ಬಿಜೆಪಿಗೆ ಜನ ಪೂರ್ಣ ಬಹುಮತ ಕೊಟ್ಟಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ: ಕೆ.ಎಸ್.ಈಶ್ವರಪ್ಪ
ಬೆಳಗಾವಿ, ಆಗಸ್ಟ್ 11: ಸಚಿವ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡುತ್ತಾರೆಂಬ ವಿಚಾರವಾಗಿ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ, "ಸರ್ಕಾರ ರಚನೆ ಮಾಡಿದ ಸಂದರ್ಭಗಳಲ್ಲಿ ಕೆಲವರಿಗೆ ಅಸಮಾಧಾನ ಆಗುವುದು ಸಹಜ. ರಾಜ್ಯದ ಜನ ಬಿಜೆಪಿಗೆ ಪೂರ್ಣ ಬಹುಮತ ಕೊಡಲಿಲ್ಲ, ಕೊಟ್ಟಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ,'' ಎಂದು ಹೇಳಿದರು.
"ಬೇರೆ ಪಕ್ಷದಿಂದ ಶಾಸಕರು ಬರಲಿಲ್ಲ ಅಂದಿದ್ದರೆ ನಮ್ಮ ಸರ್ಕಾರ ಬರುತ್ತಿರಲಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ಹಿರಿಯರು ಕರೆದು ಚರ್ಚಿಸಿ ಸಮಾಧಾನ ಮಾಡುತ್ತಾರೆಂಬ ವಿಶ್ವಾಸ ಇದೆ. ನಾನೂ ಕೂಡ ಈ ವಿಚಾರವಾಗಿ ಮಂಗಳವಾರ ಸಿಎಂ ಬೊಮ್ಮಾಯಿರನ್ನು ನಾನು ಭೇಟಿ ಮಾಡಿದ್ದೇನೆ, ಶಾಸಕ ಪ್ರೀತಂಗೌಡ ಹೇಳಿಕೆ ಬಗ್ಗೆಯೂ ಚರ್ಚೆ ಮಾಡಿದ್ದೇನೆ'' ಎಂದು ತಿಳಿಸಿದರು.
ಸಿದ್ದರಾಮಯ್ಯಗೆ ಕಟ್ಟ ಕನಸು ಬೀಳುತ್ತಿವೆ
ಇನ್ನು ಸರ್ಕಾರ ಬಹಳ ದಿನ ಇರಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಪ್ರತಿಕ್ರಿಯಿಸಿದ ಕೆ.ಎಸ್. ಈಶ್ವರಪ್ಪ, "ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಂಡಾಗಿನಿಂದ ಕೆಟ್ಟ ಕೆಟ್ಟ ಕನಸು ಬೀಳುತ್ತಿವೆ. ಒಳ್ಳೆಯ ಆಡಳಿತ ಕೊಟ್ಟಿದ್ದರೆ ಮರಳಿ ಅವರದೇ ಸರ್ಕಾರ ಅಧಿಕಾರಕ್ಕೆ ಬರುತ್ತಿತ್ತು. ಸೋತ ಮೇಲೂ ನಾನೇ ಮುಂದಿನ ಸಿಎಂ ಅಂತಾ ಹೇಳುತ್ತಿದ್ದಾರೆ, ಕಾಂಗ್ರೆಸ್ನವರು ಚುನಾವಣೆ ಸೋತ ಮೇಲೆ ವಿಲವಿಲ ಒದ್ದಾಡ್ತಿದ್ದಾರೆ,'' ಎಂದು ವ್ಯಂಗ್ಯವಾಡಿದರು.
"ಇನ್ನು ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಶಬ್ದ ಬಳಕೆ ವಿಚಾರವಾಗಿಯೂ ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪ, ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನನ್ನ ಸಂಘಟನೆ ಬೆಳೆಸಬೇಕು ಅಂತಾ ಮಾತನಾಡಿದ್ದೆ. ದೀನದಯಾಳ್ ಉಪಾಧ್ಯಾಯರನ್ನು ಕಗ್ಗೊಲೆ ಮಾಡಿ ಫುಟ್ಬಾತ್ನಲ್ಲಿ ಎಸೆದು ಹೋದರು. ಆಗ ಬೀ ಕಾಮ್ ಅಂತಾ ನಮ್ಮ ಹಿರಿಯರು ಹೇಳಿದ್ದರು, ಆಗ ನಮ್ಮ ಬಳಿ ಶಕ್ತಿ ಇರಲಿಲ್ಲ. ಈಗ ನಮ್ಮ ಶಕ್ತಿ ಜಾಸ್ತಿ ಇದೆ, ಈಗ ಫೇಸ್ ವಿತ್ ಸೇಮ್ ಸ್ಟಿಕ್ ಅಂದರು, ಅದನ್ನು ನಾನು ಹೇಳಿದ್ದೇನೆ,'' ಎಂದು ಸಮರ್ಥಿಸಿಕೊಂಡರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಗೋವು ಕಳ್ಳತನ
"ಸಿದ್ದರಾಮಯ್ಯ ಸರ್ಕಾರದಲ್ಲಿ ಗೋವು ಕಳ್ಳತನ ಮಾಡುವವರನ್ನು ತಡೆದರೆ ಕೊಲೆಗಳಾದವು. ಆಗ ಸಿದ್ದರಾಮಯ್ಯರನ್ನು ಕೇಳಿದಾಗ ಕೋಮುವಾದಿಗಳನ್ನು ಬಗ್ಗು ಬಡೀತಿವೆ ಅಂದರು. ನಮ್ಮ ಶಕ್ತಿ ಬೆಳೆಸಬೇಕು ಅಂತಾ ಹೇಳಿದ್ದು ತಪ್ಪಲ್ಲ, ಫೇಸ್ ವಿತ್ ಸೇಮ್ ಸ್ಟಿಕ್, ಹೊಡೆದರೆ ವಾಪಸ್ ಹೊಡೆಯಿರಿ ಅಂತಾ ನಮ್ಮ ಹಿರಿಯರು ಹೇಳಿದ್ದಾರೆ,'' ಎಂದರು.
"ನನಗೆ ಬಿಪಿ, ಶುಗರ್ ಇಲ್ಲ, ನನ್ನ ತಂಟೆಗೆ ಬಂದವರಿಗೆ ಬಿಪಿ, ಶುಗರ್ ಬರುತ್ತದೆ. ಪ್ರಧಾನಿ ನರೇಂದ್ರ ಮೋದಿ ಹೆಸರು ಸುಲಭ ಶೌಚಾಲಯಕ್ಕೆ ಹೆಸರಿಡಿ ಅಂತಾ ಹೇಳಿದ್ದು ಸರೀನಾ? ಜೋಕರ್ ಅಂದಿದ್ದಕ್ಕೆ ಸಿಟ್ಟು ಬಂತು. ಸುಲಭ ಶೌಚಾಲಯಕ್ಕೆ ಮೋದಿ ಹೆಸರಿಡಿ ಅಂದಿದ್ದು ಕೇಳಿ ರಕ್ತ ಕುದಿಯಿತು. ಸಿಟ್ಟಿನ ಭರದಲ್ಲಿ ಮಾತನಾಡಿ ತಕ್ಷಣವೇ ಆ ಪದ ವಾಪಸ್ ಪಡೆದಿದ್ದೇನೆ,'' ಎಂದು ಸ್ಪಷ್ಟಪಡಿಸಿದರು.
ಶಿವಮೊಗ್ಗ ಜನ ನನ್ನ ಐದು ಸಾರಿ ಆರಿಸಿ ಗೆಲ್ಲಿಸಿದರು
"ನಾಗಪುರ ಟ್ರೇನಿಂಗ್ ಬಂದಿದ್ದಕ್ಕೆ ಶಿವಮೊಗ್ಗ ಜನ ನನ್ನ ಐದು ಸಾರಿ ಆರಿಸಿ ಗೆಲ್ಲಿಸಿದರು. ನಾನು ಕ್ಷಮೆ ಕೇಳಿದೆ, ನೀವು ನೀಡಿದ ಹೇಳಿಕೆಗೆ ಕ್ಷಮೆ ಕೇಳಬೇಕಲ್ವಾ? ನಾನು ಆ ಪದ ಬಳಕೆ ಮಾಡಿದ್ದು ಹರಿಪ್ರಸಾದ್ಗೆ, ಎಲ್ಲಾ ಕಾಂಗ್ರೆಸ್ ನಾಯಕರಿಗಲ್ಲ. ನನಗೂ ಹರಿಪ್ರಸಾದ್ಗೂ ವೈಯಕ್ತಿಕ ದ್ವೇಷ ಇಲ್ಲ ಎಂದು ಬೆಳಗಾವಿಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಡಿ ಜಲಶಕ್ತಿ ಅಭಿಯಾನದಲ್ಲಿ ದೇಶದಲ್ಲೇ ರಾಜ್ಯಕ್ಕೆ ಮೊದಲನೇ ಸ್ಥಾನ ಲಭಿಸಿದೆ. ಜಲಶಕ್ತಿ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಇದಕ್ಕೆ ಪ್ರಧಾನಿ ಮೋದಿಯವರು ಕ್ಯಾಚ್ ದಿ ರೇನ್ ಅಂತಾ ಹೆಸರು ಕೊಟ್ಟರು,'' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
240ಕ್ಕೂ ಹೆಚ್ಚು ಹೊಸ ಕೆರೆಗಳ ನಿರ್ಮಾಣ
"2021ರ ಮಾರ್ಚ್ 22ರಲ್ಲಿ ಪ್ರಧಾನಿ ಮೋದಿ ಈ ಜಲಶಕ್ತಿ ಯೋಜನೆಗೆ ಚಾಲನೆ ನೀಡಿದರು. ಕರ್ನಾಟಕದಲ್ಲಿ ಏಪ್ರಿಲ್ 9ರಂದು ಹುಬ್ಬಳ್ಳಿಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಬೆಳಗಾವಿ ಜಿಲ್ಲೆಯಲ್ಲಿ 240ಕ್ಕೂ ಹೆಚ್ಚು ಹೊಸ ಕೆರೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಲ್ಯಾಣಿಗಳ ಪುನಶ್ಚೇತನಕ್ಕೆ ನಾವು ಹೆಚ್ಚು ಒತ್ತು ಕೊಟ್ಟಿದ್ದೇವೆ. ರಾಯಚೂರು ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಗೋಕಟ್ಟೆಗಳ ನಿರ್ಮಾಣ ಮಾಡಿದ್ದೀವೆ.''
"ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ರಾಮನಗರ ಜಿಲ್ಲೆಯಲ್ಲಿ ಅರಣ್ಯೀಕರಣ ಕಾಮಗಾರಿ ನಡೆಯುತ್ತಿದೆ. ಪ್ರಸಕ್ತ ಸಾಲಿನಲ್ಲಿ 2934.32 ಕೋಟಿ ವೆಚ್ಚ ಮಾಡಿದ್ದು, ಅದರಲ್ಲಿ 2408.50 ಕೋಟಿ ಜಲಶಕ್ತಿ ಅಭಿಯಾನಕ್ಕೆ ವೆಚ್ಚ ಮಾಡಲಾಗಿದೆ ಎಂದು ಬೆಳಗಾವಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
Recommended Video
ಕೋವಿಡ್ನಲ್ಲೂ ವಿಶೇಷ ಕಾಮಗಾರಿ ಮಾಡಿದೆ
"ನರೇಗಾ ಯೋಜನೆಯಡಿ ಜಾಬ್ ಹೋಲ್ಡರ್ಸ್ ಸೈನಿಕರಂತೆ ಕೆಲಸ ಮಾಡಿದರು. ರಾಜ್ಯದ 40 ಲಕ್ಷ ಜನ ಈ ಯೋಜನೆಗೆ ಬಹಳ ಶ್ರಮ ಹಾಕಿದ್ದಾರೆ. ಕೋವಿಡ್ನಲ್ಲೂ ವಿಶೇಷ ಕಾಮಗಾರಿ ಮಾಡಿದ್ದಾರೆ. ಕೋವಿಡ್ ವೇಳೆ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರಿಗೆ ಏನು ಕಾಮಗಾರಿ ಮಾಡಬೇಕು, ಹಣ ಹೇಗೆ ಜೋಡಿಸಬೇಕು, ಜನರಿಗೆ ಹೇಗೆ ಸ್ಪಂದಿಸಬೇಕು ಎಂಬ ಬಗ್ಗೆ ತರಬೇತಿ ತರಬೇತಿ ನೀಡಲಾಗಿತ್ತು.''
"ಬುಧವಾರದಿಂದ ಚಿಕ್ಕೋಡಿ, ಬೆಳಗಾವಿಯಲ್ಲಿ ಈ ತರಬೇತಿ ಕೈಗೊಂಡಿದ್ದೇವೆ, ನಮ್ಮ ಸರ್ಕಾರ ಅವಧಿ ಇನ್ನೂ ಒಂದು ವರ್ಷ ಹತ್ತು ತಿಂಗಳು ಇದೆ. ಗ್ರಾಮ ಪಂಚಾಯತ್ಗಳಿಗೆ ಕೆರೆಗಳ ಅಭಿವೃದ್ಧಿಗೆ ಅವಕಾಶ ಕೊಟ್ಟಿದ್ದೇವೆ, ಕೆರೆಗಳ ಅಭಿವೃದ್ಧಿ ಗುರಿ ಇಟ್ಟುಕೊಂಡಿದ್ದೇವೆ,'' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಾಧನೆಗಳ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ ಪ್ರಸ್ತಾಪಿಸಿದರು.