ಸಿಗುತ್ತದೆಯೋ, ಯಾವಾಗ ಯಾರಿಗೆ ಅಧಿಕಾರ ಕೈ ತಪ್ಪುತ್ತದೆ ಎನ್ನುವ ಬಗ್ಗೆ ದೇವೇಗೌಡರು ಪಕ್ಕಾ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ.
ಈಗ ರಾಜ್ಯದಲ್ಲಿ ಎದುರಾಗಿರುವ ವಿಧಾನಸಭಾ ಉಪ ಚುನಾವಣೆ ಫಲಿತಾಂಶವನ್ನೇ ಕಾಂಗ್ರೆಸ್, ಬಿಜೆಪಿ ನಾಯಕರು ಎದುರು ನೋಡುತ್ತಿದ್ದಾರೆ. ನಾನೇ ಮುಂದಿನ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅಬ್ಬರಿಸಿದ ಬೊಬ್ಬಿರಿಸುತ್ತಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಬಿರುಗಾಳಿ: ಸಿದ್ದರಾಮಯ್ಯ ಬೆಚ್ಚಿಬೀಳಿಸುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ?
ಇನ್ನೊಂದೆಡೆ ನನ್ನ ಮುಖ್ಯಮಂತ್ರಿ ಮಾಡಿದ್ದೇ ಅನರ್ಹಗೊಂಡ ಶಾಸಕರು. ಪ್ಲೀಸ್ ಅವರಿಗೆ ಮತ ಹಾಕಿ ಸರ್ಕಾರವನ್ನು ಉಳಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೋದಲ್ಲಿ ಬಂದಲ್ಲೆಲ್ಲ ಹೇಳಿಕೆ ನೀಡುತ್ತಿದ್ದಾರೆ. ಈ ಇಬ್ಬರು ನಾಯಕರದ್ದು ಒಂದು ರಾಜಕೀಯ ತಂತ್ರವಾದರೆ, ರಾಜ್ಯದ ರಾಜಕೀಯ ಚಾಣಕ್ಯ ದೇವೇಗೌಡರದ್ದೇ ಇನ್ನೊಂದು ತಂತ್ರ.
ಚುನಾವಣಾ ಫಲಿತಾಂಶದ ನಂತರ ಭವಿಷ್ಯ
ರಾಜ್ಯದಲ್ಲಿ ಈಗ ಉಪ ಸಮರದ ಕಾವು ದಿನೇ ದಿನೆ ಹೆಚ್ಚುತ್ತಿದೆ. ಇನ್ನು, ಮೂರು ದಿನಗಳಲ್ಲಿ 15 ವಿಧಾನಸಭೆಗಳಿಗೆ ಮತದಾನ ನಡೆಯಲಿದೆ. ಅಲ್ಲಿಗೆ ಎಲ್ಲ ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ. ಆದರೆ, ಎಲ್ಲರ ಲಕ್ಷ್ಯ ನೆಟ್ಟಿರುವುದು ಡಿಸೆಂಬರ್.09ರ ಫಲಿತಾಂಶದ ಮೇಲೆ.
ಏನಾಗುತ್ತಾ ಬಿಜೆಪಿ ಸರ್ಕಾರದ ಮುಂದಿನ ಕಥೆ?
ಅನರ್ಹ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವ ಬಿಜೆಪಿ, ಗೆಲುವಿನ ಲೆಕ್ಕಾಚಾರ ಹಾಕುತ್ತಿದೆ. ಅನರ್ಹ ಶಾಸಕರು ಗೆದ್ದರಷ್ಟೇ ಬಿಜೆಪಿ ಸರ್ಕಾರದ ಆಯುಷ್ಯ ಗಟ್ಟಿಯಾಗಲಿದೆ. ಇಲ್ಲದಿದ್ದರೆ ರಾಜ್ಯದಲ್ಲಿ ಮತ್ತೆ ರಾಜಕೀಯ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಬಿಜೆಪಿ ಸರ್ಕಾರಕ್ಕೆ ಮತ್ತೊಂದು ಬಹುಮತದ ಅಗ್ನಿಪರೀಕ್ಷೆ ಎದುರಾಗಲಿದೆ.
ಮುಖ್ಯಮಂತ್ರಿ ಸೀಟ್ ಮೇಲೆ ಸಿದ್ದರಾಮಯ್ಯ ಕಣ್ಣು!
ಬಿಜೆಪಿ ಸರ್ಕಾರದ ವಿರುದ್ಧ ಗುಟುರು ಹಾಕುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸೆಂಬರ್.09ರ ಫಲಿತಾಂಶವನ್ನೇ ಎದುರು ನೋಡುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಈಗಾಗಲೇ ಘೋಷಣೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ತಿಂಗಳಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಣೆಯನ್ನೂ ಮಾಡುತ್ತಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು ಸಿಡಿಸಿದ್ದು ಹೊಸ ಬಾಂಬ್!
ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ಸರ್ಕಾರ ರಚಿಸಿದ್ದು ಆಯ್ತು. ಈ ಹಿಂದೆ ಬಿಜೆಪಿ ಜೊತೆ ಸರ್ಕಾರ ರಚಿಸಿದ್ದೂ ಆಯಿತು. ನಮಗೀಗ ಯಾರ ಸಹವಾಸವೂ ಬೇಡ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್.09ರ ಚುನಾವಣಾ ಫಲಿತಾಂಶದ ಬಳಿಕ ಜೆಡಿಎಸ್ ಯಾವ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸಂಕಷ್ಟ ಅನುಭವಿಸಿದ್ದೇವೆ. ಇನ್ನು ಮುಂದೆ ಆ ತಪ್ಪನ್ನು ಮಾಡುವುದಿಲ್ಲ ಎನ್ನುವ ಮೂಲಕ ದೇವೇಗೌಡರು ಬಿಗ್ ಶಾಕ್ ಕೊಟ್ಟಿದ್ದಾರೆ.