ಟೀಕೆಗಳ ಬಳಿಕ ಸಚಿವ ಜಗದೀಶ್ ಶೆಟ್ಟರ್ ಚೀನಾ ಪ್ರವಾಸ ರದ್ದು
ಬೆಳಗಾವಿ, ನವೆಂಬರ್ 01 : "ವಿದೇಶ ಪ್ರವಾಸವೆಂದರೆ ಪಾಪದ ಕೆಲಸವೇನ್ರೀ?" ಎಂದು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಮತ್ತು ಸಚಿವ ಜಗದೀಶ್ ಶೆಟ್ಟರ್ ಚೀನಾ ಪ್ರವಾಸ ರದ್ದುಗೊಳಿಸಿದ್ದಾರೆ. ಸಚಿವರ ವಿದೇಶ ಪ್ರವಾಸದ ಬಗ್ಗೆ ಭಾರಿ ಚರ್ಚೆ ನಡೆದಿತ್ತು.
ಶುಕ್ರವಾರ ಬೆಳಗಾವಿಯಲ್ಲಿ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, "ನೆರೆಯಿಂದಾಗಿ ಜನರು ಸಂಕಷ್ಟದಲ್ಲಿರುವುದರಿಂದ ಪ್ರವಾಸ ರದ್ದುಪಡಿಸಿದ್ದೇನೆ" ಎಂದು ಹೇಳಿದರು. ಈ ಮೂಲಕ ವಿವಾದಕ್ಕೆ ತೆರೆ ಎಳೆದರು.
"ಇದೇನು ನನ್ನ ಖಾಸಗಿ ಪ್ರವಾಸವಾಗಿರಲಿಲ್ಲ. ಚೀನಾ ಸರ್ಕಾರದ ಆಹ್ವಾನದ ಮೇರೆಗೆ ಅಲ್ಲಿಗೆ ಹೋಗಲು ಯೋಜಿಸಿದ್ದೆ. ಜನಪ್ರತಿನಿಧಿಯಾಗಿ ನಾನು ಹೋಗುತ್ತಿಲ್ಲ. ಆದರೆ, ಇಲಾಖೆಯ ಹಿರಿಯ ಅಧಿಕಾರಿಗಳು ಹೋಗುತ್ತಾರೆ" ಎಂದು ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಿದರು.
ಚೀನಾದಲ್ಲಿ ನವೆಂಬರ್ 6 ಮತ್ತು 7ರಂದು ನಡೆಯುವ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಜಗದೀಶ್ ಶೆಟ್ಟರ್ ಹೋಗಬೇಕಿತ್ತು. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಅವರು ಎಲ್ಲಾ ತಾಲೂಕಿಗೆ ಭೇಟಿ ನೀಡದೆ ಚೀನಾ ಪ್ರವಾಸ ಕೈಗೊಂಡಿದ್ದಾರೆ ಎಂದು ಟೀಕೆಗಳು ಕೇಳಿ ಬಂದಿತ್ತು.
ಇದರಲ್ಲಿ ಹೊಸದೇನು ಇಲ್ಲ
"ಚೀನಾ ಸರ್ಕಾರದ ಆಹ್ವಾನದ ಮೇಲೆ ಅಲ್ಲಿಗೆ ಹೋಗಲು ಯೋಜಿಸಿದ್ದೆ. ಸರ್ಕಾರದ ಪರವಾಗಿ ಅಧಿಕಾರಿಗಳು ಹೋಗುತ್ತಿದ್ದಾರೆ. ಅಲ್ಲಿನ ಅಧಿಕಾರಿಗಳು ಇಲ್ಲಿಗೆ, ಇಲ್ಲಿನವರು ಬೇರೆ ಕಡೆ ಹೋಗುವುದು ಸಾಮಾನ್ಯ ಪ್ರಕ್ರಿಯೆ. ಇದು ಹೊಸದೇನು ಅಲ್ಲ" ಎಂದು ಜಗದೀಶ್ ಶೆಟ್ಟರ್ ಹೇಳಿದರು.
ರೋಡ್ ಶೋ ನಡೆಸಬೇಕಾಗುತ್ತದೆ
"ಚೀನಾದ ಸಚಿವರು ಇಲ್ಲಿಗೆ ಬಂದು ಮಾಹಿತಿ ಪಡೆದು ಹೋಗಿದ್ದಾರೆ. ನಾವು ಮುಂದಿನ ದಿನಗಳಲ್ಲಿ ಹೂಡಿಕೆದಾರರ ಸಮಾವೇಶ ಮಾಡಬೇಕಿದೆ. ಆ ಕುರಿತು ಮಂತ್ರಿಯಾದ ನಾನು ಸೇರಿದಂತೆ ಅಧಿಕಾರಿಗಳು ವಿದೇಶಕ್ಕೆ ಹೋಗಬೇಕಾಗುತ್ತದೆ. ರೋಡ್ ಶೋ ನಡೆಸಿ, ರಾಜ್ಯದ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ" ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಎಲ್ಲಾ ಸರ್ಕಾರಗಳಲ್ಲೂ ನಡೆಯುತ್ತದೆ
"ಕೈಗಾರಿಕಾ ಬೆಳವಣಿಗೆಗೆ ರಾಜ್ಯದಲ್ಲಿ ಇರುವ ಪೂರಕ ವಾತಾವರಣದ ಬಗ್ಗೆ ವಿದೇಶಗಳಲ್ಲಿ ತಿಳಿಸಬೇಕಾಗುತ್ತದೆ, ಬಂಡವಾಳ ಆಕರ್ಷಿಸಬೇಕಾಗುತ್ತದೆ. ಇದು ಎಲ್ಲಾ ಸರ್ಕಾರದಲ್ಲೂ ನಡೆಯುವಂತಹ ಸಹಜ ಪ್ರಕ್ರಿಯೆ" ಎಂದು ಜಗದೀಶ್ ಶೆಟ್ಟರ್ ಸಮರ್ಥನೆ ನೀಡಿದರು.
ಇಡೀ ಸರ್ಕಾರ ಅವರ ಜೊತೆ ಇದೆ
"ಪ್ರವಾಹದಿಂದ ಬೆಳಗಾವಿಯಲ್ಲಿ ಅಪಾರ ಹಾನಿಯಾಗಿದೆ. ಇಡೀ ಸರ್ಕಾರವೇ ಅವರೊಂದಿಗೆ ಇದೆ. ಅಧಿಕಾರಿಗಳು ಹಾಗೂ ಇತರ ಸಚಿವರು ಭೇಟಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ನಾನೂ ಪ್ರವಾಸ ಮಾಡುವೆ" ಎಂದು ಜಗದೀಶ್ ಶೆಟ್ಟರ್ ಹೇಳಿದರು.