ಸೋತಿರುವ ಮೂವರಿಗೆ ಖಂಡಿತ ಸಚಿವ ಸ್ಥಾನ; ಸುಧಾಕರ್
ಬೆಳಗಾವಿ, ನವೆಂಬರ್ 21: "ಕೊಟ್ಟ ಮಾತಿನಂತೆ ನಡೆದುಕೊಳ್ಳುವೆ ಎಂದು ಸಿಎಂ ಹಲವು ಬಾರಿ ಹೇಳಿದ್ದಾರೆ. ಅದರಂತೆ ಸೋತಿರುವ ಮೂವರನ್ನು ಈಗಾಗಲೇ ಎಂಎಲ್ ಸಿಗಳಾಗಿ ಮಾಡಿದ್ದಾರೆ. ಅವರನ್ನು ಸಚಿವರನ್ನಾಗಿಯೂ ಮಾಡುತ್ತಾರೆ ಎಂಬ ನಂಬಿಕೆಯಿದೆ" ಎಂದು ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿಗೆ ಬಂದವರಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಪ್ರತಿಕ್ರಿಯೆ ನೀಡಿದರು.
ಶನಿವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, "ಬೇರೆ ಪಕ್ಷಗಳನ್ನು ತೊರೆದು ಬಿಜೆಪಿಗೆ ಬಂದವರಿಗೆ ಎಂಎಲ್ ಸಿ ಸ್ಥಾನ ನೀಡಲಾಗಿದೆ. ರಾಜಕೀಯದಲ್ಲಿ ಮಾತು ನಡೆಸುವ ಪ್ರವೃತ್ತಿ ಇಟ್ಟುಕೊಂಡಿರುವುದು ಬಿಜೆಪಿ ಮಾತ್ರ. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಸದ್ಯಕ್ಕೆ ಮಾತನಾಡುವುದು ಬೇಡ, ಕಾದು ನೋಡಿ" ಎಂದು ಹೇಳಿದರು.
ಬಿಜೆಪಿಗೆ ಬಂದವರಿಗೆ ಯಡಿಯೂರಪ್ಪ ಅನ್ಯಾಯ ಮಾಡಿಲ್ಲ!
ರಮೇಶ್ ಜಾರಕಿಹೊಳಿ- ಬಿ.ಎಲ್.ಸಂತೋಷ್ ಭೇಟಿ ವಿಚಾರವಾಗಿಯೂ ಮಾತನಾಡಿದ ಅವರು "ರಮೇಶ್ ಜಾರಕಿಹೊಳಿ ಬಿ.ಎಲ್.ಸಂತೋಷ್ ಭೇಟಿಯಾಗೋದು ಅಪರಾಧಾನಾ? ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗೋದು ಅಪರೂಪ ಏನಲ್ವಲ್ಲ? ಅವಾಗವಾಗ ದೆಹಲಿಗೆ ಹೋಗ್ತಾ ಇರ್ತಾರೆ. ನೀರಾವರಿ ಇಲಾಖೆ ಕಡತಗಳ ನಿಂತಿರುತ್ತೆ, ಹೀಗಾಗಿ ಹೋಗಿರುತ್ತಾರೆ. ಬಿ.ಎಲ್.ಸಂತೋಷ್ಜೀ ನಮ್ಮ ಪಕ್ಷದ ದೊಡ್ಡ ಮಟ್ಟದ ನಾಯಕರು. ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಮಟ್ಟದ ನಾಯಕನ ಭೇಟಿಯಾಗುವ ಆಸೆ ಇರುತ್ತದೆ. ಸೌಜನ್ಯಯುತ ಭೇಟಿ, ಆಡಳಿತ ಹಾಗೂ ಇಲಾಖೆ, ರಾಜಕಾರಣ ಬಗ್ಗೆ ಮಾತನಾಡಿರಬಹುದು. ಇದರಲ್ಲಿ ಬೇರೆ ಏನಿಲ್ಲ" ಎಂದು ಹೇಳಿದರು.
ಈ ಸಂದರ್ಭ ಕೊರೊನಾ ಲಸಿಕೆಯ ಕುರಿತು ಮಾಹಿತಿ ನೀಡಿದ ಅವರು, ಕೊರೊನಾ ಲಸಿಕೆ ಇನ್ನೂ ಬಿಡುಗಡೆ ಆಗಿಲ್ಲ, ಅಧಿಕೃತ ಆದ ಮೇಲೆ ತಿಳಿಯುತ್ತದೆ. ಕೇಂದ್ರ ಸರ್ಕಾರ ಕ್ಲಿನಿಕಲ್ ಟ್ರಯಲ್ ನಡೆಸಿರುವ ಕಂಪನಿಗಳ ಜತೆ ಸಮಾಲೋಚನೆ ನಡೆಸಿ ಒಡಂಬಡಿಕೆ ಮಾಡಿಕೊಂಡಿದೆ. ಯಾವ ಕಂಪನಿಗೆ WHO ಅಧಿಕೃತ ಎಂದು ಘೋಷಣೆ ಮಾಡುತ್ತದೋ ಆ ಲಸಿಕೆ ಸಿಗುವ ಕೆಲಸ ಆಗುತ್ತದೆ. ಭಾರತ ದೇಶದಲ್ಲಿ ದೊಡ್ಡ ಮಟ್ಟಿಗೆ ಲಸಿಕೆ ಸಿಗುವ ಕೆಲಸ ಆಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಆರೋಗ್ಯ ಇಲಾಖೆಯಲ್ಲಿ ಜನಪರ ಬದಲಾವಣೆಗಳು ನಡೆಯುತ್ತಿದೆ. ಅಂತರರಾಷ್ಟ್ರೀಯ ಗುಣಮಟ್ಟದ 108 ಆಂಬುಲೆನ್ಸ್ ಸೇವೆಗೆ ಸಿದ್ಧತೆ ನಡೆಯುತ್ತಿದೆ. ರಾಜ್ಯದಲ್ಲಿ ಕಾಲೇಜುಗಳು ತೆರೆದಿದ್ದು, ಎಷ್ಟು ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ಬಂದಿದೆ ನಿಖರ ಮಾಹಿತಿ ಇಲ್ಲ. ಉನ್ನತ ಶಿಕ್ಷಣ ಸಚಿವರ ಜೊತೆ ಮಾತನಾಡಿ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು.
ಲಸಿಕೆ ಬಂದರೆ ಅದರ ಸಂಗ್ರಹಕ್ಕೆ ಎಲ್ಲ ವ್ಯವಸ್ಥೆ ಆಗಿದೆ. ಕೇಂದ್ರ ಆರೋಗ್ಯ ಸಚಿವರ ಜೊತೆ ವಿಡಿಯೋ ಸಂವಾದವೂ ಆಗಿದೆ. ಕೊರೊನಾ ಲಸಿಕೆ ಬಂದ ಮೇಲೆ ವಿತರಣೆ ನಿಧಾನ ಆಗದಂತೆ ಸಕಲ ವ್ಯವಸ್ಥೆ ನಡೆಸಲಾಗುತ್ತಿದೆ. ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲಸಿಕೆ ವಿತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.