ರೈತನಿಗೆ ಸತ್ತೋಗು ಎಂಬ ಹೇಳಿಕೆ ಸಮರ್ಥಿಸಿಕೊಂಡ ಆಹಾರ ಸಚಿವ ಉಮೇಶ್ ಕತ್ತಿ; ಭಾರೀ ವಿರೋಧ
ಬೆಳಗಾವಿ, ಏಪ್ರಿಲ್ 28: ಕೋವಿಡ್ ಸಂದರ್ಭದಲ್ಲಿ ಪಡಿತರ ಅಕ್ಕಿ ಯಾಕೆ ಕಡಿಮೆ ಮಾಡಿದ್ದೀರಿ ಎಂದು ಕೇಳಿದ ರೈತರೊಬ್ಬರಿಗೆ ಸಾಯುವುದೇ ಒಳ್ಳೆಯದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಅಹಂಕಾರದಿಂದ ಮಾತನಾಡಿದ್ದು, ಇದು ತೀವ್ರ ವಿವಾದಕ್ಕೆ ಗುರಿಯಾಗಿದೆ.
ಇದಕ್ಕೆ ಪೂರಕವಾಗಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಸಚಿವ ಉಮೇಶ ಕತ್ತಿ, ತಾವು ಮಾತನಾಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ರೈತ ಸಂಘದ ಕಾರ್ಯಕರ್ತ ಈಶ್ವರ ಎಂಬುವರು ಆಹಾರ ಸಚಿವ ಉಮೇಶ ಕತ್ತಿ ಅವರಿಗೆ ದೂರವಾಣಿ ಕರೆ ಮಾಡಿ ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ ಯಾವ ಕಾರಣಕ್ಕೆ ಕಡಿಮೆ ಮಾಡಿದ್ದೀರಾ. ಮೊದಲೇ ಕೊರೊನಾ ಸಮಸ್ಯೆ ಇದೆ. ಉದ್ಯೋಗ ಇಲ್ಲ. ಹೀಗಿರುವಾಗ ನಾವು ಸಾಯಬೇಕೇ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿ ಧೈರ್ಯ ತುಂಬಬೇಕಾದ ಸಚಿವರೇ, ಸಾಯೋದು ಒಳ್ಳೆಯದು ಎಂದು ಉದ್ಧಟತನದ ಮಾತು ಆಡಿದ್ದಾರೆ. ಸಚಿವರ ಈ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಸಚಿವರ ಹೇಳಿಕೆ ತೀವ್ರ ವಿವಾದಕ್ಕೆ ಗುರಿಯಾಗಿದೆ.
ಸತ್ತು ಹೋಗು ಎಂದು ಹೇಳಿದ್ದು ನಿಜ
ವ್ಯಕ್ತಿಯೋರ್ವ ಫೋನ್ ಮಾಡಿದಾಗ ಸತ್ತು ಹೋಗು ಎಂದು ಹೇಳಿದ್ದು ನಿಜ, ಆದರೆ ಉದ್ದೇಶಪೂರ್ವಕವಾಗಿ ಹೇಳಿಲ್ಲ ಎಂದು ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ಸ್ಮಶಾನ ವ್ಯವಸ್ಥೆ ಮಾಡಿದ್ದೇವೆ, ಅಂತ್ಯಕ್ರಿಯೆಗೆ ಸಮಸ್ಯೆ ಇಲ್ಲ, "ಸತ್ತು ಹೋಗಿ"
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಲಾಕ್ಡೌನ್ ಪರಿಸ್ಥಿತಿ ನಿರ್ಮಾಣವಾಗಿ ಅಕ್ಕಿ ಕಡಿಮೆ ಮಾಡಿದರೆ ನಾವು ಬದುಕಬೇಕೋ ಅಥವಾ ಸಾಯಬೇಕೋ? ಎಂದು ಈಶ್ವರ ಎಂಬಾತ ಪ್ರಶ್ನಿಸಿದ. ಅಕ್ಕಿ ಇಲ್ಲದೆ ಜನ ಸಾಯಬೇಕಾ ಅಂತ ಆ ವ್ಯಕ್ತಿ ಫೋನ್ ಅಲ್ಲಿ ಹೇಳಿದ. ಅವನು ಹಾಗೆ ಅಂದಿದ್ದಕ್ಕೆ ನಾನು ಹೇಳಿದ್ದೇನೆ ವಿನಃ ಉದ್ದೇಶ ಪೂರ್ವಕವಾಗಿ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಳ ಸಂತೆಯಲ್ಲಿ ಅಕ್ಕಿ ಮಾರಾಟ
ನಾನು ಹಾಗೆ ಅನ್ನಬಾರದಿತ್ತು, ಅದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದು, ರಾಜ್ಯದ ಜನರು ಊಟ ಇಲ್ಲದೆ ಮೃತಪಡಬಾರದು. ಅವರಿಗೆ ಆಹಾರ, ಧಾನ್ಯ ಪೂರೈಸುವ ಜವಾಬ್ದಾರಿ ನಮ್ಮದು. ಯಾರೂ ಹಸಿವಿನಿಂದ ಬಳಲಬಾರದು ಎಂದು ಇದೆ ಸಂದರ್ಭದಲ್ಲಿ ತಿಳಿಸಿದರು.
ಕಾಳ ಸಂತೆಯಲ್ಲಿ ಅಕ್ಕಿ ಮಾರಾಟ ಮಾಡಲಾಗುತ್ತಿದೆ. ಇದನ್ನು ನಿಯಂತ್ರಿಸಲು ಅಕ್ಕಿ ಬದಲಿಗೆ ಮೂರು ಕೆಜಿ ರಾಗಿ, ಜೋಳ ನೀಡಲು ಯೋಜನೆ ಹಾಕಿಕೊಂಡಿದ್ದೇವೆ. ಆಹಾರ ಸಾಮಗ್ರಿ ಮಾರಾಟ ಮಾಡುವವರು ಆಡಿಯೋ ಮಾಡಿ ವೈರಲ್ ಮಾಡಿದ್ದಾರೆ ಎಂಬ ಅನುಮಾನ ಇದೆ ಎಂದು ಸಂಶಯ ವ್ಯಕ್ತಪಡಿಸಿದರು. ಕಾಳ ಸಂತೆಯಲ್ಲಿ ಆಹಾರ ಧಾನ್ಯ ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕೆಂಡಾಮಂಡಲ
ಸಚಿವ ಉಮೇಶ್ ಕತ್ತಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಇದು ಬಿಜೆಪಿ ಸಂಸ್ಕೃತಿಯನ್ನು ತೋರಿಸುತ್ತದೆ. ಅವರಲ್ಲಿ ಯಾರೂ ಹೆಚ್ಚಿಲ್ಲ, ಯಾರೂ ಕಡಿಮೆಯಿಲ್ಲ. ಇದಕ್ಕೆ ಸಿಎಂ ಹಾಗೂ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಅವರ ಬಳಿ ಅಧಿಕಾರ ಇರುವುದರಿಂದ ಜನ ಅಕ್ಕಿ ಕೊಡಿ ಎಂದು ಕೇಳುತ್ತಾರೆ, ಅದಕ್ಕೆ ಸಾಯೋಗು ಅಂದರೆ ಹೇಗೆ. ಅವರು ಯಾಕಾಗಿ ಮಂತ್ರಿಯಾಗಿರಬೇಕು. ಕೂಡಲೇ ಸಿಎಂ ಅವರು ಕತ್ತಿಯವರ ರಾಜೀನಾಮೆ ತೆಗೆದುಕೊಳ್ಳಬೇಕು. ಜನರ ಬಳಿ ಕ್ಷಮೆ ಕೇಳುವುದಕ್ಕೂ ಮುನ್ನ ರಿಸೈನ್ ಮಾಡಬೇಕು ಎಂದು ಒತ್ತಾಯಿಸಿದರು.
ಯಡಿಯೂರಪ್ಪ ಅವರೇ ನಿಮಗೆ ಅಧಿಕಾರ ಮುಖ್ಯವೇ?
ಉಮೇಶ್ ಕತ್ತಿಯವರ ಶವಯಾತ್ರೆ ಮಾಡುತ್ತೇವೆ, ಸಿಎಂ ಮನೆಗೆ ಮುತ್ತಿಗೆ ಹಾಕ್ತೀವಿ, ಶವಯಾತ್ರೆ ಮಾಡಿ ಗಮನ ಸೆಳೆಯುತ್ತೇವೆ. ಏಳು ಕೆಜಿ ಅಕ್ಕಿ ನಮ್ಮ ಸರ್ಕಾರದಲ್ಲಿ ಕೊಡುತ್ತಿದ್ದೆವು. ಅದನ್ನು ಕಡಿತ ಮಾಡಿದ್ದಾರೆ ಎಂದು ಡಿಕೆಶಿ ಪ್ರಶ್ನಿಸಿದರು. ಕೂಡಲೇ ಉಮೇಶ್ ಕತ್ತಿ ಅವರನ್ನು ಮಂತ್ರಿ ಸ್ಥಾನದಿಂದ ತೆಗೆಯಬೇಕು. ಜನರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ತೆಗೆಯಬೇಕು, ಇಂದಿನ ಪರಿಸ್ಥಿತಿಗೆ ಸರ್ಕಾರವೇ ಕಾರಣ. ಇದು ಉಢಾಪೆ ಅಲ್ಲ, ಇದು ಜವಾಬ್ದಾರಿ. ಹಿಂದೆ ಸಣ್ಣ ಪುಟ್ಟ ವಿಚಾರಗಳಿಗೆ ರಿಸೈನ್ ಮಾಡಿದ್ದಾರೆ ಎಂದರು. ಯಡಿಯೂರಪ್ಪ ಅವರೇ ನಿಮಗೆ ಅಧಿಕಾರ ಮುಖ್ಯವೇ? ಇದು ನಿಮ್ಮ ಜೀವನದ ಕೊನೆಯ ರಾಜಕಾರಣ. ಒಳ್ಳೆಯ ಹೆಸರು ತೆಗೆದುಕೊಳ್ಳಿ. ನೀವು ಒಂದು ವರ್ಷ ಇರುತ್ತಿರೋ, ಆರು ತಿಂಗಳು ಇರ್ತಿರೋ ಗೊತ್ತಿಲ್ಲ. ನೀವು ಜನರ ಪರವಾಗಿ ಇರುವುದನ್ನು ತೋರಿಸಬೇಕು. ಕೂಡಲೇ ಆ ಮಂತ್ರಿಯನ್ನು ತೆಗೆದುಹಾಕಿ ಎಂದು ಕೆಪಿಸಿಸಿ ಅಧ್ಯಕ್ಷ ಸಿಎಂಗೆ ಸವಾಲೆಸೆದರು.