ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶೀಘ್ರ ಬೊಮ್ಮಾಯಿ ಸಂಪುಟ ಸೇರಲಿದ್ದಾರೆ!
ಬೆಂಗಳೂರು, ಅ. 13: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಹೊಸ ಭರವಸೆ ಸಿಕ್ಕಿದೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಚಿವಸ್ಥಾನ ಕಳೆದುಕೊಂಡಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಶೀಘ್ರ ಮಂತ್ರಿಸ್ಥಾನದ ಭರವಸೆ ಸಿಕ್ಕಿದೆ. ಜಾರಕಿಹೊಳಿ ಸಹೋದರರೊಂದಿಗೆ ಸಭೆ ಮಾಡುವ ಮೂಲಕ ಗಮನ ಸೆಳೆದಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬಿಜೆಪಿಯಲ್ಲಿ ಉಳಿಸಿಕೊಳ್ಳುವ ಕಸರತ್ತು ಆರಂಭವಾಗಿದೆ. ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿರುವ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ಮಹತ್ವದ ಹೇಳಿಕೆ ಕೊಟ್ಟಿದ್ದಾರೆ.
ಬುಧವಾರ ಬೆಳಗಾವಿಯ ಕೆಎಲ್ಇ ಕಾಲೇಜು ಆವರಣದಲ್ಲಿ ನಡೆದ ಎನ್ಇಪಿ ಕಾರ್ಯಾಗಾರದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗುಣಗಾನ ಮಾಡಿರುವ ಡಾ. ಅಶ್ವಥ್ ನಾರಾಯಣ ಅವರು, ರಮೇಶ್ ಜಾರಕಿಹೊಳಿಗೆ ಮಂತ್ರಿಸ್ಥಾನದ ಭರವಸೆ ಮೂಡುವಂತೆ ಮಾತನಾಡಿದ್ದಾರೆ.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಅವರು ಪಕ್ಷಕ್ಕಾಗಿ ತ್ಯಾಗವನ್ನು ಮಾಡಿದ್ದಾರೆ. ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯಲ್ಲಿ ಯಡಿಯೂರಪ್ಪ ಅವರು ಪ್ರಚಾರ ನಡೆಸಲಿದ್ದಾರೆ. ಆ ಮೂಲಕ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂದಿದ್ದಾರೆ.
ರಮೇಶ್ ಜಾರಕಿಹೊಳಿಗೆ ಮಂತ್ರಿಸ್ಥಾನದ ಭರವಸೆ: ಇನ್ನು ಮಾಜಿ ಸಚಿವ ರಮೇಶ ಜಾರಕಿಹೊಳಿ ಕುರಿತು ಮಾತನಾಡಿರುವ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ, "ಅವರ ಬಗ್ಗೆ ಪಕ್ಷಕ್ಕೆ ಗೌರವವಿದೆ. ಅವರಿಗೆ ಎದುರಾಗಿರುವ ಸಮಸ್ಯೆ ತಾತ್ಕಾಲಿಕ. ಅದು ನಿವಾರಣೆಯಾದ ಕೂಡಲೇ ಅವರು ಮತ್ತೆ ಸಚಿವ ಸಂಪುಟಕ್ಕೆ ಬರಲಿದ್ದಾರೆ. ಆ ಭರವಸೆಯನ್ನು ಅವರಿಗೆ ಕೊಡಲಾಗಿದೆ. ಹೀಗಾಗಿ ಪಕ್ಷ ಯಾರನ್ನೂ ಕೈಬಿಡುವುದಿಲ್ಲ" ಎಂದು ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ. ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಮಾತನಾಡಿದ್ದಾರೆ.
ಭಾರತೀಯತೆಯನ್ನು ಒಳಗೊಂಡಿರುವ ಪರಿಪೂರ್ಣ ರಾಷ್ಟ್ರೀಯ ಶಿಕ್ಷಣ ನೀತಿ:
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತೀಯತೆಯನ್ನು ಒಳಗೊಂಡಿರುವ ಪರಿಪೂರ್ಣ ನೀತಿಯಾಗಿದ್ದು, ಗುಣಮಟ್ಟ ಶಿಕ್ಷಣದ ಮೂಲಕ ಭಾರತೀಯರ ಸಬಲೀಕರಣದ ಗುರಿ ಹೊಂದಿದೆ" ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಹೇಳಿದ್ದಾರೆ. ಬುಧವಾರ ಬೆಳಗಾವಿಯ ಕೆಎಲ್ಇ ಕಾಲೇಜು ಆವರಣದಲ್ಲಿ ನಡೆದ ಎನ್ಇಪಿ ಕಾರ್ಯಾಗಾರದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದಾರೆ.
"ರಾಷ್ಟ್ರೀಯ ಶಿಕ್ಷಣ ನೀತಿ 2020 ಜಾಗತಿಕ ಗುಣಮಟ್ಟದ್ದಾಗಿದೆ. ಇನ್ನು ಮುಂದೆ ಸರಕಾರಿ ಶಾಲೆಗಳು ಕೂಡ ಮಕ್ಕಳನ್ನು ಮೂರನೇ ವರ್ಷಕ್ಕೇ ಸೇರಿಸಿಕೊಳ್ಳಲಿವೆ. ಈ ಮೂಲಕ ಅಲ್ಲೂ ಪೂರ್ವ ಪ್ರಾಥಮಿಕ ಕಲಿಕೆಯನ್ನು ಆರಂಭಿಸಲಾಗುವುದು. ಈ ನೀತಿಯನ್ನು ಐದಾರು ವರ್ಷಗಳ ದೀರ್ಘ ಸಮಾಲೋಚನೆಯ ನಂತರ ಜಾರಿಗೆ ತರಲಾಗುತ್ತಿದೆ" ಎಂದು ಅವರು ವಿವರಿಸಿದ್ದಾರೆ.
ಬೆಳಗಾವಿಯಲ್ಲಿ ಈಗಾಗಲೇ ಇರುವ ಐಟಿ ಪಾರ್ಕ್ಗೆ ಜೀವ ತುಂಬಲಾಗುವುದು. ಜೊತೆಗೆ, ರಕ್ಷಣಾ ಇಲಾಖೆಯ ವಶದಲ್ಲಿರುವ ರಾಜ್ಯ ಸರಕಾರದ 700 ಎಕರೆ ಜಮೀನನ್ನು ಹಿಂತೆಗೆದುಕೊಂಡು, ಅಲ್ಲಿ ಹೊಸ ಐಟಿ ಪಾರ್ಕ್ ಸ್ಥಾಪಿಸಲಾಗುವುದು. ಹಿರೇಬಾಗೇವಾಡಿಯಲ್ಲಿ ನನೆಗುದಿಗೆ ಬಿದ್ದಿರುವ ವಿಶ್ವವಿದ್ಯಾಲಯದ ಕ್ಯಾಂಪಸ್ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಡಾ. ಅಶ್ವಥ್ ನಾರಾಯಣ ಭರವಸೆ ನೀಡಿದ್ದಾರೆ.
ಕೋವಿಡ್ ನಂತರ ಡಿಜಿಟಲ್ ಜ್ಞಾನಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಒಬ್ಬೊಬ್ಬ ವ್ಯಕ್ತಿಯೂ ಒಂದೊಂದು ಸಂಸ್ಥೆಯಂತಾಗಿದ್ದಾನೆ. ರಾಜ್ಯ ಸರಕಾರದ 'ಡಿಜಿಟಲ್ ಎಕಾನಮಿ ಮಿಷನ್' ಮತ್ತು 'ಬಿಯಾಂಡ್ ಬೆಂಗಳೂರು' ಯೋಜನೆಗಳ ಮೂಲಕ ರಾಜ್ಯದ ಎಲ್ಲ ಭಾಗಗಳಲ್ಲೂ ಉದ್ದಿಮೆಗಳನ್ನು ಬೆಳೆಸಲಾಗುವುದು ಎಂದು ಅವರು ವಿವರಿಸಿದರು.