ಕೊರೊನಾ random ಟೆಸ್ಟ್ ನಿಲ್ಲಿಸುವಂತೆ ಉಮೇಶ ಕತ್ತಿ ಒತ್ತಾಯ
ಬೆಳಗಾವಿ, ಆಗಸ್ಟ್ 22: ಕೊರೊನಾ random ಪರೀಕ್ಷೆಯನ್ನು ತಕ್ಷಣವೇ ಸರ್ಕಾರ ಕೈ ಬಿಡಬೇಕು ಎಂದು ಬಿಜೆಪಿ ಹಿರಿಯ ಶಾಸಕ ಉಮೇಶ ಕತ್ತಿ ಒತ್ತಾಯಿಸಿದ್ದಾರೆ.
ಬೆಳಗಾವಿಯ ಹುಕ್ಕೇರಿ ಪಟ್ಟಣದಲ್ಲಿ ಮಾತನಾಡಿದ ಅವರು, ಮನೆ ಮನೆಗಳಿಗೆ ಹೋಗಿ ಕೊರೊನಾ ಪರೀಕ್ಷೆ ನಡೆಸುವುದನ್ನು ಕೈಬಿಡಬೇಕು. ಸರ್ಕಾರ ಸ್ವಾಬ್ ಟೆಸ್ಟಿಂಗ್ ಟಾರ್ಗೆಟ್ ನೀಡಿರುವುದನ್ನು ಬಿಡಬೇಕು. ಸ್ವ ಇಚ್ಛೆಯಿಂದ ಬಂದವರಿಗೆ ಮಾತ್ರ ಟೆಸ್ಟಿಂಗ್ ಮಾಡಬೇಕು. ಸುಮ್ಮನೆ ಪರೀಕ್ಷೆ ಮಾಡುವುದರಿಂದ ಅನಗತ್ಯವಾಗಿ ಜನರ ಮನಸ್ಸಿನಲ್ಲಿ ಆತಂಕ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ದಾಖಲೆ ಬರೆದ ಕೊರೊನಾವೈರಸ್: ಅದು ಹೇಗೆ ಅಂತೀರಾ?
ಈ ರೀತಿ ಟೆಸ್ಟಿಂಗ್ ಇಂದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ಜನ ಭಯಭೀತರಾಗಿ ಮನೆಗಳನ್ನು ಬಿಟ್ಟು ಹೋಗುತ್ತಿದ್ದಾರೆ. ಸರಕಾರದ ಆದೇಶದಿಂದ ಹಿರಿಯ ಅಧಿಕಾರಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿ ಮೇಲೆ ಒತ್ತಾಯ ಹಾಕುತ್ತಿದ್ದಾರೆ. ಇವೆಲ್ಲವೂ ಅನಗತ್ಯ ಆತಂಕಗಳಿಗೆ ಎಡೆ ಮಾಡಿಕೊಡುತ್ತಿವೆ. ಸರ್ಕಾರ ತಕ್ಷಣವೇ ಮನೆ ಮನೆಗಳಿಗೆ ಹೋಗಿ ಕೊರೊನಾ ಪರೀಕ್ಷೆ ಮಾಡುವ ಆದೇಶವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.