ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ವಿರೋಧಿಸಿ ಎಂಇಎಸ್ ಕರಾಳ ದಿನಾಚರಣೆ
ಬೆಳಗಾವಿ, ನವೆಂಬರ್ 1: ಕರ್ನಾಟಕ ರಾಜ್ಯೋತ್ಸವ ವಿರೋಧಿಸಿ ಕರಾಳ ದಿನಾಚರಣೆ ಆಚರಿಸುತ್ತಿರುವ ಎಂಇಎಸ್ ಪ್ರತಿಭಟನಾ ಸಭೆಗೆ ಮಹಾರಾಷ್ಟ್ರ ನಾಯಕರು ಆಗಮಿಸಿದ್ದಾರೆ.
ಎನ್ಸಿಪಿ ಮಹಿಳಾ ಘಟಕದ ಅಧ್ಯಕ್ಷೆ ರೂಪಾಲಿ ಚಾಕನಕರ್ ಆಗಮಿಸಿದ್ದು, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಸಭೆಗೆ ಬಂದಿದ್ದಾರೆ. ನಾಡದ್ರೋಹಿ ಎಂಇಎಸ್ ಕಾರ್ಯಕರ್ತರಿಗೆ ಮಹಾರಾಷ್ಟ್ರ ನಾಯಕರು ಬೆಂಬಲ ನೀಡಿದ್ದಾರೆ.
ಕುಂದಾನಗರಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ: ಎಂಇಎಸ್ಗೆ ಮುಖಭಂಗ
ಎನ್ಸಿಪಿ ವರಿಷ್ಠ ಶರದ್ ಪವಾರ್ ಆದೇಶದ ಮೇರೆಗೆ ಸಭೆಗೆ ಬಂದಿದ್ದೇನೆ ಎಂದು ಎನ್ಸಿಪಿ ನಾಯಕಿ ರೂಪಾಲಿ ಚಾಕನಕರ್ ಹೇಳಿದ್ದಾರೆ. ಕರ್ನಾಟಕ ಸರ್ಕಾರ ಕರಾಳ ದಿನ ನಿಷೇಧಿಸಿದ್ದರೂ ನಾವು ಮಹಾರಾಷ್ಟ್ರದಲ್ಲಿ ಕಪ್ಪು ಪಟ್ಟಿ ಧರಿಸಿ ಕರಾಳ ದಿನ ಆಚರಿಸುತ್ತಿದ್ದೇವೆ ಎಂದರು.
ಪೊಲೀಸರು ತಡೆಯೊಡ್ಡುತ್ತಾರೆಂದು ಗೊತ್ತಿದ್ದು, ಅವರ ಕಣ್ತಪ್ಪಿಸಿ ಸಭೆಗೆ ಬಂದಿದ್ದೇನೆ. ಗಡಿಭಾಗದ ಮರಾಠಿಗರ ಮೇಲೆ ಕರ್ನಾಟಕ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ ಎಂದು ಎಂಇಎಸ್ ಪ್ರತಿಭಟನಾ ಸಭೆ ಉದ್ದೇಶಿಸಿ ರೂಪಾಲಿ ಚಾಕನಕರ್ ಭಾಷಣ ಮಾಡಿದರು.
ಇದೇ ಸಂದರ್ಭದಲ್ಲಿ ಎಂಇಎಸ್ ಪ್ರತಿಭಟನಾ ಸಭೆ ನಡೆಸುತ್ತಿದ್ದ ಸ್ಥಳಕ್ಕೆ ಮೆರವಣಿಗೆ ಮೂಲಕ ಆಗಮಿಸುತ್ತಿದ್ದ ಕರವೇ ಕಾರ್ಯಕರ್ತರಿಗೆ ತಡೆಯೊಡ್ಡಲಾಯಿತು. ಎಂಇಎಸ್ ಕರಾಳ ದಿನ ಬಂದ್ ಆಗಬೇಕು ಎಂದು ಘೋಷಣೆ ಕೂಗುತ್ತಾ, ರೇಲ್ವೆ ಓವರ್ ಬ್ರಿಡ್ಜ್ ಮೇಲೆ ಕುಳಿತು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಮಗೆ ಮೆರವಣಿಗೆ ಅವಕಾಶ ಕೊಟ್ಟಿಲ್ಲ, ಎಂಇಎಸ್ಗೆ ಸಭೆ ನಡೆಸಲು ಅನುಮತಿ ನೀಡಿದ್ದೇಕೆ ಎಂದು ಎಂಇಎಸ್ ಪುಂಡರ ಪರ ನಿಂತ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರವೇ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು.
ಎಂಇಎಸ್ ಕರಾಳ ದಿನಾಚರಣೆ ಪ್ರತಿಭಟನಾ ಸಭೆ ನಡೆಸುತ್ತಿದ್ದ ಸ್ಥಳಕ್ಕೆ ಕೈಯಲ್ಲಿ ಕನ್ನಡ ಧ್ವಜ ಹಿಡಿದು ಸಭೆಗೆ ನುಗ್ಗಿಸಲು ಯತ್ನಿಸಿದವನಿಗೆ ತಡೆಯಲಾಯಿತು. ಈ ಘಟನೆ ಮರಾಠಾ ಮಂದಿರ ಮಂಗಲ ಕಾರ್ಯಾಲಯದ ಹೊರಗೆ ನಡೆದಿದೆ.
ಹೋರಾಟಗಾರನ ಕೈಯಲ್ಲಿದ್ದ ಕನ್ನಡ ಧ್ವಜವನ್ನು ಪೊಲೀಸರು ಕಸಿದುಕೊಂಡು, ಜೀಪ್ ನಲ್ಲಿ ಕರೆದೊಯ್ದರು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಎಂಇಎಸ್ ನಾಯಕಿ, ಮಾಜಿ ಉಪಮೇಯರ್ ರೇಣು ಕಿಲ್ಲೇಕರ್ ನಾಡದ್ರೋಹಿ ಘೋಷಣೆ ಕೂಗಿದರು.