ಮೇ 23ರವರೆಗೆ ಭವಿಷ್ಯ ಹೇಳುವುದಿಲ್ಲ: ನೋಟಿಸ್ ಬಳಿಕ ಕೋಡಿಮಠದ ಸ್ವಾಮೀಜಿ ಹೇಳಿಕೆ
Recommended Video
ಬೆಳಗಾವಿ, ಏಪ್ರಿಲ್ 27: ರಾಜಕೀಯದ ಕುರಿತು ಚುನಾವಣೆಯ ಸಂದರ್ಭದಲ್ಲಿ ಭವಿಷ್ಯ ನುಡಿದಿದ್ದಕ್ಕೆ ಅರಸೀಕೆರೆ ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ರಾಜೇಂದ್ರ ಸ್ವಾಮೀಜಿ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಹೀಗಾಗಿ ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟವಾಗುವ ಮೇ 23ರವರೆಗೂ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಕೋಡಿಮಠದ ಸ್ವಾಮೀಜಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಮತ್ತೆ ಸರ್ಕಾರ ಬದಲಾವಣೆ ಆಗುತ್ತದೆ ಎಂದು ಇತ್ತೀಚೆಗೆ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಸರ್ಕಾರದ ಬದಲಾವಣೆಯಾಗುವ ಕುರಿತು ಹೇಳಿಕೆ ನೀಡಿರುವುದು ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಕೋಡಿಮಠದ ಸ್ವಾಮೀಜಿ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿಮಾಡಿತ್ತು.
48ಗಂಟೆಯೊಳಗೆ ಉತ್ತರ ಕೊಡಿ, ಕೋಡಿಶ್ರೀಗಳಿಗೆ ಚುನಾವಣಾ ಆಯೋಗದ ನೊಟೀಸ್
'ರಾಜ್ಯದಲ್ಲಿ ಮತ್ತೆ ಸರ್ಕಾರ ಬದಲಾವಣೆ ಆಗುತ್ತದೆ ಎಂಬ ಬಗ್ಗೆ ಹೇಳಿಕೆ ನೀಡಿದ್ದೆ. ಅದಕ್ಕಾಗಿ ಚುನಾವಣಾ ಆಯೋಗ ನನಗೆ ನೋಟಿಸ್ ನೀಡಿದೆ' ಎಂದು ಬೆಳಗಾವಿಯಲ್ಲಿ ಕೋಡಿಮಠದ ಸ್ವಾಮೀಜಿ ತಿಳಿಸಿದ್ದಾರೆ.
ಮೇ 23ರವರೆಗೆ ಹೇಳಿಕೆ ನೀಡೊಲ್ಲ
'ರಾಶಿಯ ಬಗ್ಗೆ ಭವಿಷ್ಯ ನುಡಿಯವುದು ಕಷ್ಟ. ನೀವೆಲ್ಲ ತಿಳಿದಂತೆ ಆಗುತ್ತದೆ. ಮೇ 23ರವರೆಗೆ ಹೇಳಿಕೆ ಕೊಡುವುದಿಲ್ಲ ಎಂದು ಚುನಾವಣಾ ಆಯೋಗಕ್ಕೆ ಬರೆದುಕೊಟ್ಟಿದ್ದೇನೆ' ಎಂದು ಸ್ವಾಮೀಜಿ ಹೇಳಿದ್ದಾರೆ. ಮೇ 23ರಂದು ದೇಶದಾದ್ಯಂತ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಇದರ ಬಳಿಕ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಹೀಗಾಗಿ ಆ ದಿನದವರೆಗೂ ರಾಜಕೀಯದ ಕುರಿತಂತೆ ಭವಿಷ್ಯ ನುಡಿಯುವುದಿಲ್ಲ ಎಂದಿದ್ದಾರೆ.
ಕಾಲಜ್ಞಾನ ಬ್ರಹ್ಮ ಸದ್ಗುರು ಸ್ವಾಮೀಜಿ ನುಡಿದ ಪ್ರಧಾನಿ ಮೋದಿಯ ಭವಿಷ್ಯ
ಬದಲಾವಣೆ ಆಗುವುದು ಖಚಿತ
ಕೋಡಿಮಠದ ಸ್ವಾಮೀಜಿ ಅವರು ರಾಜ್ಯದಲ್ಲಿ ಸರ್ಕಾರದ ಬದಲಾವಣೆ ಆಗಲಿದೆ ಎಂದು ಭವಿಷ್ಯ ನುಡಿದಿದ್ದರು. ಚುನಾವಣೆ ಪ್ರಗತಿಯಲ್ಲಿರುವುದರಿಂದ ಸರ್ಕಾರ ಪತನದ ಬಗ್ಗೆ ಚರ್ಚೆಗಳು ತೀವ್ರವಾಗಿ ನಡೆಯುತ್ತಿವೆ. ಫಲಿತಾಂಶದ ಬಳಿಕ ಸರ್ಕಾರದ ಬದಲಾವಣೆ ಆಗಲಿವೆ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣಾ ಆಯೋಗ ನೋಟಿಸ್ ನೀಡಿರುವುದರಿಂದ ಈ ಬಗ್ಗೆ ವಿವರಣೆ ನೀಡಲು ಸ್ವಾಮೀಜಿ ಮುಂದಾಗಿಲ್ಲ. ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು, 'ಆಗುತ್ತದೆ ಆಗುತ್ತದೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
2018ರಲ್ಲಿ ಕೋಡಿ ಶ್ರೀಗಳದ್ದಾಯಿತು, ಬೇರೆ ಭವಿಷ್ಯಗಳೆಲ್ಲಾ ನಿಜವಾಯಿತಾ?
ಮೋದಿ ಮತ್ತೆ ಪಿಎಂ ಆಗ್ತಾರೆ ಎಂದಿದ್ದ ಸ್ವಾಮೀಜಿ
ಪ್ರಧಾನಿ ನರೇಂದ್ರ ಮೋದಿ ಅವರೇ ಮತ್ತೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂದು ಮಾರ್ಚ್ ತಿಂಗಳಿನಲ್ಲಿ ಪರೋಕ್ಷವಾಗಿ ಸ್ವಾಮೀಜಿಗಳು ಹೇಳಿದ್ದರು.
ಯಾದಗಿರಿಯಲ್ಲಿ ಶ್ರೀ ವಿಶ್ವಾರಾಧ್ಯರ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಕೋಡಿಮಠದ ಸ್ವಾಮೀಜಿ, "ಪಾಂಡವರು ಮತ್ತು ಕೌರವರು ಬಡಿದಾಡುವರು, ರತ್ನಖಚಿತ ಸುವರ್ಣ ಕಿರೀಟ ಸ್ಥಿರವಾಗಿರುತ್ತದೆ. ಬೇವು ಬೆಲ್ಲವಾದೀತು, ಸತ್ಯ ವಿಷದಂತೆ ಇರುತ್ತದೆ" ಎಂದು ಹೇಳಿದ್ದರು. ಇದನ್ನು ಮೋದಿ ಅವರೇ ಪ್ರಧಾನಿಯಾಗಿ ಮತ್ತೆ ಆಯ್ಕೆಯಾಗಲಿದ್ದಾರೆ ಎಂದು ಅರ್ಥೈಸಲಾಗಿತ್ತು.
ನೀತಿ ಸಂಹಿತೆ ಉಲ್ಲಂಘನೆ
ಸ್ವಾಮೀಜಿ ಅವರು ನುಡಿದಿರುವ ಭವಿಷ್ಯ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಚುನಾವಣಾ ಅಧಿಕಾರಿಗಳು ಅವರಿಗೆ ನೋಟಿಸ್ ಜಾರಿ ಮಾಡಿ 48 ಗಂಟೆಗಳ ಒಳಗೆ ಉತ್ತರಿಸುವಂತೆ ಸೂಚಿಸಿದ್ದರು.
ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕಾನೂನು ಉಲ್ಲಂಘಿಸಿದ್ದೀರಿ. ಹೀಗಾಗಿ ನೋಟಿಸ್ಗೆ ಉತ್ತರ ಕೊಡಬೇಕು ಎಂದು ಚುನಾವಣಾ ಆಯೋಗ ನಿರ್ದೇಶಿಸಿತ್ತು.