ಈವ್ ಟೀಸಿಂಗ್; ಬೆಳಗಾವಿಯ ಹಾಸ್ಟೆಲ್ ಗೆ ರಾತ್ರೋರಾತ್ರಿ ನುಗ್ಗಿ ದಾಂಧಲೆ
ಬೆಳಗಾವಿ, ಫೆಬ್ರವರಿ 24: ಇಪ್ಪತ್ತಕ್ಕೂ ಹೆಚ್ಚು ಯುವಕರು ಬೆಳಗಾವಿಯ ಸಂಗಮೇಶ್ವರ ನಗರದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಹಾಸ್ಟೆಲ್ ಗೆ ನುಗ್ಗಿ ದಾಂಧಲೆ ನಡೆಸಿರುವ ಸಂಗತಿ ಭಾನುವಾರ ರಾತ್ರಿ ನಡೆದಿದೆ. ಈ ದೃಶ್ಯ ಸಿಸಿ ಟಿ.ವಿಯಲ್ಲಿ ಸೆರೆಯಾಗಿದೆ.
ಹಾಸ್ಟೆಲ್ ನಲ್ಲಿದ್ದ ಇಬ್ಬರು, ಹುಡುಗಿಯೊಬ್ಬಳನ್ನು ಚುಡಾಯಿಸಿದ್ದಕ್ಕೆ ಈ ರೀತಿ ಹಾಸ್ಟೆಲ್ ಗೆ ಯುವಕರು ನುಗ್ಗಿ ಹೆದರಿಸಿರುವುದಾಗಿ ತಿಳಿದುಬಂದಿದೆ. ಈ ಘಟನೆಯಿಂದಾಗಿ ಕೆಲವು ವಾಹನಗಳಿಗೆ ಹಾನಿಯಾಗಿದೆ. ಆದರೆ ಯಾರಿಗೂ ತೊಂದರೆಯಾಗಿಲ್ಲ.
ಏ.ಯಾಕ್ರೋ ಚುಡಾಯಿಸ್ತೀರಾ? ಎಂದ ಮರುಕ್ಷಣವೇ ಮರ್ಡರ್
ರಾಡ್, ಕ್ರಿಕೆಟ್ ಬ್ಯಾಟ್ ಹಿಡಿದು ಯುವಕರು ಭಾನುವಾರ ರಾತ್ರಿ ಸುಮಾರು 10ಕ್ಕೆ ಹಾಸ್ಟೆಲ್ ಪ್ರವೇಶಿಸಿದ್ದಾರೆ. ಭಯಗೊಂಡ ವಿದ್ಯಾರ್ಥಿಗಳು ಹಾಸ್ಟೆಲ್ ನ ಒಂದು ರೂಮಿನಲ್ಲಿ ಸೇರಿಕೊಂಡಿದ್ದಾರೆ. ಆ ರೂಮಿನ ಕಿಟಕಿ ಹಾಗೂ ಬಾಗಿಲಿನ ಮೇಲೆ ಈ ಯುವಕರು ಕಲ್ಲು ಎಸೆದಿದ್ದಾರೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಉಮಾ ಸಾಲಿಗೌಡರ್ ಹಾಸ್ಟೆಲ್ ಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದಾರೆ.
ಈ ಘಟನೆ ಕುರಿತು ತನಿಖೆಗೆ ಪೊಲೀಸ್ ಕಮಿಷನರ್ ಲೋಕೇಶ್ ಕುಮಾರ್ ಆದೇಶಿಸಿದ್ದಾರೆ. ಈ ಹಾಸ್ಟೆಲ್ ನ ಯಾರ ವಿರುದ್ಧವೂ ಯಾವುದೇ ದೂರು ದಾಖಲಾಗಿಲ್ಲ ಎಂದು ಎಪಿಎಂಸಿ ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರೆದಿದೆ.