ಬೆಳಗಾವಿ; ತುಂಬಿ ಹರಿಯುತ್ತಿರುವ ಮಲಪ್ರಭೆಯಿಂದ ಮತ್ತೆ ಪ್ರವಾಹ ಭೀತಿ
ಬೆಳಗಾವಿ, ಸೆಪ್ಟೆಂಬರ್ 10: ಈಚೆಗಷ್ಟೆ ಭಾರೀ ಮಳೆಯಿಂದಾಗಿ ಪ್ರವಾಹ ಎದುರಿಸಿದ್ದ ಬೆಳಗಾವಿಯಲ್ಲಿ ಮತ್ತೆ ಆತಂಕ ಶುರುವಾಗಿದೆ. ಕಳೆದ ನಾಲ್ಕು ದಿನಗಳಿಂದಲೂ ಮಳೆ ಅಬ್ಬರಿಸುತ್ತಿದ್ದು, ನದಿ ಪಾತ್ರದ ಗ್ರಾಮಗಳಿಗೆ ಮತ್ತೆ ಪ್ರವಾಹದ ಭೀತಿ ಕಾಡುತ್ತಿದೆ.
ಮಳೆಯಿಂದಾಗಿ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದ ಹೊರ ವಲಯದಲ್ಲಿ ಹಾದು ಹೋಗುವ ಮಲಪ್ರಭಾ ನದಿ ದಂಡೆ ಮೇಲೆ ಶರಣೆ ಗಂಗಾಂಬಿಕಾ ಐಕ್ಯ ಮಂಟಪ ಮುಳುಗುವ ಸಾಧ್ಯತೆ ಇದೆ. ನದಿ ತೀರದ ಜಮೀನುಗಳಿಗೆ ನೀರು ನುಗ್ಗುತ್ತಿದ್ದು, ಜಲಾವೃತವಾಗುತ್ತಿವೆ. ರೈತರಿಗೆ ಬೆಳೆ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ಬೆಳಗಾವಿ: ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ತಂಡ ಭೇಟಿ, ಸಿಕ್ಕಿತೇ ಪರಿಹಾರ?
ಕಬ್ಬಿನ ಹಾಗೂ ಭತ್ತದ ಗದ್ದೆಗಳು ನದಿಯಂತಾಗಿವೆ. ಉದ್ದು, ಸೋಯಾ, ತರಕಾರಿ ಬೆಳೆಗಳು ಮಳೆಯಿಂದ ಹಾಳಾಗಿವೆ. ಇಷ್ಟಾದರೂ ಅಧಿಕಾರಿಗಳು ಸರ್ವೆ ಕಾರ್ಯ ಆರಂಭಿಸಿಲ್ಲ. ಕಳೆದ ವರ್ಷ ಕೂಡ ಇದೇ ರೀತಿ ಪ್ರವಾಹದಲ್ಲಿ ಬೆಳೆ ಹಾನಿಯಾಗಿತ್ತು. ಅದಕ್ಕೂ ಪರಿಹಾರ ಕೊಟ್ಟಿಲ್ಲ. ಇದೀಗ ಮತ್ತದೇ ಧೋರಣೆ ಮುಂದುವರೆದಿದೆ ಎಂಬ ದೂರು ರೈತರದ್ದು.
ಜಿಲ್ಲೆಯ ಚಿಕ್ಕೋಡಿ ಪಟ್ಟಣದ ತಗ್ಗು ಪ್ರದೇಶದ 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮಲಪ್ರಭಾ ನದಿ ನೀರಿನ ಪ್ರಮಾಣದಲ್ಲಿ ಆರು ಅಡಿಯಷ್ಟು ನೀರು ಏರಿಕೆಯಾಗಿದ್ದು, ನವಿಲು ತೀರ್ಥ ಜಲಾಶಯದಿಂದ 13 ಸಾವಿರ ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಇದರಿಂದ ರಾಮದುರ್ಗ ತಾಲೂಕಿನ ಹತ್ತಕ್ಕೂ ಅಧಿಕ ಗ್ರಾಮಗಳಿಗೆ ಮತ್ತೆ ಮುಳಗಡೆ ಭೀತಿ ಆರಂಭವಾಗಿದೆ. ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಇನ್ನಷ್ಟು ನೀರು ಬಿಡುವ ಸಾಧ್ಯತೆ ಇದೆ. ನದಿಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ತಾಲೂಕಾಡಳಿತ ಸೂಚನೆ ನೀಡಲಾಗಿದೆ.