"ಉನ್ನತ ಹುದ್ದೆಯಲ್ಲಿರುವವರು ಸಣ್ಣ ಹುದ್ದೆಯವರಿಗೆ ಅವಕಾಶ ನೀಡಲಿ"
ಬೆಳಗಾವಿ, ಅಕ್ಟೋಬರ್ 27: "ಉನ್ನತ ಹುದ್ದೆಯಲ್ಲಿರುವವರು ಸಣ್ಣ ಹುದ್ದೆಯಲ್ಲಿರುವವರಿಗೆ ಅವಕಾಶ ಮಾಡಿಕೊಟ್ಟು ತ್ಯಾಗ ಮಾಡಬೇಕು" ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಡಿಸಿಎಂ ಲಕ್ಷ್ಮಣ್ ಸವದಿ ಕುರಿತು ಹೇಳಿಕೆ ನೀಡಿದ್ದಾರೆ.
ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೊಡ್ಡ ಹುದ್ದೆಯಲ್ಲಿರುವವರು ಡಿಸಿಸಿ ಬ್ಯಾಂಕಿನಂತಹ ಸಣ್ಣ ಹುದ್ದೆಗಳನ್ನು ತ್ಯಾಗ ಮಾಡಬೇಕು. ದೊಡ್ಡ ಹುದ್ದೆಯಲ್ಲಿದ್ದವರು ಸಣ್ಣ ಹುದ್ದೆಗೆ ಬರಬಾರದು. ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಶಾಂತ ರೀತಿ ನಡೆಸಿ ಎಂದು ಆರ್ಎಸ್ಎಸ್ ನಾಯಕರು ನಮಗೆ ಸೂಚನೆ ಕೊಟ್ಟಿದ್ದಾರೆ. ಆ ಸೂಚನೆ ಪಾಲಿಸಬೇಕಾದರೆ ತ್ಯಾಗ ಮಾಡಲು ಸಿದ್ಧರಿರಬೇಕು. ಕಾರ್ಯಕರ್ತರಿಗೆ ಅವಕಾಶ ಕೊಡಬೇಕು" ಎಂದರು.
ಬಿಜೆಪಿ ಪರ ಪ್ರಚಾರ: ಪ್ರಕಾಶ್ ಹುಕ್ಕೇರಿ ಹೇಳಿಕೆಗೆ ಸತೀಶ್ ಜಾರಕಿಹೊಳಿ ಆಕ್ರೋಶ
"ನಾನು ಮನಸ್ಸು ಮಾಡಿದ್ದರೆ ನನ್ನ ಮಗನನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕನನ್ನಾಗಿ ಮಾಡಬಹುದು. ಆದರೆ ನಾನು ಕಾರ್ಯಕರ್ತನನ್ನು ನಿರ್ದೇಶಕನನ್ನಾಗಿ ಮಾಡುತ್ತೇನೆ. ತ್ಯಾಗ ಮಾಡಿದರೆ ಒಳ್ಳೆಯದಾಗುತ್ತೆ" ಎಂದು ಹೇಳಿದರು. ನವೆಂಬರ್ 6ಕ್ಕೆ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯಲಿದ್ದು, ಈ ಕುರಿತು ಇಂದು ಸಭೆ ನಡೆಸಲಾಗಿದೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆ ಅವಿರೋಧ ಆಯ್ಕೆಗೆ ಆರ್ಎಸ್ಎಸ್ ನಾಯಕರ ಸಲಹೆ ವಿಚಾರಕ್ಕೆ ಪ್ರತಿಕ್ರಿಯಿಸಿ, "ಆ ಸಭೆಯಲ್ಲಿ ನಾನಿರಲಿಲ್ಲ. ಆದರೆ ಅರವಿಂದರಾವ್ ದೇಶಪಾಂಡೆ ನಮ್ಮ ಮಾರ್ಗದರ್ಶಕರಾಗಿ ಹೇಳಿದ್ದಾರೆ. ಆ ಬಗ್ಗೆ ನಾವೆಲ್ಲರೂ ಸೇರಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಕಳೆದ 20 ವರ್ಷಗಳಿಂದ ಬೆಳಗಾವಿ ಡಿಸಿಸಿ ಬ್ಯಾಂಕ್ನಲ್ಲಿ ಎಲ್ಲಾ ಪಕ್ಷದವರು ನಿರ್ದೇಶಕರಿದ್ದಾರೆ. ನಿರ್ದೇಶಕರು ಯಾರಾಗಬೇಕು ಎಂಬುದನ್ನು ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ ನಿರ್ಧರಿಸುತ್ತಾರೆ. ಅವರ ನಿರ್ಣಯಕ್ಕೆ ನಾವು ಬದ್ಧ" ಎಂದರು.
ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ವೈಯಕ್ತಿಕ ಅಭಿಪ್ರಾಯದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ವೈಯಕ್ತಿಕವಾಗಿ ಪ್ರಕಾಶ್ ಹುಕ್ಕೇರಿ ಏನು ನಿರ್ಧರಿಸುತ್ತಾರೆ ಎಂಬುದನ್ನು ಮುಂದೆ ನೋಡೋಣ. ಪಕ್ಷದ ನಿರ್ಧಾರಕ್ಕೆ ನಾವು ಬದ್ಧ ಎಂದರು. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತೋ ಅವರನ್ನು ಗೆಲ್ಲಿಸಿ ತರುತ್ತೇವೆ. ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾರ್ಯಕರ್ತರ ದಂಡು ಸಿದ್ಧವಾಗಿದೆ. ಆದಷ್ಟು ಶೀಘ್ರವೇ ಚುನಾವಣೆ ನಿಗದಿಯಾಗಲಿ. ದಿ. ಸುರೇಶ್ ಅಂಗಡಿ ಮಾಡಿದ ಕೆಲಸ ಮುಂದುವರೆಸುವ ಅಭ್ಯರ್ಥಿ ಕೊಟ್ಟರೆ ಒಳ್ಳೆಯದು" ಎಂದರು.