ಬೆಳಗಾವಿ ಉಪ ಚುನಾವಣೆ: ಮತದಾನಕ್ಕೆ 10 ದಿನ ಮುನ್ನವೇ ಭವಿಷ್ಯ ನುಡಿದ ಬಿಎಸ್ವೈ
ಬೆಳಗಾವಿ, ಏಪ್ರಿಲ್ 6: ಬೆಳಗಾವಿ ಲೋಕಸಭೆಯ ಉಪಚುನಾವಣೆಗೆ ಇನ್ನೂ ಹತ್ತು ದಿನ ಬಾಕಿಯಿದೆ. ಆದರೆ, ಅದಕ್ಕೂ ಮೊದಲೇ ಈ ಚುನಾವಣೆಯಲ್ಲಿ ಯಾವ ಫಲಿತಾಂಶ ಹೊರಬೀಳಬಹುದು ಎನ್ನುವುದರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಇಲ್ಲಿನ ಚುನಾವಣಾ ಕಣ ರಂಗೇರುತ್ತಿದ್ದು ಕಾಂಗ್ರೆಸ್ಸಿನಿಂದ ಸತೀಶ್ ಜಾರಕಿಹೊಳಿ ಸ್ಪರ್ಧೆಯ ನಂತರ, ಬಿಜೆಪಿ ಮೈಗೆಡವಿ ಪ್ರಚಾರದಲ್ಲಿ ತೊಡಗಿದೆ. ಬರೀ ಅನುಕಂಪವೊಂದೇ ವರ್ಕೌಟ್ ಆಗುವುದಿಲ್ಲ ಎನ್ನುವುದನ್ನು ಅರಿತಿರುವ ಬಿಜೆಪಿ ಮುಖಂಡರು ಫುಲ್ ಸ್ವಿಂಗ್ನಲ್ಲಿ ಪ್ರಚಾರ ಆರಂಭಿಸಿದ್ದಾರೆ.
ಬೆಳಗಾವಿ ಚುನಾವಣಾ ಕಣದಿಂದ ಸತೀಶ್ ಜಾರಕಿಹೊಳಿ ಹಿಂದಕ್ಕೆ ಸುದ್ದಿ: ಸ್ಪಷ್ಟನೆ
ಈ ಭಾಗದಲ್ಲಿ ಪ್ರಮುಖವಾಗಿರುವ ಜಾರಕಿಹೊಳಿ (ಸತೀಶ್ ಹೊರತು ಪಡಿಸಿ) ಕುಟುಂಬದ ಬೆಂಬಲ ಯಾರಿಗೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಆದರೆ, ಸಹೋದರರಲ್ಲಿ ಒಬ್ಬರಾದ ಲಖನ್ , ಕೆಪಿಸಿಸಿ ಅಧ್ಯಕ್ಷರ ವಿರುದ್ದ ತಿರುಗಿಬಿದ್ದಿದ್ದಾರೆ.
ಲಖನ್ ನಿವಾಸಕ್ಕೆ ಬಿಜೆಪಿ ಗಣ್ಯರ ದಂಡೇ ಹೋಗಿದ್ದು, ಬೆಂಬಲಿಸಲು ಮನವಿ ಮಾಡಿದ್ದಾರೆ. ಇದಕ್ಕೆ, ಲಖನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದ, ಬಹುತೇಕ ಜಾರಕಿಹೊಳಿ ಸಹೋದರರು ಬಿಜೆಪಿ ಬೆಂಬಲಿಸುವ ಸಾಧ್ಯತೆಯೇ ಹೆಚ್ಚು. ಬಿಎಸ್ವೈ ಭವಿಷ್ಯ ನುಡಿದಿದ್ದೇನು?
ಬೆಳಗಾವಿ ಚುನಾವಣೆ; ಜಾರಕಿಹೊಳಿ ಕುಟುಂಬದ ಬೆಂಬಲ ಯಾರಿಗೆ?
ಲಖನ್ ಜಾರಕಿಹೊಳಿ ಬೆಂಬಲ ಯಾರಿಗೆ?
ರಾಜಕೀಯವಾಗಿ ಪ್ರಭಾವೀಯಾಗಿರುವ ಜಾರಕಿಹೊಳಿ ಕುಟುಂಬದ ಮೂವರು ಸದಸ್ಯರು ಶಾಸಕರಾಗಿದ್ದಾರೆ. ಅವರೆಂದರೆ, ರಮೇಶ್ ಜಾರಕಿಹೊಳಿ (ಗೋಕಾಕ), ಬಾಲಚಂದ್ರ ಜಾರಕಿಹೊಳಿ (ಅರಭಾವಿ), ಸತೀಶ್ ಜಾರಕಿಹೊಳಿ (ಯಮಕನಮರಡಿ). ಲಖನ್ ಜಾರಕಿಹೊಳಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದವರು. ಇದರಲ್ಲಿ ಸತೀಶ್ ಪ್ರತಿನಿಧಿಸುವ ಕ್ಷೇತ್ರ ಬೆಳಗಾವಿ ಲೋಕಸಭಾ ವ್ಯಾಪ್ತಿಗೆ ಬರುವುದಿಲ್ಲ. ಲಖನ್ ಬಿಜೆಪಿ ಕಡೆ ಮುಖಮಾಡಿದ್ದಾರೆ ಎನ್ನುವ ಸುದ್ದಿ ಬಲವಾಗಿ ಹರಿದಾಡುತ್ತಿದೆ.
ಬೆಳಗಾವಿಯಲ್ಲಿನ ಚಿತ್ರಣ ಹೇಗಿದೆ ಎನ್ನುವ ಪ್ರಶ್ನೆಗೆ ಯಡಿಯೂರಪ್ಪ ಉತ್ತರ
ಬೆಳಗಾವಿಯಲ್ಲಿನ ಚಿತ್ರಣ ಹೇಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಿದ್ದ ಯಡಿಯೂರಪ್ಪ, "ನಮ್ಮ ಅಭ್ಯರ್ಥಿಯಾಗಿರುವ ಮಂಗಲ ಅಂಗಡಿಯವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಮನಸ್ಸು ಇರಲಿಲ್ಲ. ನಮ್ಮ ಒತ್ತಾಯಕ್ಕೆ ಬೆಲೆಕೊಟ್ಟು ಚುನಾವಣೆಗೆ ನಿಂತಿದ್ದಾರೆ. ಅವರ ಗೆಲುವು ನಿಶ್ಚಿತ"ಎಂದು ಬಿಎಸ್ವೈ ಹೇಳಿದ್ದಾರೆ.
ಎರಡೂವರೆ, ಮೂರು ಲಕ್ಷಗಳ ಮತಗಳ ಅಂತರದಿಂದ ನಾವು ಗೆದ್ದೇ ಗೆಲ್ಲುತ್ತೇವೆ
"ಜಿಲ್ಲೆಯ ಎಲ್ಲಾ ಮತದಾರರು ಮಂಗಲ ಸುರೇಶ್ ಅಂಗಡಿಯವರ ಪರವಾಗಿ ಇದ್ದಾರೆ. ಸುಮಾರು ಎರಡೂವರೆ, ಮೂರು ಲಕ್ಷಗಳ ಮತಗಳ ಅಂತರದಿಂದ ಶೇಕಡಾ ನೂರಕ್ಕೆ ನೂರು ನಾವು ಗೆದ್ದೇ ಗೆಲ್ಲುತ್ತೇವೆ. ಸುರೇಶ್ ಅಂಗಡಿಯವರು ಕ್ಷೇತ್ರಕ್ಕಾಗಿ ದುಡಿದಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಮ್ಮ ಅಭ್ಯರ್ಥಿಗೆ ಮತ ಚಲಾಯಿಸಬೇಕು"ಎಂದು ಯಡಿಯೂರಪ್ಪ ಮತದಾರರಲ್ಲಿ ಮನವಿ ಮಾಡಿದ್ದಾರೆ.
ವಿಜಯೇಂದ್ರನ ಮೇಲೆ ಆರೋಪ ಹೊಸದೇನಲ್ಲ
"ಕಾಂಗ್ರೆಸ್ಸಿನವರಿಗೆ ಸೋಲು ಈಗಾಗಲೇ ನಿಶ್ಚಿತವಾಗಿದೆ, ಹಾಗಾಗಿಯೇ ವಿಜಯೇಂದ್ರನ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಈ ರೀತಿಯ ಆರೋಪ ಹೊಸದೇನೂ ಅಲ್ಲ, ಇದಕ್ಕೆಲ್ಲಾ ಉತ್ತರ ಕೊಡುವ ಅವಶ್ಯಕತೆಯೂ ಇಲ್ಲ. ಮಸ್ಕಿ ಮತ್ತು ಬಸವಕಲ್ಯಾಣದಲ್ಲೂ ನಾವು ಗೆಲ್ಲುತ್ತೇವೆ"ಎನ್ನುವ ವಿಶ್ವಾಸದ ಮಾತನ್ನು ಯಡಿಯೂರಪ್ಪ ಆಡಿದ್ದಾರೆ.