ಲಾಕ್ ಡೌನ್: ಬೆಳಗಾವಿಯಲ್ಲಿ ಮದ್ಯ ಸಿಗದಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆ
ಬೆಳಗಾವಿ, ಎಪ್ರಿಲ್ 02: ಕೊರೊನಾ ಕಾರಣದಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಒಂದೆಡೆ ಜನ ನೀರು, ಆಹಾರ ಸಿಗದೇ ಪರದಾಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಮತ್ತೊಂದೆಡೆ ಕುಡಿಯಲು ಮದ್ಯ ಸಿಗತ್ತಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳೂ ನಡೆಯುತ್ತಿವೆ.
ಬೆಳಗಾವಿ ಜಿಲ್ಲೆಯಾದ್ಯಂತ ಬಾರ್, ವೈನ್ಸ್ ಶಾಪ್ ಗಳನ್ನು ಸಂಪೂರ್ಣ ಲಾಕೌಟ್ ಮಾಡಲಾಗಿದ್ದರಿಂದ, ಕುಡಿಯಲು ಮದ್ಯ ಸಿಗದ ಕಾರಣ ಮದ್ಯ ವ್ಯಸನಿಯೊಬ್ಬ ಸಾವನ್ನಪ್ಪಿದ್ದಾನೆ. ಬೆಳಗಾವಿಯ ಅನಗೊಳದ ಬೆಂಡಿಗೇರಿ ಚಾಳದಲ್ಲಿ ಘಟನೆ ನಡೆದಿದೆ.
ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ದೇವೇಂದ್ರಪ್ಪ ಹಡಪದ(42) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಲೂನ್ ಶಾಪ್ ನಲ್ಲಿ ದೇವೇಂದ್ರಪ್ಪ ಹಡಪದ ಕೆಲಸ ಮಾಡುತ್ತಿದ್ದನು. ಮೂಲತಃ ಬೆಳಗಾವಿ ಜಿಲ್ಲೆ ಸವದತ್ತಿಯ ನಿವಾಸಿಯಾಗಿದ್ದಾನೆ. ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ನಡೆದಿದೆ.
ಅತಿಯಾದ ಮದ್ಯಪಾನ ಸೇವನೆ ಚಟ ಇರುವ ಇವರಿಗೆ ಬಂದ್ ನಿಂದಾಗಿ ಮದ್ಯ ಸಿಗ್ತಾ ಇರಲಿಲ್ಲ. ಒಂದೆರಡು ದಿನವಾಗಿದ್ದರೆ ಅದನ್ನು ಸಹಿಸಿಕೊಳ್ಳುತ್ತಿದ್ದರೋ ಏನೋ, ಆದರೆ ನಿರಂತರ ಒಂದು ವಾರ ಮದ್ಯ ಪೂರೈಕೆ ಇಲ್ಲದ್ದರಿಂದ ಇವರು ಸಹಜವಾಗಿಯೇ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಕೆಲವರಿಗೆ ಕುಡಿಯದೇ ಇದ್ದರೆ ಕೈ ನಡುಕ ಬರುವುದೂ ಇದೆ. ಇಂಥವರು ಹೆಚ್ಚು ಸಮಯ ಇದನ್ನು ತಡೆದುಕೊಳ್ಳುವ ಶಕ್ತಿ ಹೊಂದಿರಲಾರರು.