ಸುರೇಶ ಅಂಗಡಿ ಸಾವು ಅರಗಿಸಿಕೊಳ್ಳಲು ಆಗುತ್ತಿಲ್ಲ; ಜಗದೀಶ್ ಶೆಟ್ಟರ್ ಬೇಸರದ ನುಡಿ
ಬೆಳಗಾವಿ, ಸೆಪ್ಟೆಂಬರ್ 25: ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರ ನಿಧನ ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಅಂಗಡಿ ಅವರ ಸಂಬಂಧಿಕರೂ ಆದ ಸಚಿವ ಜಗದೀಶ್ ಶೆಟ್ಟರ್ ದುಃಖ ಹಂಚಿಕೊಂಡರು. ಬೆಳಗಾವಿಯಲ್ಲಿ ಇಂದು ನಡೆದ ಸುರೇಶ ಅಂಗಡಿ ಅವರ ಮೂರನೇ ದಿನದ ಪುಣ್ಯತಿಥಿ ಕಾರ್ಯದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸುರೇಶ ಅಂಗಡಿ ಅವರು ನಮ್ಮ ಬೀಗರಾಗುವ ಮುನ್ನವೂ ಸಹ ನನ್ನ ಜತೆ ಆಪ್ತರಾಗಿದ್ದರು. ನಾನು ಅವರು ಬೆಳಗಾವಿ ಜಿಲ್ಲೆಯ ಹಲವೆಡೆ ಒಟ್ಟಿಗೆ ಹಗಲಿರುಳು ಓಡಾಡಿ ಪಕ್ಷ ಸಂಘಟನೆ ಮಾಡಿದ್ದೇವೆ. ಅವರಿಗೆ ಕಳೆದ ಲೋಕಸಭೆ ಚುನಾವಣೆ ವೇಳೆ ಟಿಕೆಟ್ ಸಿಗಲ್ಲ ಅನ್ನೋ ಮಾತುಗಳು ಬಂದಾಗಲೂ ಸಹ ಅವರು ಪಕ್ಷ ನಿಷ್ಠರಾಗಿದ್ದರು. ಸುರೇಶ ಅಂಗಡಿಯವರಿಗೆ ಅವರ ಆರೋಗ್ಯದ ಕಾಳಜಿಗಿಂತಲೂ ಜನರ ಸೇವೆನೇ ಹೆಚ್ಚಾಗಿತ್ತು ಎಂದರು.
ಲೋ ಬಿಪಿಯಾಗಿ ಹೃದಯಾಘಾತದಿಂದ ನಿಧನರಾದರು
ಅವರು ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದರು ಅನ್ನುವ ಮಾತುಗಳು ಸಹ ಕೇಳಿಬಂದವು. ಆದರೆ ಅವರಿಗೆ ಜನ ಸೇವೆ ಮೇಲೆಯೇ ಹೆಚ್ಚು ಆಸಕ್ತಿ ಇತ್ತು. ಅವರು ಆಸ್ಪತ್ರೆಗೆ ದಾಖಲಾದ ನಂತರ ನಾನು ಪ್ರತಿನಿತ್ಯ ಪುತ್ರನ ಮೂಲಕ ವರದಿ ತರಿಸಿಕೊಳ್ಳುತ್ತಿದ್ದೆ. ಅವರು ಹುಷಾರ್ ಆದರು ಅನ್ನುವಾಗಲೇ ಲೋ ಬಿಪಿಯಾಗಿ ಹೃದಯಾಘಾತದಿಂದ ನಿಧನರಾದರು ಎಂದು ತಿಳಿಸಿದರು.
ಪಂಚಭೂತಗಳಲ್ಲಿ ಸುರೇಶ ಅಂಗಡಿ ಲೀನ; ಮುಗಿಲು ಮುಟ್ಟಿದ ಹೆತ್ತ ತಾಯಿಯ ಆಕ್ರಂದನ
ಸುರೇಶ ಅಂಗಡಿಯವರು ರಾಜ್ಯದಲ್ಲಿ ಹಲವು ರೇಲ್ವೆ ಯೋಜನೆಗಳನ್ನು ಜಾರಿಗೆ ತಂದಿದ್ದರು. ಕೊರೊನಾದಿಂದ ಬಲಿಯಾಗುತ್ತಾರೆ ಅಂತಾ ಯಾರೂ ಅಂದುಕೊಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾನೂನು ತೊಡಕಿನಿಂದ ಪಾರ್ಥಿವ ಶರೀರ ತರಲಾಗಲಿಲ್ಲ
ಜನಮಾನಸದಲ್ಲಿ ಸುರೇಶ್ ಅಂಗಡಿಯವರು ಸದಾ ಇರುತ್ತಾರೆ. ಇಬ್ಬರು ಹೆಣ್ಣು ಮಕ್ಕಳನ್ನು ಗಂಡು ಮಕ್ಕಳ ಹಾಗೆಯೇ ಬೆಳೆಸಿದರು. ಸುರೇಶ್ ಅಂಗಡಿ ಪಾರ್ಥಿವ ಶರೀರ ಬೆಳಗಾವಿಗೆ ತರಲು ನಾವು ಸಹ ಪ್ರಯತ್ನಿಸಿದೆವು. ಕಾನೂನು ತೊಡಕು ಇರುವುದರಿಂದ ಎಸ್ಓಪಿ ಪ್ರಕಾರ ಆಗಲ್ಲ ಎಂದರು.
ಸುರೇಶ್ ಅಂಗಡಿ ಸ್ಮಾರಕ ನಿರ್ಮಾಣ
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಮೃತಪಟ್ಟಾಗಲೂ ಅವರ ಅಂತ್ಯಕ್ರಿಯೆ ದೆಹಲಿಯಲ್ಲೇ ನೆರವೇರಿಸಲಾಗಿತ್ತು. ಕೊರೊನಾ ಮಾರ್ಗಸೂಚಿ ಪ್ರಕಾರ ಪಾರ್ಥಿವ ಶರೀರ ತರಲು ಆಗಲಿಲ್ಲ. ಅವರ ಅಂತ್ಯಕ್ರಿಯೆಯಲ್ಲೂ ಜನರು ಭಾಗವಹಿಸಲು ಆಗಲಿಲ್ಲ. ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಸ್ಮಾರಕ ನಿರ್ಮಾಣ ಸಂಬಂಧ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶೆಟ್ಟರ್ ಹೇಳಿದರು.
ದೆಹಲಿಯಿಂದ ಮರಳಿದ ಅಂಗಡಿ ಕುಟುಂಬ
ಕೊರೊನಾ ವೈರಸ್ ನಿಂದ ಸಾವನ್ನಪ್ಪಿದ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದ ಅಂಗಡಿ ಕುಟುಂಬ ಸದಸ್ಯರು ಇಂದು ಬೆಳಗ್ಗೆ ಮರಳಿದರು. ದೆಹಲಿಯಿಂದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸುರೇಶ ಅಂಗಡಿ ಕುಟುಂಬಸ್ಥರು, ಸಂಬಂಧಿಕರನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತರು. ಬಳಿಕ ಮನೆಗೆ ತೆರಳಿ ಸುರೇಶ ಅಂಗಡಿ ಅವರ ಪುಣ್ಯತಿಥಿ ನೆರವೇರಿಸಿದರು.