ಬೆಳಗಾವಿಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಲು ಉಪ ಚುನಾವಣೆಯೇ ಕಾರಣ
ಬೆಳಗಾವಿ, ಮೇ 20: ಕರ್ನಾಟಕದಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಅದರಲ್ಲೂ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಳೆದ ಐದು ದಿನಗಳಲ್ಲಿ 8,722 ಸೋಂಕು ಪ್ರಕರಣಗಳು ವರದಿಯಾಗಿವೆ.
ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್- 19 ಪ್ರಕರಣಗಳು ಹೆಚ್ಚಾಗಲು ಲೋಕಸಭಾ ಉಪ ಚುನಾವಣೆಯೇ ಕಾರಣವೆಂದು ಸರ್ಕಾರದ ಅಂಕಿ ಅಂಶಗಳು ತೋರಿಸುತ್ತವೆ.
ಮಂಗಳವಾರದ ಕೊರೊನಾ ಪಾಸಿಟಿವಿಟಿ ದರವು ಶೇ.81.4 ರಷ್ಟಾಗಿದ್ದು, ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ್ ಅವರು ಈ ವಾರಾಂತ್ಯದಲ್ಲಿ ಜಿಲ್ಲೆಯನ್ನು ಸಂಪೂರ್ಣ ಲಾಕ್ಡೌನ್ ಮಾಡಲು ಆದೇಶಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಕೇವಲ ಒಂದು ವಾರದಲ್ಲಿ 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಉಪ ಚುನಾವಣೆಯಲ್ಲಿ ಹಲವು ಗ್ರಾಮಗಳ ಗ್ರಾಮಸ್ಥರು ಸಕ್ರಿಯವಾಗಿ ಪಾಲ್ಗೊಂಡಿದ್ದರು ಮತ್ತು ಸ್ಥಳೀಯವಾಗಿ ಸಮಾರಂಭಗಳನ್ನು ನಡೆಸಿದ್ದರು. ಅಲ್ಲದೆ ಇತ್ತೀಚಿಗೆ 150ಕ್ಕೂ ಹೆಚ್ಚು ಟ್ಯಾಕ್ಸಿ ಚಾಲಕರು ಮಹಾರಾಷ್ಟ್ರಕ್ಕೆ ಪ್ರವಾಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಸಾಮಾಜಿಕ ಕಾರ್ಯಕರ್ತ ಅಶೋಕ್ ಚಂದರಗಿ ಅವರು ಖಾಸಗಿ ಸುದ್ದಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಲು ರಾಜಕೀಯ ಪಕ್ಷಗಳೇ ಕಾರಣವೆಂದು ವಾಗ್ದಾಳಿ ನಡೆಸಿದ್ದಾರೆ.
ರಾಜಕೀಯ ಪಕ್ಷಗಳ ಬೃಹತ್ ಮೆರವಣಿಗೆಗಳು ಮತ್ತು ದೊಡ್ಡ ದೊಡ್ಡ ಕಾರ್ಯಕರ್ತರ ವರ್ತನೆಯು ಜನರಿಗೆ ಸೋಂಕು ಹರಡಲು ಕಾರಣವಾಗಿದೆ ಎಂದು ಹೇಳಿದರು. ರಾಜ್ಯವು ವೈರಸ್ನ್ನು ಯಶಸ್ವಿಯಾಗಿ ಸೋಲಿಸಿದೆ ಎಂಬ ತಪ್ಪುಗ್ರಹಿಕೆ ಇದೆ ಎಂದು ಹೇಳಿದ ಅಶೋಕ್ ಚಂದರಗಿ, ""ಉಪ ಚುನಾವಣೆಯ ರಾಜಕೀಯ ಕಾರ್ಯಕ್ರಮಗಳಲ್ಲಿ, ಯಾರೂ ಮಾಸ್ಕ್ಗಳನ್ನು ಧರಿಸಲಿಲ್ಲ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಿಲ್ಲ. ಇದು ಸೋಂಕು ಉಲ್ಬಣಕ್ಕೆ ಕಾರಣವಾಗಿದೆ" ಎಂದು ತಿಳಿಸಿದರು.
ನಾಗರಿಕ ಕಾರ್ಯಕರ್ತ ಕೃಷ್ಣ ಗಿರಿಯಣ್ಣನವರ್ ಮಾತನಾಡಿ, ಗಡಿಯನ್ನು ಬಂದ್ ಮಾಡಬೇಕೆಂದು ಕರೆ ನೀಡಿದರು. "ಗಡಿಯಲ್ಲಿ ನಾಮಕಾವಸ್ತೆ ನಿರ್ಬಂಧಗಳು ರಾಜ್ಯದಲ್ಲಿ ಸೋಂಕು ಪ್ರಕರಣಗಳು ಹೆಚ್ಚಳವಾಗುವಂತೆ ಮಾಡಿದೆ' ಎಂದು ಹೇಳಿದರು.
ಕೇವಲ 17 ದಿನಗಳಲ್ಲಿ ಒಟ್ಟು 6,790 ಸಾವಿನೊಂದಿಗೆ ಕರ್ನಾಟಕದ ಕೋವಿಡ್-19 ಟೋಲ್ ಈಗ ದೆಹಲಿಯನ್ನು ಹಿಂದಿಕ್ಕಿದೆ, ಇದು ಕಳೆದ ಒಂದು ತಿಂಗಳಿನಿಂದ ಗರಿಷ್ಠ ಸಾವುಗಳು ವರದಿಯಾಗಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.