"ಗ್ರಾ.ಪಂಗೆ 20 ಸಾವಿರ ರೂಪಾಯಿ ನೀಡಿರುವ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು"
ಬೆಳಗಾವಿ, ಜುಲೈ 6: ಕೊರೊನಾ ಸೋಂಕಿನ ಪ್ರಕರಣಗಳು ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿವೆ. ಆದರೆ ಕೊರೊನಾ ಸೋಂಕನ್ನು ನಿಯಂತ್ರಿಸಲು ಗ್ರಾಮ ಪಂಚಾಯತಿಗಳಿಗೆ ಕೇವಲ 20 ಸಾವಿರ ರೂಪಾಯಿ ನೀಡಿರುವ ಬಿಜೆಪಿ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ತಾಲೂಕಿನ ಕಂಗ್ರಾಳಿ (ಬಿಕೆ) ಗ್ರಾಮ ಪಂಚಾಯತಿ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಇಂದು ಭಾಗಿಯಾಗಿ ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಬರೀ ಅಕ್ಕಿ, ಗೋಧಿ ಕೊಟ್ಟರೆ ಸಾಕಾಗದು; ಲಕ್ಷ್ಮೀ ಹೆಬ್ಬಾಳ್ಕರ್
"ಕೊರೊನಾ ವೈರಸ್ ನಿಯಂತ್ರಣಕ್ಕೆಂದು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಪ್ಯಾಕೇಜ್ ಅನ್ನು ಘೋಷಣೆ ಮಾಡಿತ್ತು. ಆದರೆ ಬೆಳಗಾವಿಯ ಕಂಗ್ರಾಳಿ ಗ್ರಾಮ ಪಂಚಾಯತಿಗೆ ಕೊಟ್ಟಿದ್ದು ಕೇವಲ 20 ಸಾವಿರ. ಇದು ಯಾವುದಕ್ಕೆ ಸಾಲುತ್ತದೆ? 10 ಲಕ್ಷ ರೂಪಾಯಿಯಾದರೂ ಸೋಂಕು ನಿಯಂತ್ರಿಸಲು ಕೊಡಬೇಕಿತ್ತು" ಎಂದು ಕಿಡಿಕಾರಿದ್ದಾರೆ.