ಸಿಡಿ ಸಂಕಟ; ಬೆಳಗಾವಿ ಉಪ ಚುನಾವಣೆಗೆ ಪರ್ಯಾಯ ನಾಯಕತ್ವ?
ಬೆಳಗಾವಿ, ಮಾರ್ಚ್ 19: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಘೋಷಣೆಯಾಗಿದೆ. ಏಪ್ರಿಲ್ 17ರಂದು ಮತದಾನ ನಡೆಯಲಿದ್ದು, ಮೇ 2ರಂದು ಮತ ಎಣಿಕೆ ನಡೆಯಲಿದೆ. ಬಿಜೆಪಿ ಉಪ ಚುನಾವಣೆ ಗೆಲುವಿಗಾಗಿ ಸಾಕಷ್ಟು ತಂತ್ರಗಳನ್ನು ರೂಪಿಸುತ್ತಿದೆ.
ಸಿಡಿ ಪ್ರಕರಣದಿಂದಾಗಿ ಬೆಳಗಾವಿ ಭಾಗದ ಪ್ರಭಾವಿ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಉಪ ಚುನಾವಣೆ ಎದುರಾಗಿರುವುದು ಉಪಚುನಾವಣೆಗೆ ಪರ್ಯಾಯ ನಾಯಕತ್ವದ ಹುಡುಕಾಟ ಮಾಡುವಂತೆ ಮಾಡಿದೆ.
ಬೆಳಗಾವಿ ಉಪ ಚುನಾವಣೆ; ಬರಲಿದೆ ಹೊಸ ಕೋವಿಡ್ ಮಾರ್ಗಸೂಚಿ
ರಮೇಶ್ ಜಾರಕಿಹೊಳಿ ಅವರಿಗೆ ಉಪಚುನಾವಣೆಯ ಸಂಪೂರ್ಣ ಉಸ್ತುವಾರಿ ವಹಸಲು ಬಿಜೆಪಿ ನಾಯಕರು ತೀರ್ಮಾನಿಸಿದ್ದರು. ಆದರೆ ಈಗ ನಡೆದಿರುವ ಬೆಳವಣಿಗೆಗಳಿಂದಾಗಿ ಚುನಾವಣೆ ಕಣದಿಂದ ಅವರನ್ನು ದೂರವಿಡುವ ಸಾಧ್ಯತೆ ಇದೆ.
ಬೆಳಗಾವಿ ಲೋಕಸಭೆ ಉಪ ಚುನಾವಣೆ ದಿನಾಂಕ ಘೋಷಣೆ
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 2019ರಲ್ಲಿ ಬಿಜೆಪಿಯೇ ಗೆದ್ದಿತ್ತು. ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದಾಗಿ ಈಗ ಉಪ ಚುನಾವಣೆ ಎದುರಾಗಿದೆ. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ಆದ್ದರಿಂದ ಚುನಾವಣೆ ಗೆಲ್ಲುವುದು ಸುಲಭ ಎಂಬುದು ಲೆಕ್ಕಾಚಾರವಾಗಿದೆ.
ಮಸ್ಕಿ ಉಪ ಚುನಾವಣೆ; ಜನರು ತಕ್ಕಪಾಠ ಕಲಿಸುವುದು ಯಾರಿಗೆ?
ಉಪ ಚುನಾವಣೆಗೆ ಹೊಸ ನಾಯಕತ್ವ
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷವನ್ನು ಮುನ್ನೆಡಸಲು ಹೊಸ ನಾಯಕತ್ವಕ್ಕಾಗಿ ಹುಡುಕಾಟ ಆರಂಭವಾಗಿದೆ. ಏಪ್ರಿಲ್ 17ರಂದು ನಡೆಯಲಿರುವ ಉಪಚುನಾವಣೆ ತಕ್ಷಣ ಪ್ರಚಾರವನ್ನು ಆರಂಭಿಸಬೇಕಿದೆ. ಅದಕ್ಕಾಗಿ ಉಸ್ತುವಾರಿಯನ್ನು ಒಬ್ಬರಿಗೆ ನೀಡಬೇಕಿದೆ. ಸಿಡಿ ಬಿಡುಗಡೆಗೂ ಮುನ್ನ ರಮೇಶ್ ಜಾರಕಿಹೊಳಿಗೆ ಉಪಚುನಾವಣೆ ಉಸ್ತುವಾರಿ ನೀಡಲಾಗಿತ್ತು.
ಉಮೇಶ್ ಕತ್ತಿ ಹೆಗಲಿಗೆ ಉಸ್ತುವಾರಿ?
ಲೋಕಸಭಾ ಉಪಚುನಾವಣೆ ಜವಾಬ್ದಾರಿಯನ್ನು ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ಸೇರಿರುವ ಹಿರಿಯ ನಾಯಕ ಉಮೇಶ್ ಕತ್ತಿಗೆ ನೀಡುವ ಸಾಧ್ಯತೆ ಇದೆ ಎಂಬ ಸುದ್ದಿಯೂ ಹಬ್ಬಿದೆ. ಡಿಸಿಎಂ ಲಕ್ಷ್ಮಣ ಸವದಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೆಸರು ಮುಂಚೂಣಿಯಲ್ಲಿದೆ.
ಮಾತುಕತೆ ನಡೆಸಿರುವ ಯಡಿಯೂರಪ್ಪ
ಶೀಘ್ರವೇ ಸಭೆಯನ್ನು ನಡೆಸಿ ಯಾರಿಗೆ ಉಪ ಚುನಾವಣೆ ಉಸ್ತುವಾರಿ ನೀಡಬೇಕು? ಎಂದು ತೀರ್ಮಾನ ಮಾಡಲಾಗುತ್ತದೆ. ಈಗಾಗಲೇ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ಉಮೇಶ್ ಕತ್ತಿ ಯಡಿಯೂರಪ್ಪರನ್ನು ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದ್ದಾರೆ. ಉಸ್ತುವಾರಿ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಆಶಯ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸಚಿವರ ದಂಡೇ ಇದೆ
ಬೆಳಗಾವಿಯಲ್ಲಿ ಬಿಜೆಪಿ ಸಾಕಷ್ಟು ಪ್ರಭಾವವನ್ನು ಹೊಂದಿದೆ. ಕಾಂಗ್ರೆಸ್ ಪಕ್ಷದಿಂದಲೂ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಪ್ರಭಾವಿ ನಾಯಕರು ಇದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿ ಬೆಳಗಾವಿ ಭಾಗದ ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಶ್ರೀಮಂತ ಪಾಟೀಲ್, ಲಕ್ಷ್ಮಣ ಸವದಿ ಸಚಿವರಾಗಿದ್ದಾರೆ. ಆದ್ದರಿಂದ, ಉಪ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.