ಬೆಳಗಾವಿ ಜಿಲ್ಲೆಯಾದ್ಯಂತ ಮುಂಗಾರು ಅಬ್ಬರ: ಕರ್ನಾಟಕ-ಗೋವಾ ರಸ್ತೆ ಸಂಪರ್ಕ ಕಡಿತ
ಬೆಳಗಾವಿ, ಜೂನ್ 17: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಗೋವಾದ ಚೋರ್ಲಾಘಾಟಿ ಬಳಿ ಗುಡ್ಡ ಕುಸಿತವಾಗಿದ್ದರಿಂದ ಬೆಳಗಾವಿ-ಗೋವಾ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ನೂರಾರು ವಾಹನಗಳು ರಸ್ತೆಯ ಮಧ್ಯೆ ಸಾಲುಗಟ್ಟಿ ನಿಂತಿವೆ.
Recommended Video
ರಸ್ತೆಯ ಮಾರ್ಗದಲ್ಲಿಯೇ ಗುಡ್ಡ ಕುಸಿದು ಬಿದ್ದಿದ್ದು, ಅದನ್ನು ತೆರವುಗೊಳಿಸಲು ಗೋವಾ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಯಲ್ಲಿಯೇ ಬೃಹತ್ ಗಿಡ-ಮರಗಳು ಬಿದಿದ್ದು, ಬೃಹತ್ ಪ್ರಮಾಣದಲ್ಲಿ ಮಣ್ಣು ಕುಸಿದಿದೆ.
ಬೆಳಗಾವಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ
ರಸ್ತೆಯ ಮೇಲೆ ಬಿದ್ದಿರುವ ಕಲ್ಲು, ಮಣ್ಣು ತೆರವುಗೊಳಿಸಿದ ಬಳಿಕವಷ್ಟೇ ಚೋರ್ಲಾ ಮಾರ್ಗದಲ್ಲಿ ವಾಹನ ಸಂಚಾರ ಆರಂಭವಾಗಲಿದೆ.
ಖಾನಾಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿವೆ. ಬುಧವಾರವೂ ಬಿಟ್ಟು ಬಿಡದೆ ಮಳೆ ಆಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಮಳೆ ನೀರು ಹರಿಯುತ್ತಿದೆ. ಬೆಳಗ್ಗೆಯಿಂದಲೇ ಧಾರಕಾರ ಮಳೆ ಸುರಿಯಲಾರಂಭಿಸಿದೆ.
ಬೆಳಗಾವಿಯ ಬೈಲಹೊಂಗಲ ಮತ್ತು ಬೆಳವಾಡಿಯಲ್ಲಿ ಧಾರಾಕಾರ ಮಳೆ
ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಮಂಗಳವಾರ ರಾತ್ರಿಯಿಂದಲೇ ಉತ್ತಮ ಮಳೆಯಾಗಿದೆ. ತಾಲೂಕಿನ ಪಶ್ಚಿಮ ಭಾಗದ ಅರಣ್ಯ ಪ್ರದೇಶದಲ್ಲಿ ಜನರಿಗೆ ಸ್ಪಲ್ಪ ತೊಂದರೆಯಾದರೂ ಎಡೆಬಿಡದೇ ಸುರಿಯುತ್ತಿರುವ ಮಳೆಯ ಮಧ್ಯಯೇ ರೈತಾಪಿ ಸಮುದಾಯ ಭತ್ತ ಮತ್ತು ಗೇಣಸಿನ ನಾಟಿ ಕಾರ್ಯದಲ್ಲಿ ಮಗ್ನರಾಗಿದ್ದರು.
ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದ್ದು, ಈ ನದಿಗಳೊಂದಿಗೆ ಇವುಗಳನ್ನು ಸೇರುವ ಹಳ್ಳಗಳೂ ಉಕ್ಕಿ ಹರಿಯುತ್ತಿವೆ.
ಕಣಕುಂಬಿ ಅರಣ್ಯ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಮಹದಾಯಿ ನದಿ ಹಾಗೂ ಕಳಸಾ ಬಂಡೂರಿ ನಾಲೆ ಉಕ್ಕಿ ಹರಿಯುತ್ತಿರುವ ಕಾರಣ ಭೀಮಗಡ ಅರಣ್ಯ ವ್ಯಾಪ್ತಿಯಲ್ಲಿ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.