ಮಹಾರಾಷ್ಟ್ರದಲ್ಲಿ ಮಳೆ: ಕೃಷ್ಣಾ ನದಿಗೆ 65,000 ಕ್ಯೂಸೆಕ್ ನೀರು ಬಿಡುಗಡೆ
ಬೆಳಗಾವಿ, ಅಕ್ಟೋಬರ್ 15: ಮಹಾರಾಷ್ಟ್ರದಲ್ಲಿ ಮತ್ತೆ ಮಳೆಯಾಗುತ್ತಿದ್ದು, ಕೃಷ್ಣಾ ನದಿಯ ಒಳಹರಿವಿನಲ್ಲಿ ಏರಿಕೆಯಾಗಿದೆ. ಹೀಗಾಗಿ ಮತ್ತೆ ಪ್ರವಾಹದ ಆತಂಕ ಕಾಣಿಸಿಕೊಂಡಿದೆ. ಮಹಾರಾಷ್ಟ್ರ ಹಾಗೂ ಚಿಕ್ಕೋಡಿ ಉಪ ವಿಭಾಗದಲ್ಲಿ ಮೂರು ದಿನಗಳಿಂದ ಮಳೆಯಾಗುತ್ತಿದೆ. ಇದರಿಂದ ಕೃಷ್ಣಾ, ವೇದಗಂಗಾ ಮತ್ತು ದೂಧ್ಗಂಗಾ ನದಿಗಳ ಒಳಹರಿವಿನಲ್ಲೂ ಏರಿಕೆಯಾಗಿದೆ. ಕೃಷ್ಣಾ ನದಿಗೆ 65,000ಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದುಬರುತ್ತಿದೆ.
ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್ ನಿಂದ 53,500 ಕ್ಯೂಸೆಕ್, ದೂಧ್ಗಂಗಾದಿಂದ 11,616 ಕ್ಯೂಸೆಕ್ ನೀರು ಹರಿಸಿದ್ದು, ಒಟ್ಟು 65,000 ಕ್ಯೂಸೆಕ್ಗೂ ಅಧಿಕ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ.
ಮಹಾಮಳೆಗೆ ಉತ್ತರ ಕರ್ನಾಟಕ ತತ್ತರ: ಜನಜೀವನ ಅಸ್ತವ್ಯಸ್ತ
ಚಿಕ್ಕೋಡಿ - 86.4 ಮಿ.ಮೀ., ಅಂಕಲಿ - 68.8 ಮಿ.ಮೀ., ನಾಗರಮುನ್ನೊಳಿ - 48.6 ಮಿ.ಮೀ., ಸದಲಗಾ - 95 ಮಿ.ಮೀ., ಜೋಡಟ್ಟಿ - 50.5 ಮಿ.ಮೀ. ಮಳೆಯಾಗಿದೆ. ಸದ್ಯ ಕೊಯ್ನಾ ಜಲಾಶಯ ಶೇ. 99.39, ವಾರಣಾ ಜಲಾಶಯ ಶೇ. 100, ರಾಧಾನಗರಿ ಜಲಾಶಯ ಶೇ. 98.89, ಕಣೇರ ಜಲಾಶಯ ಶೇ.100, ಧೂಮ ಜಲಾಶಯ ಶೇ. 99.85, ಪಾಟಗಾಂವ ಶೇ. 100, ಧೂದ್ಗಂಗಾ ಶೇ. 100ರಷ್ಟು ತುಂಬಿದೆ. ಹಿಪ್ಪರಗಿ ಬ್ಯಾರೇಜ್ ನಿಂದ 68,000 ಹಾಗೂ ಆಲಮಟ್ಟಿ ಜಲಾಶಯದಿಂದ 1,17,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.
ಚಿಕ್ಕೋಡಿ ಉಪ ವಿಭಾಗದ ಶಿನಾಳ-ಕಾತ್ರಾಳ, ಕೌಲಗುಡ್ಡ-ಮೋಳೆ, ಕೆಂಪವಾಡ - ಮಿರಜ, ಶಿರೂರ -ಖೇಳೆಗಾಂವ, ಕಾತ್ರಾಳ - ತಂಗಡಿ, ಸಂಬರಗಿ-ಆಜೂರ ಬಿಜ್ಜರಗಿ - ತೇಲಸಂಗ, ಕೆಂಪವಾಡ - ಖಟಾವ ರಸ್ತೆಗೆ ನುಗ್ಗಿದ ನೀರಿನಿಂದ ಜನರಿಗೆ ತೊಂದರೆ ಉಂಟಾಗಿದೆ. ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.