"ಅತ್ಯಂತ ನಾಲಾಯಕ್ ರಾಜಕಾರಣಿ ಯಾರಾದರೂ ಇದ್ರೆ ಅಂವ ವಿಜಯಪುರದಾಂವ"
ಬೆಳಗಾವಿ, ಏಪ್ರಿಲ್ 3: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ವಿಜಯೇಂದ್ರ ಎದುರು ಸಚಿವರು ಕೈಕಟ್ಟಿ ನಿಲ್ಲುತ್ತಾರೆ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಮುರುಗೇಶ್ ನಿರಾಣಿ, "ಅತ್ಯಂತ ನಾಲಾಯಕ್ ರಾಜಕಾರಣಿ ಯಾರಾದರೂ ಇದ್ರೆ ಅಂವ ವಿಜಯಪುರದಾಂವ" ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಯತ್ನಾಳ್ ವಿರುದ್ಧ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, "ಬಸನಗೌಡ ಪಾಟೀಲ್ ಯತ್ನಾಳ್ ಬಹಳ ಹಿರಿಯ. ಎಲ್ಲಾ ಮೂಲಗಳಿಂದ ಅವರಿಗೆ ಏನೇನೋ ಸಿಗುತ್ತಿದೆ. ನಮ್ಮ ಪಕ್ಷದಲ್ಲೇ ಇದ್ದುಕೊಂಡು ನಮ್ಮವರನ್ನೇ ಟೀಕೆ ಮಾಡೋದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ್ದಾರೆ.
"ನಮ್ಮ ಪಕ್ಷದವರನ್ನು ಟೀಕೆ ಮಾಡುವುದಿದ್ದರೆ ರಾಜೀನಾಮೆ ಕೊಟ್ಟು ಹೊರಗೆ ಹೋಗಿ ಏನು ಬೇಕಾದರೂ ಮಾತನಾಡಲಿ. ಬಿಜೆಪಿ ಚಿಹ್ನೆ ಮೇಲೆ ಗೆದ್ದು ನಮ್ಮ ನಾಯಕರ ಫೋಟೋ ಹಾಕಿಕೊಂಡು ಆರಿಸಿ ಬಂದು ಪಕ್ಷಕ್ಕೆ ಅನ್ಯಾಯ ಮಾಡೋದು ಉಂಡ ಮನೆಗೆ ದ್ರೋಹ ಬಗೆದ ಹಾಗೆ. ಅದಕ್ಕಾಗಿ ಇನ್ಮುಂದೆ ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು" ಎಂದು ಕಿಡಿಕಾರಿದ್ದಾರೆ.
"ನೀವು ಸಿಎಂ ಆಗಿರಿ, ಉಳಿದೆಲ್ಲಾ ಖಾತೆ ವಿಜಯೇಂದ್ರಗೆ ಕೊಟ್ಟು ಬಿಡಿ"
ಶುಕ್ರವಾರವಷ್ಟೆ ವಿಜಯಪುರದಲ್ಲಿ ಯಡಿಯೂರಪ್ಪ ವಿರುದ್ಧ ಯತ್ನಾಳ್ ಟೀಕೆ ಮಾಡಿದ್ದರು. "ಎಲ್ಲಾ ಮಂತ್ರಿಗಳು ಯಾಕೆ ಬೇಕು, ವಿಜಯೇಂದ್ರ ಅವರನ್ನೇ ಮಾಡಿಬಿಡಿ. ನೀವು ಮುಖ್ಯಮಂತ್ರಿಯಾಗಿರಿ. ಉಳಿದೆಲ್ಲಾ ಖಾತೆಗಳನ್ನು ವಿಜಯೇಂದ್ರಗೆ ಕೊಟ್ಟುಬಿಡಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. "ಯಾವುದಕ್ಕೆ ಸಚಿವ ಸಂಪುಟ ಬೇಕು?. ಮುಖ್ಯಮಂತ್ರಿಗಳು ಎಂದರೆ ಏನು?, ನೀವು ಎಲ್ಲಾ ಇಲಾಖೆಯಲ್ಲಿಯೂ ಹಸ್ತಕ್ಷೇಪ ಮಾಡುತ್ತೀರಿ. ಎಲ್ಲರನ್ನು ತೆಗೆಯುತ್ತಿದ್ದೀರಿ" ಎಂದು ಆರೋಪಿಸಿದ್ದರು.