ಬೆಳಗಾವಿಯಲ್ಲಿ ಮರಾಠಿ ನಾಮಫಲಕ ಹಾಕಿದ ಮಹಾರಾಷ್ಟ್ರ
ಬೆಳಗಾವಿ, ಜೂನ್ 19 : ಮಹಾರಾಷ್ಟ್ರ ನಾಮಫಲಕ ವಿಚಾರವಾಗಿ ಇದೀಗ ಮತ್ತೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬೆಳಗಾವಿ ಜಿಲ್ಲೆಯ ಗಡಿ ಭಾಗವಾದ ಸಂಕೇಶ್ವರ ಸಮಿಪದ ಗಡಹಿಂಗ್ಲಜ್ ರಸ್ತೆಯ ಸೇತುವೆಯ ಬಳಿ ಮರಾಠಿ ಭಾಷೆಯಲ್ಲಿ ನಾಮ ಫಲ ಹಾಕಿದ್ದಾರೆ.
ಸ್ಥಳೀಯರ ಮನವಿ ಮೇರೆಗೆ ನಾಮಫಲಕ ತೆರವುಗೊಳಿಸಿರುವುದು ಸ್ವಾಗತಾರ್ಹ. ಸ್ಥಳೀಯ ಅಧಿಕಾರಿಗಳು ಇಂತಹ ಘಟನೆ ಮತ್ತಾಗದಂತೆ ಎಚ್ಚರಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಮಹೇಶ್ ಜೋಶಿ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕರ್ನಾಟಕ ಗಡಿಯಲ್ಲಿ ಮರಾಠಿ ಭಾಷೆಯಲ್ಲಿ ನಾಮಫಲಕ ಹಾಕಿರುವುದು ಖಂಡನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಗಡಿ ಭಾಗವಾದ ಸಂಕೇಶ್ವರ ಸಮಿಪದ ಗಡಹಿಂಗ್ಲಜ್ ರಸ್ತೆಯ ಸೇತುವೆಯ ಬಳಿ ಮರಾಠಿ ಭಾಷೆಯಲ್ಲಿ ಮಹಾರಾಷ್ಟ್ರ ಅಧಿಕಾರಿಗಳು ನಾಮಫಲಕ ಹಾಕಿದ್ದರು. ಇದನ್ನು ಸ್ಥಳೀಯ ಕನ್ನಡ ಪರ ಸಂಘಟನೆಗಳು ಗಮನಿಸಿ ಆಕ್ರೋಶ ವ್ಯಕ್ತ ಪಡಿಸಿದ್ದವು.
ಈ ಹಿನ್ನೆಲೆಯಲ್ಲಿ ಸಂಕೇಶ್ವರ ಪೊಲೀಸರು ರಾಜ್ಯದೊಳಗೆ ಇರುವ ಮಹಾರಾಷ್ಟ್ರ ಲೋಕೋಪಯೋಗಿ ಇಲಾಖೆ ನಾಮಫಲಕ ತೆರವು ಮಾಡಿದ್ದಾರೆ. ಗಡಿಯಲ್ಲಿ ಆಗಾಗ್ಗೆ ಕ್ಯಾತೆ ಮಾಡುವುದು ಮರಾಠಿಗರ ಪದ್ಧತಿಯಾಗಿದೆ. ಕನ್ನಡ ನೆಲದಲ್ಲಿ ಮರಾಠಿ ಭಾಷೆಯಲ್ಲಿ ನಾಮಫಲಕದಂತಹ ಘಟನೆ ಗಡಿಭಾಗದ ಜನರಲ್ಲಿ ಮತ್ತೇ ಭಾಷಾ ವಿವಾದ ಕಿಡಿ ಹಚ್ಚಿದಂತಾಗುತ್ತದೆ. ಇದು ಅಶಾಂತಿಗೆ ದಾರಿ ಮಾಡಿಕೊಡಲಿದ್ದು, ಹಾಗಾಗದಂತೆ ಎಚ್ಚರ ವಹಿಸಬೇಕು ಎಂದು ಮಹೇಶ್ ಜೋಶಿ ಹೇಳಿದ್ದಾರೆ.
ಅಧಿಕಾರಿಗಳ ಮೌನ ಸಹಿಸಲ್ಲ: ಅನ್ಯ ಭಾಷಿಕರು ನಮ್ಮ ನಾಡಿನ ಗಡಿಭಾಗದಲ್ಲಿ ನಾಮಫಲಕ ಮೂಲಕ ಭಾಷಾ ವಿರೋಧಿ ಕೃತ್ಯ ನಡೆಸಿದರೂ ಅಲ್ಲಿನ ಅಧಿಕಾರಿಗಳು ಮೌನ ವಹಿಸಿದ್ದು ಏಕೆ ಎಂದು ಜೋಶಿ ಪ್ರಶ್ನಿಸಿದ್ದಾರೆ. ಇಂತಹ ಕೃತ್ಯ ಎಸಗದಂತೆ, ಪುನರಾವರ್ತನೆ ಆಗದಂತೆ ಕರ್ನಾಟಕದ ಸ್ಥಳೀಯ ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ, ಸ್ಥಳೀಯ ಪೊಲೀಸ್ ಇಲಾಖೆ ಎಚ್ಚರ ವಹಿಸುವುದು ಅಗತ್ಯವಾಗಿದೆ. ಮಹಾರಾಷ್ಟ್ರ ಸರ್ಕಾರ ನಮ್ಮ ನೆಲದಲ್ಲಿ ನಾಮಫಲಕ ಹಾಕುವವರೆಗೆ ನಮ್ಮ ಅಧಿಕಾರಿಗಳು ಮೌನವಹಿಸಿದ್ದು ತಪ್ಪು. ಇಂತಹ ವರ್ತನೆ ನೋಡಿ ಕನ್ನಡಿಗರು ಸಹಿಸಲ್ಲ ಎಂದು ಎಚ್ಚರಿಸಿದ್ದಾರೆ.