ನಮ್ಮಿಬ್ಬರ ಮಧ್ಯೆ ಕಮ್ಯುನಿಕೇಷನ್ ಗ್ಯಾಪ್ ಆಗಿದೆ: ಪತ್ನಿ ಆರೋಪಕ್ಕೆ ಕೆ.ಕಲ್ಯಾಣ್ ಸ್ಪಷ್ಟನೆ
ಬೆಳಗಾವಿ, ಅಕ್ಟೋಬರ್ 4: ನಾನು ನನ್ನ ಹೆಂಡತಿ ಚೆನ್ನಾಗಿದ್ದೇವೆ, ಯಾವುದೇ ಭಿನ್ನಾಭಿಪ್ರಾಯ ಇದ್ದಿಲ್ಲ. ಆದರೆ ನನ್ನ ಪತ್ನಿ ನನ್ನ ಬಗ್ಗೆ ಏಕಾಏಕಿ ಆರೋಪ ಮಾಡಿದ್ದಾರೆ. ನಮ್ಮಿಬ್ಬರ ಮಧ್ಯೆ ಕಮ್ಯುನಿಕೇಷನ್ ಗ್ಯಾಪ್ ಆಗಿದ್ದು, ಅವರ ಹೇಳಿಕೆಗೆ ಸ್ಪಷ್ಟನೆ ಕೊಡಲು ಸುದ್ದಿಗೋಷ್ಠಿ ಕರೆದಿದ್ದೇನೆ ಎಂದು ಚಿತ್ರ ಸಾಹಿತಿ ಕೆ.ಕಲ್ಯಾಣ್ ಹೇಳಿದರು.
ಮನೆಯಲ್ಲಿ ರಿಪೇರಿ ಕಾರ್ಯ ಇದೆ ಅಂತಾ ಅತ್ತೆ ಮಾವನ ಜತೆಗೆ ಬೆಳಗಾವಿಗೆ ಬಂದಳು, ಇದಾದ ಬಳಿಕ ಜನವರಿ 10 ರಿಂದ ಮೊಬೈಲ್ ಕನೆಕ್ಟ್ ಆಗುತ್ತಿರಲಿಲ್ಲ. ಕೆಲವು ದಿನಗಳ ನಂತರ ಬೆಳಗಾವಿಗೆ ನಾನು ಬಂದಿದ್ದೆ. ಆಗ ಪತ್ನಿ ನೋಡಲು ಅತ್ತೆ ಬಿಡಲಿಲ್ಲ, ಅಲ್ಲಿ ಗಂಗಾ ಕುಲಕರ್ಣಿ ಕೂಡ ಇದ್ದರು. ಮನೆಯಲ್ಲಿ ವಿಚಿತ್ರವಾದ ಪೂಜೆ ಮಾಡುತ್ತಿರುವುದು ಗೊತ್ತಾಯಿತು. ನಂತರ ನನ್ನ ನಂಬರ್ ನ ಸಂಬಂಧಿಕರ ಕಡೆ ಹೇಳಿ ಬ್ಲಾಕ್ ಮಾಡಿಸಿದರು.
ಪತ್ನಿ ವಿಚಿತ್ರವಾಗಿ ವರ್ತಿಸಲು ಆರಂಭಿಸಿದರು
ನಾನು ಮತ್ತೆ ಬರುತ್ತೇನೆ ಅಂತಾ ಬೇರೆ ಮನೆಗೆ ಶಿಫ್ಟ್ ಆಗಿದ್ದರು. ಜೂನ್ 5 ರಂದು ಮತ್ತೆ ಬೆಳಗಾವಿಗೆ ಬಂದಾಗ ಮನೆ ಸಿಕ್ಕಿತು. ಪತ್ನಿ ಅಶ್ವಿನಿ ಜೊತೆಗೆ ಮಾತನಾಡುವಾಗ ಆಕೆಯ ಕತ್ತಿನಲ್ಲಿ ಮಾಂಗಲ್ಯ ಮತ್ತು ಕಾಲುಂಗುರ ಇರಲಿಲ್ಲ. ಯಾಕೆ ಮಾಂಗಲ್ಯ ಇಲ್ಲ ಅಂತಾ ಕೇಳಿದಾಗ ಅದು ಇದ್ದರಷ್ಟೇ ಗಂಡ ಹೆಂಡತಿನಾ? ಅಂತಾ ಹೆಂಡತಿ ಪ್ರಶ್ನೆ ಮಾಡಿದಳು. ಇದಾದ ಸ್ವಲ್ಪ ಹೊತ್ತಿಗೆ ಪತ್ನಿ ಹಣೆಗೆ ಕುಂಕುಮ ಹಚ್ಚಿಕೊಂಡು ಕರೆದುಕೊಂಡು ಬಂದರು, ಆಗ ಪತ್ನಿ ವಿಚಿತ್ರವಾಗಿ ವರ್ತಿಸಲು ಆರಂಭಿಸಿದರು. ಅಮವಾಸ್ಯೆ ದಿನ ಪೂಜೆ ಮಾಡಬೇಕು ಅಂತಾ ಲಕ್ಷಗಟ್ಟಲೆ ಹಣ ಪಡೆದಿದ್ದರು ಈ ವಿಚಾರ ಸಂಬಂಧಿಕರಿಗೆ ಗೊತ್ತಾಗಿತ್ತು. ಶಿವನಾಂದ ವಾಲಿಗೆ ಎಂಬುವವರಿಗೆ ಎಲ್ಲಾ ಹಣ ವರ್ಗಾವಣೆ ಮಾಡಲಾಗಿತ್ತು.
ನಾನು ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಮಾಡಿಲ್ಲ
ಮಾನಸಿಕವಾಗಿ, ದೈಹಿಕವಾಗಿ ನನಗೆ ಹಿಂಸೆ ನೀಡಿದ್ದಾರೆ ಎಂದು ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಆರೋಪಿಸಿದ್ದರು. ಆದರೆ ಕೆ.ಕಲ್ಯಾಣ್ ಪತ್ನಿಯ ಆರೋಪಗಳನ್ನು ತಳ್ಳಿ ಹಾಕಿದ್ದು, ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೇಮಕವಿ, ಬೆಳಗಾವಿಗೆ ಬಂದ ಮೇಲೆ ಒಂದು ದಿನವೂ ನನ್ನ ವಿರುದ್ಧ ಮಾತನಾಡವರು ಇಂದು ಏಕಾಏಕಿ ಪತ್ನಿ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ನನ್ನ ಪತ್ನಿ ಅವರ ಕುಟುಂಬದವರ ಜೊತೆಗೂ ಸಂಪರ್ಕದಲ್ಲೂ ಇಲ್ಲ. ಪತ್ನಿಯ ಆಸ್ತಿಯ ಮೇಲೆ ನನಗೆ ಆಸಕ್ತಿ ಇದ್ದಿದ್ದರೆ 15 ವರ್ಷದಲ್ಲಿ ಬರೆಸಿಕೊಳ್ಳಬಹುದಿತ್ತು. ಆದರೆ ನಾನು ನನ್ನ ಪತ್ನಿಯನ್ನು ತುಂಬಾ ಪ್ರೀತಿಸುವೆ. ನಾನು ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಮಾಡಿಲ್ಲ. ಈ ಆರೋಪವನ್ನು ನಾನು ಒಪ್ಪಲ್ಲ ಎಂದು ಸ್ಪಷ್ಟಪಡಿಸಿದರು.
ಮಂತ್ರದ ಮೂಲಕ ಏಕೆ ಆಸ್ತಿ ಪಡೆಯಲು ಯೋಜನೆ ಮಾಡಲಿ
ನನ್ನ ಹೆಂಡತಿ ತುಂಬಾ ಒಳ್ಳೆಯವಳು. ನಾನು ಹಿಂಸೆ ಕೊಟ್ಟಿದ್ದರೆ ಇಷ್ಟು ವರ್ಷ ಸುಮ್ಮನೆ ಯಾಕೆ ಇರಬೇಕಿತ್ತು ಎಂದು ಪ್ರಶ್ನೆ ಮಾಡಿದರು. ಮೊದಲಿಗೆ ನಾನು ಮಾಟ, ಮಂತ್ರ ನಂಬಲ್ಲ. ಹೀಗಾಗಿ ನಾನೇ ಮಾಟ, ಮಂತ್ರದ ಮೂಲಕ ಏಕೆ ಆಸ್ತಿ ಪಡೆಯಲು ಯೋಜನೆ ಮಾಡಲಿ. ಒಂದು ವೇಳೆ ನನಗೆ ಬ್ಲ್ಯಾಕ್ ಮ್ಯಾಜಿಕ್ ಬಂದಿದ್ದರೆ ನನ್ನ ಪತ್ನಿ ಬೆಳಗಾವಿಗೆ ಹೋಗುವುದನ್ನೇ ನಾನು ತಪ್ಪಿಸುತ್ತಿದ್ದೆ. ನಾನು ಬೆಂಗಳೂರಿನಲ್ಲಿ ಇದ್ದುಕೊಂಡು ಆಕೆಯನ್ನು ವಾಪಸ್ ಕರೆಸಿಕೊಳ್ಳುತ್ತಿದ್ದೆ ಎಂದರು.
ನಾನು ಮಾಟ ಮಂತ್ರ ನಂಬಲ್ಲ
ನನ್ನ ಪತ್ನಿಯ ಕುಟುಂಬಸ್ಥರು ನನ್ನ ಜೊತೆ ಸಂಪರ್ಕದಲ್ಲಿ ಇದ್ದಾರೆ. ಡೈವೋರ್ಸ್ ಅರ್ಜಿ ಹಾಕಿದ್ದರೆ ನನಗೆ ನೋಟೀಸ್ ಬರಬೇಕಿತ್ತು. ಆದರೆ ಶನಿವಾರ ನನಗೆ ಈ ವಿಚಾರ ಗೊತ್ತಾಗಿದೆ. ಪ್ರೀತಿಯನ್ನು, ಮನಸ್ಸುಗಳನ್ನು ಬಲವಂತವಾಗಿ ಕಟ್ಟಿ ಹಾಕಲು ಆಗಲ್ಲ. ನನ್ನ ಪತ್ನಿ ವಿವೇಚನೆಯಿಂದ ಮಾತನಾಡುತ್ತಿಲ್ಲ. ನನ್ನ ಪತ್ನಿಯ ಹೆಸರಿನ ಆಸ್ತಿ ಶಿವಾನಂದ ವಾಲಿ ಹೆಸರಿಗೆ ಹೋಗಿದೆ. ನಾನು ಮಾಟ ಮಂತ್ರ ನಂಬಲ್ಲ. ಆದರೆ ಶಿವಾನಂದ ವಾಲಿ ಮಾಟ ಮಂತ್ರದಿಂದ ನನ್ನ ಪತ್ನಿಯ ಮೇಲೆ ಬ್ಲಾಕ್ ಮ್ಯಾಜಿಕ್ ಮಾಡಿದ್ದಾರೆ. ಇದರಿಂದ ಸಂಸಾರದಲ್ಲಿ ಬಿರುಕು ಹುಟ್ಟಿಸಿದ್ದಾರೆ. ನಮ್ಮ ಜೀವನದಲ್ಲಿ ಬಿರುಕು ಇರಲಿಲ್ಲ. ಆದರೆ ಶಿವಾನಂದ ವಾಲಿ ಬಿರುಕು ತಂದಿದ್ದಾರೆ ಎಂದು ಆರೋಪಿದರು.
ನಾನು ಮನವೊಲಿಸುವ ಪ್ರಯತ್ನ ಮಾಡುವೆ
ನಾನು ನನ್ನ ಪತ್ನಿಯನ್ನು ಮನವೊಲಿಸಬೇಕಾಗಿಲ್ಲ. ಆದರೆ ನನ್ನನ್ನು ಪತ್ನಿ ಜೊತೆ ಮಾತನಾಡಲು ಬಿಡುತ್ತಿಲ್ಲ. ನಮ್ಮಿಬ್ಬರ ಮಧ್ಯೆ ಬಿರುಕು ಅನ್ನುವುದೇ ಇಲ್ಲ. ಪತ್ನಿಯ ಜೊತೆ ಕೆಲ ಗಂಟೆಗಳ ಕಾಲ ಜೊತೆಗೆ ಇದ್ದರೆ ಸಾಕು ಸರಿ ಹೋಗುತ್ತದೆ. ನಾನು ನನ್ನ ಪತ್ನಿಯನ್ನು ಮನವೊಲಿಸಲು ಅವಳನ್ನ ತಬ್ಬಿಕೊಂಡು, ಮುತ್ತುಕೊಟ್ಟು. ತಲೆ ನೇವರಿಸಿ, ಕಾಲಿಗೆ ಬಿದ್ದು ಮನವೊಲಿಸಬಹುದು. ಆದರೆ ಇದೂ ನಮ್ಮ ಖಾಸಗಿ ಬದುಕು. ಈಗ ಸಾರ್ವಜನಿಕ ಆಗಿರುವುದರಿಂದ ಉತ್ತರಿಸುತ್ತಿರುವೆ. ನಮ್ಮಿಬ್ಬರ ಮಧ್ಯೆ ಕಮ್ಯೂನಿಕೇಷನ್ ಗ್ಯಾಪ್ ಆಗಿದೆ. ಕವನ, ಸಾಹಿತ್ಯದಿಂದ ಪ್ರೀತಿ ಪಡೆಯಲು ಸಾಧ್ಯವಿಲ್ಲ. ತೀರಾ ಮೀತಿ ಮೀರಿ ಡೈವೋರ್ಸ್ ಅಂತ ಬಂದರೆ ನ್ಯಾಯಾಲಯದಲ್ಲಿ ಕೌನ್ಸಿಲಿಂಗ್ ವೇಳೆ ನಾನು ಮನವೊಲಿಸುವ ಪ್ರಯತ್ನ ಮಾಡುವೆ ಎಂದರು.
ಮನಸ್ಸುಗಳು ಒಡೆದರೆ ಒಂದಾಗುವುದು ಕಷ್ಟ
ಸಂಸಾರದಲ್ಲಿ ಬಿರುಕುಗಳು ಸಹಜ, ಆದರೆ ಒತ್ತಡದಿಂದ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಎಲ್ಲವೂ ಒಳ್ಳೆಯದಾಗುತ್ತೆ ಅನ್ನುವ ನಂಬಿಕೆ ಇದೆ. ಗಂಡ ಹೆಂಡತಿಯನ್ನು ಬದುಕಲು ಬಿಡಿ. ಹಣ ಹೋದರೆ ಗಳಿಸಬಹುದು. ಆದರೆ ಮನಸ್ಸುಗಳು ಒಡೆದರೆ ಒಂದಾಗುವುದು ಕಷ್ಟ. ನನ್ನ ಪತ್ನಿಯ ಸಂಬಂಧಿಕರು ನನ್ನ ಜೊತೆ ಇದ್ದಾರೆ. ನನ್ನ ಪತ್ನಿಯನ್ನು ಕೌನ್ಸಲಿಂಗ್ ಮಾಡುತ್ತಿದ್ದಾರೆ. ಸದ್ಯಕ್ಕೆ ನನ್ನ ಪತ್ನಿ ಭಯದ ವಾತಾವರಣದಲ್ಲಿ ಇದ್ದಾರೆ. ಆಪ್ತ ಸಮಾಲೋಚನೆಗೆ ಕರೆದರೆ ನಾನು ಹೋಗುವೆ. ಪತ್ನಿಯೂ ಸಹ ಸುಧಾರಿಸಿಕೊಳ್ಳಲಿ, ನಾನು ಭೇಟಿ ಮಾಡಿ ಮನವೊಲಿಸುವೆ ಎಂದು ಕೆ.ಕಲ್ಯಾಣ್ ತಿಳಿಸಿದರು.
ಕೆ.ಕಲ್ಯಾಣ ಪತ್ನಿ ಸಂಮೋಹನಕ್ಕೆ ಒಳಗಾಗಿರಬಹುದು
ಕೆ.ಕಲ್ಯಾಣ ಪರ ವಕೀಲ ಜಾಹೀರ್ ಅಬ್ಬಾಜ್ ಹತ್ತರಕಿ ಮಾತನಾಡಿ, ವಿಚ್ಛೇದನ ಬಗ್ಗೆ ನಮಗೆ ಮಾಧ್ಯಮದ ಮುಖಾಂತರ ಗೊತ್ತಾಗಿದೆ. ಕೋರ್ಟ್ ನಿಂದ ಸಮನ್ಸ್ ನಮಗೆ ಬಂದಿಲ್ಲ. ಈ ಪ್ರಕರಣದಲ್ಲಿ ಮೌಢ್ಯತೆ ಕಾಯ್ದೆ ಕಾನೂನು ಅನ್ವಯಿಸುತ್ತೆ ಇಲ್ಲ ಗೊತ್ತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಕೆ.ಕಲ್ಯಾಣ ಪತ್ನಿ ಸಂಮೋಹನಕ್ಕೆ ಒಳಗಾಗಿರಬಹುದು, ಕೌನ್ಸಲಿಂಗ್ ಆಗಲಿ. ಶಿವಾನಂದ ವಾಲಿ ಮತ್ತು ಗಂಗಾ ಕುಲಕರ್ಣಿ ಬಂಧನ ಕುರಿತು ಅಧಿಕೃತ ಮಾಹಿತಿ ಇಲ್ಲವೆಂದರು.