ಬಿ.ಕೆ ಹರಿಪ್ರಸಾದ್ ಆರೋಪಕ್ಕೆ ತಿರುಗೇಟು ಕೊಟ್ಟ ಸಚಿವ ಬಿ.ಸಿ ಪಾಟೀಲ್
ಬೆಳಗಾವಿ, ಸೆಪ್ಟೆಂಬರ್ 14: ಬಿಜೆಪಿ ನಾಯಕರು ಅಫೀಮು ಸೇವಿಸುತ್ತಾರೆ ಎಂಬ ಬಿ.ಕೆ ಹರಿಪ್ರಸಾದ್ ಆರೋಪಕ್ಕೆ ಕೃಷಿ ಸಚಿವ ಬಿ.ಸಿ ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ""ಬಿ.ಕೆ ಹರಿಪ್ರಸಾದ್ ಹೇಳಿದ ತಕ್ಷಣ ಅದು ವೇದವಾಕ್ಯ ಅಲ್ಲ, ಅವರು ಬ್ರಹ್ಮನೂ ಅಲ್ಲ. ಬಿಜೆಪಿ ನಾಯಕರು ಡ್ರಗ್ಸ್ ಸೇವಿಸುವುದನ್ನು ಬಿ.ಕೆ ಹರಿಪ್ರಸಾದ್ ಯಾವಾಗಾದರೂ ನೋಡಿದ್ದಾರಾ?'' ಎಂದು ಸಚಿವ ಬಿ.ಸಿ ಪಾಟೀಲ್ ಪ್ರಶ್ನಿಸಿದರು.
ಬಿಜೆಪಿಯ ದೊಡ್ಡ ದೊಡ್ಡ ನಾಯಕರೂ ಡ್ರಗ್ಸ್ ತೆಗೆದುಕೊಳ್ಳುತ್ತಾರೆ; ಬಿ.ಕೆ ಹರಿಪ್ರಸಾದ ಹೊಸ ಬಾಂಬ್
ಡ್ರಗ್ಸ್ ವಿಷಯ ಗೊತ್ತಿದ್ದರೆ ಮೊದಲೇ ಹೇಳಬೇಕಿತ್ತಲ್ಲ, ಇಷ್ಟು ದಿನ ಏಕೆ ಬಾಯಿ ಮುಚ್ಚಿಕೊಂಡು ಇದ್ದರು. ಸುಮ್ಮನೇ ಆಪಾದನೆ ಮಾಡಿ ಹೋಗುವುದು ತಪ್ಪು ಎಂದು ಹರಿಹಾಯ್ದರು.
ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ ಸರ್ಕಾರ ವೈಫಲ್ಯ ಮುಚ್ಚಿಹಾಕಲು ಯತ್ನ ನಡೆದಿದೆ ಎಂಬ ಆರೋಪ ನಿರಾಕರಿಸಿದ ಅವರು, ಮೋದಿ ಸರ್ಕಾರ ಬಗ್ಗೆ ಪ್ರಶ್ನೆ ಮಾಡುವ ಯೋಗ್ಯತೆ ಕಾಂಗ್ರೆಸ್ ಗೆ ಇಲ್ಲ. ಇನ್ನು 50 ವರ್ಷ ಕಾಂಗ್ರೆಸ್ ವಿರೋಧ ಪಕ್ಷದಲ್ಲೇ ಇರಬೇಕಾಗುತ್ತದೆ ಅಂತ ಗುಲಾಂನಬಿ ಆಜಾದ್ ಅವರೇ ಹೇಳಿದ್ದಾರೆ ಎಂದರು.
""ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರೇ ಒಪ್ಪಿಕೊಂಡಿದ್ದಾರೆ, ಬಿಜೆಪಿ ಸರ್ಕಾರ ವೈಫಲ್ಯ ಎಲ್ಲಿಂದ ಬಂತು? ಬಿಎಸ್ ವೈ ಸಿಎಂ ಆದ ಮೇಲೆ ಏಕಾಂಗಿ ಆಗಿ ಪ್ರವಾಹ ಪರಿಸ್ಥಿತಿ, ಬರಗಾಲ ನಿಭಾಯಿಸಿದರು. ಇವತ್ತು ಕೋವಿಡ್ ಸಹ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.''
ರಾಜ್ಯ, ಕೇಂದ್ರ ಸರ್ಕಾರದಲ್ಲಿ ಯಾವುದೇ ವೈಫಲ್ಯ ಇಲ್ಲ. ಮುಚ್ಚಿಹಾಕುವ ಅವಶ್ಯಕತೆ ಇಲ್ಲ ಸತ್ಯಾಂಶ ಹೇಳುತ್ತಿದ್ದೇವೆ ಅಷ್ಟೇ. ನಾವು ಯಾರನ್ನು ಯಾರೂ ಟಾರ್ಗೆಟ್ ಮಾಡಿಲ್ಲ. ಅವರೇ ಹೇಳಿಕೊಳ್ಳುತ್ತಾರಷ್ಟೇ. ಅಲ್ಪಸಂಖ್ಯಾತರ ಓಲೈಸಲು ಕಾಂಗ್ರೆಸ್ ನವರು ಆಗಾಗ ಈ ಪದ ಬಳಸುತ್ತಾರೆ ಎಂದು ಬಿ.ಸಿ ಪಾಟೀಲ್ ಹೇಳಿದರು.
""ಸ್ಯಾಂಡಲ್ ವುಡ್, ಟಾಲಿವುಡ್, ಬಾಲಿವುಡ್ ಎಲ್ಲ ವುಡ್ಗಳಲ್ಲಿ ನಶೆ ಇದ್ದೇ ಇದೆ. ಅದನ್ನು ಬಳಕೆ ಮಾಡುವ ವ್ಯಕ್ತಿಗಳ ಚಾರಿತ್ರ್ಯ ಬಗ್ಗೆ ಯೋಚನೆ ಮಾಡಬೇಕು.''
ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾದಲ್ಲಿ ಕೇವಲ ನಟಿಯರಿದ್ದಾರಾ? ಕಿಂಗ್ಪಿನ್ಗಳನ್ನು ಬಂಧಿಸುತ್ತಿಲ್ಲಾ ಎಂಬ ಆರೋಪದ ವಿಚಾರಕ್ಕೆ ಡ್ರಗ್ ಮಾಫಿಯಾ ಬಗ್ಗೆ ತನಿಖೆ ನಡೆಯುತ್ತಿದೆ. ಕಿಂಗ್ಪಿನ್ ಗಳು, ಗಂಡಸರು, ಹೆಂಗಸರು ಇದ್ದಾರೆ. ರಾಜಕಾರಣಿಗಳ ಮಕ್ಕಳು ಇದ್ದರೂ ಯಾರನ್ನೂ ಬಿಡಲ್ಲ. ಅವರನ್ನು ಮಟ್ಟ ಹಾಕುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು.