ಗಡಿ ತಂಟೆ ಬಗ್ಗೆ ಕೇಂದ್ರದ ಮೌನಕ್ಕೆ ಹೊರಟ್ಟಿ ಆಕ್ರೋಶ
ಬೆಳಗಾವಿ, ನವೆಂಬರ್ 22 : ಮಹಾನ್ಯಾಯವಾದಿ ಮೇಹರ್ ಚಂದ ಮಹಾಜನ ಅವರು ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಇತ್ಯರ್ಥ ಪಡಿಸಿ ವರದಿ ನೀಡಿ 50 ವರ್ಷ ಕಳೆದರೂ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿಲ್ಲ ಎಂದು ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಪ್ರಶ್ನಿಸಿದರು,
ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಪರಿಷತ್ ನಲ್ಲಿ ಚರ್ಚಿಸುವ ಸಂದರ್ಭದಲ್ಲಿ ವಿಸೃತವಾಗಿ ಮಾತನಾಡಿದರು. ಸಂಸತ್ತಿನಲ್ಲಿ ನಮ್ಮ ರಾಜ್ಯದ ಸಂಸದರು ಗಟ್ಟಿ ಧ್ವನಿ ಎಬ್ಬಿಸಿದ್ದರಿಂದ ಗಡಿ ಸಮಸ್ಯೆ ಹಾಗೇ ಉಳಿದಿದೆ. ಬೆಳಗಾವಿಯಲ್ಲಿ ಮರಾಠಿ ಬೋರ್ಟುಗಳು ಯಾಕೆ ಇದೆ, ಇಲ್ಲಿಯ ಅನ್ನ, ನೀರು ಸ್ವೀಕರಿಸಿ ನಮ್ಮ ನೆಲದಲ್ಲಿ ಮರಾಠಿಗರು ಕರಾಳ ದಿನ ಆಚರಿಸುತ್ತಿದ್ದಾರೆ ಎಂದರೆ ಏನರ್ಥ ಎಂದು ಮರಾಠಿಗರ ವಿರುದ್ಧ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಕಪ್ಪು ಬಟ್ಟೆ ಕಟ್ಟಿಕೊಂಡು ಕರಾಳ ದಿನ ಆಚರಿಸುವ ಮೇಯರ್ ಅವರನ್ನು ನಮ್ಮ ಸರ್ಕಾರ ಯಾಕೆ ಸುಮ್ಮನೆ ಬಿಟ್ಟಿದೆ. ಎಂಇಇಎಸ್ ಬೆಂಬಲಿತ ಎಂಎಲ್ ಎ ಗಳು ಕರ್ನಾಟಕ ಸರ್ಕಾರದ ವಿರುದ್ಧ ಮಾತನಾಡುತ್ತಾರೆ ಎಂದರೆ ಎಷ್ಟು ಧೈರ್ಯವಿರಬೇಕು. ಮರಾಠಿಗರ ಮಹಾಮೇಳಕ್ಕೆ ಯಾಕೆ ಅನುಮತಿ ಕೊಡುತ್ತೀರಿ ಎಂದು ಹೊರಟ್ಟಿ ಸರ್ಕಾರವನ್ನು ಪ್ರಶ್ನಿಸಿದರು.
ಸುಮಾರು 816 ಹಳ್ಳಿಗಳು,9 ನಗರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಆಸೆಬುರುಕ ಮಹಾರಾಷ್ಟ್ರ ಹುನ್ನಾರ ಮಾಡಿಕೊಂಡಿದೆ. ನಮ್ಮ ಸರ್ಕಾರ ನಿಷ್ಕಾಳಜಿ ಮಾಡಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ರಾಜಕೀಯ ಒಗ್ಗಟ್ಟು ಮಾಡಿಕೊಂಡು ಈಗ ಮಹಾರಾಷ್ಟ್ರ ಮತ್ತು ಮರಾಠಿಗರಿಗೆ, ಕರ್ನಾಟಕ ರಾಜ್ಯ ಸರ್ಕಾರ ಟಾಂಗ್ ಕೊಡಬೇಕು ಎಂದರು.
ನ್ಯಾಯಾಲಯಕ್ಕೆ ಸಾಕ್ಷ್ಯಾಧಾರಗಳು ಬೇಕು, ಸೂಕ್ತ ಎಚ್ಚರಿಕೆಯ ಹೆಜ್ಜೆ ಸರ್ಕಾರ ಇಟ್ಟಾಗ ಸರ್ವಚ್ಛ ನ್ಯಾಯಾಲಯದಲ್ಲಿ ನಮಗೆ ಮುನ್ನಡೆ ಸಿಗುತ್ತದೆ. ಕರ್ನಾಟಕದ ಎಲ್ಲ ರಾಜಕಾರಣಿಗಳು ಮಹಾರಾಷ್ಟ್ರದ ಮೊಂಡುತನ ಮುರಿಯಲು ಮುಂದಾಗಬೇಕು. ರಾಜ್ಯದ ಸಭ್ಯತೆ ನಮಗೆ ಮುಳುವಾಗಬಾರದು ಎಂದು ಕರೆ ನೀಡಿದರು.