ಮೇಲಿಂದ ಮೇಲೆ ದೆಹಲಿಗೆ ಹೋಗಬೇಕಾಗುತ್ತದೆ: ರಮೇಶ್ ಜಾರಕಿಹೊಳಿ
ಬೆಳಗಾವಿ, ನವೆಂಬರ್ 30: ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ವಿಚಾರವಾಗಿ ಮಾತನಾಡಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಯಾರು ತ್ಯಾಗ ಬಂದಿದ್ದಾರೆಯೋ, ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಅಂತಾ ನಮ್ಮ ಆಗ್ರಹವಿದೆ. ಸೋತವರ ಪರ ಲಾಬಿ ಮಾಡುವವರು, ಸಚಿವ ಸ್ಥಾನ ತ್ಯಾಗ ಮಾಡಲಿ ಎಂಬ ರೇಣುಕಾಚಾರ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜೀನಾಮೆ ನೀಡುವ ಟೈಮ್ ಬಂದರೆ ನೀಡೋಣ ಬಿಡಿ ಎಂದರು.
ಸಚಿವರಾಗುವಂತಿಲ್ಲ: ಎಚ್ ವಿಶ್ವನಾಥ್ ಅವರಿಗೆ ಭಾರಿ ಆಘಾತ ನೀಡಿದ ಹೈಕೋರ್ಟ್
ಮೈತ್ರಿ ಸರ್ಕಾರದಿಂದ ತ್ಯಾಗ ಮಾಡಿ ಬಂದ 17 ಶಾಸಕರಿಗೂ ಸಚಿವ ಸ್ಥಾನ ಸಿಗಬೇಕು. ಬಿಜೆಪಿ ಸರ್ಕಾರ ಬರಲು ಕಾರಣರಾದವರಿಗೂ ಸಿಗಬೇಕು ಎಂಬ ಒತ್ತಾಯವಿದೆ. ಶ್ರೀಮಂತ ಪಾಟೀಲ್ರನ್ನು ಸಂಪುಟದಿಂದ ಕೈ ಬಿಡುತ್ತಾರೆ ಎಂಬುದು ಸುಳ್ಳು. ಬಿಜೆಪಿಗೆ ಬಂದ 17 ಶಾಸಕರನ್ನು ಅಧಿಕಾರಾವಧಿ ಮುಗಿಯುವವರೆಗೂ ಯಾರನ್ನೂ ಡ್ರಾಪ್ ಮಾಡಲ್ಲ ಎಂದು ತಿಳಿಸಿದರು.
ಯಾರನ್ನೂ ಡ್ರಾಪ್ ಮಾಡಲ್ಲ ಅಂತಾ ಪೂರ್ಣ ಪ್ರಮಾಣದ ವಿಶ್ವಾಸವಿದೆ. ರೇಣುಕಾಚಾರ್ಯ ಆಗ್ರಹವೂ ಸರಿ ಇದ್ದು, ನಮ್ಮ ಆಗ್ರಹವೂ ಸರಿ ಇದೆ ಎಂದ ರಮೇಶ್ ಜಾರಕಿಹೊಳಿ, ಇಬ್ಬರೂ ಸೇರಿದ್ದರಿಂದ ಸರ್ಕಾರ ಆಗಿದೆ, ಒಬ್ಬರಿಂದಲೇ ಆಗಿಲ್ಲ ಎಂದು ಹೇಳಿದರು.
ನಮ್ಮ ಸಿಎಂ ಗಟ್ಟಿ ಇದ್ದಾರೆ, ಸಂಪುಟ ವಿಸ್ತರಣೆ ಮಾಡುತ್ತಾರೆ. ಮಿತ್ರ ಮಂಡಳಿ ಪ್ರತ್ಯೇಕ ಸಭೆ ಮಾಡಿದ್ದಾರೆಂಬುದು ಸುಳ್ಳು. ಆರ್.ಶಂಕರ್, ಎಚ್.ವಿಶ್ವನಾಥ್, ಎಂಟಿಬಿ ಸೇರಿ ಕ್ಯಾಸ್ಯೂಯಲ್ ಆಗಿ ಮಾತಾಡಿದ್ದಾರೆ. ರಮೇಶ್ ಜಾರಕಿಹೊಳಿ ವಿರುದ್ಧ ಬಂಡಾಯ ಅಂತಾ ದೊಡ್ಡದಾಗಿ ಮಾಧ್ಯಮಗಳಲ್ಲಿ ಬಂದಿದೆ. ಆದರೆ ಅದೇನು ದೊಡ್ಡ ಇಸ್ಯೂ ಅಲ್ಲ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಅವರು ಸಿಎಂ ಆಗಿ ಎರಡೂವರೆ ವರ್ಷನೂ ಮುಂದುವರೆಯುತ್ತಾರೆ. ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಮಾಡುತ್ತೇವೆ. ನನ್ನ ಮೇಲೆ ಸಿಎಂಗೆ ಪ್ರೀತಿ ಇದೆ, ನಾನೇನು ಅಂತಾ ಮಹಾನ್ ನಾಯಕ ಲೀಡರ್ ಇಲ್ಲ ಎಂದರು.
ಬಿಜೆಪಿಯಲ್ಲಿ ಮೂಲ ವಲಸಿಗ ಅಂತಾ ಇದೆ ಎಂಬುದು ಮಾಧ್ಯಮಗಳ ಸೃಷ್ಟಿ. ನೂರು ಸಲ ಹೇಳ್ತೇನೆ, ಮೂಲ ವಲಸಿಗ ಅನ್ನುವುದನ್ನು ಮಾಡಿದ್ದು ಮಾಧ್ಯಮದವರು. ನಾನು ಇಲಾಖೆ ಮೀಟಿಂಗ್ಗೆ ನವದೆಹಲಿಗೆ ಹೋಗಿದ್ದು, ನನ್ನ ಇಲಾಖೆ ದೊಡ್ಡದು, ಮೇಲಿಂದ ಮೇಲೆ ದೆಹಲಿಗೆ ಹೋಗಬೇಕಾಗುತ್ತದೆ ಎಂದು ಹೇಳಿದರು.
ಗುಂಪುಗಾರಿಕೆ, ಲೀಡರ್ಶಿಪ್ ಅಂತಾ ನಾನು ಯಾವತ್ತೂ ಮಾಡಲ್ಲ. ನಾನು ಪ್ರತಿ ಸಲ ದೆಹಲಿಗೆ ಹೋದಾಗ ನಾಯಕರನ್ನು ಮೀಟ್ ಮಾಡುತ್ತೇನೆ. ಹಾಗೇ ಬಿ.ಎಲ್.ಸಂತೋಷ್ರನ್ನು ಭೇಟಿಯಾಗಿ ಬಂದಿದ್ದೇನೆ. ಇಲಾಖೆ ಮೀಟಿಂಗ್, ಸಿ.ಟಿ ರವಿ ಕಚೇರಿ ಪೂಜೆಗೆ ಮಾತ್ರ ದೆಹಲಿಗೆ ಹೋಗಿದ್ದೆ ಎಂದು ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದರು.