ವಿನಯ್ ಕುಲಕರ್ಣಿ ಬಿಡುಗಡೆ: ರಾಖಿ ಕಟ್ಟಿ, ಹಣೆಗೆ ತಿಲಕ ಇಟ್ಟು ಸ್ವಾಗತಿಸಿದ ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ, ಆಗಸ್ಟ್ 21: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ವೇಳೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ರಾಖಿ ಕಟ್ಟಿ, ಹಣೆಗೆ ತಿಲಕ ಇಟ್ಟು ಸಿಹಿ ತಿನ್ನಿಸಿ ಸ್ವಾಗತಿಸಿದ್ದಾರೆ.
ಜೈಲಿನಿಂದ ಹೊರಬಂದ ವಿಜಯ್ ಕುಲಕರ್ಣಿಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರಿಂದ ಭರ್ಜರಿ ಸ್ವಾಗತ ಸಿಕ್ಕಿದ್ದು, ಜೈಲು ಆವರಣದಲ್ಲಿ ಅಭಿಮಾನಿಗಳ ಜಯಘೋಷ ಮುಗಿಲು ಮುಟ್ಟಿತ್ತು.
ಬರೋಬ್ಬರಿ 9 ತಿಂಗಳ ಜೈಲು ವಾಸದ ಬಳಿಕ ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲಿನಿಂದ ಬಿಡುಗಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, "ಜೈಲಿನಲ್ಲಿ ಸಾಕಷ್ಟು ವಿಷಯ ಕಲಿತಿದ್ದೇನೆ. ಜೀವನದಲ್ಲಿ ಹೇಗಿರಬೇಕು ಎನ್ನುವ ಪಾಠ ಜೈಲು ಕಲಿಸಿಕೊಟ್ಟಿದೆ. ಪುಸ್ತಕ ಓದುವ ಹವ್ಯಾಸ ರೂಢಿಸಿಕೊಂಡಿದ್ದೇನೆ," ಎಂದರು.
"ನಾನು ನಿರ್ದೋಷಿಯಾಗಿ ಹೊರಗೆ ಬರುತ್ತೇನೆ ಎಂದು ಈ ಹಿಂದೆಯೇ ಹೇಳಿದ್ದೆ. ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ, ಈ ಹೋರಾಟದಿಂದ ಹೊರಗೆ ಬರುತ್ತೇನೆ. ರಾಜಕೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಕುಟುಂಬಸ್ಥರು ನನಗಾಗಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರೆಲ್ಲರಿಗೂ ನಾನು ಋಣಿಯಾಗಿದ್ದೇನೆ," ಎಂದು ಹೇಳಿದರು.
"ನಾನು ಸಾಮಾನ್ಯ ರೈತ ಕುಟುಂಬದಿಂದ ಬಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ಕ್ಷೇತ್ರದ ಜನ ನಂಬಿದವರಿಗಾಗಿ ಎಂತಹದ್ದೇ ಹೋರಟವಾದರೂ ಮಾಡಲು ಸಿದ್ಧ. ಬರೋಬ್ಬರಿ 9 ತಿಂಗಳು 16 ದಿನಗಳ ಕಾಲ ಜೈಲು ವಾಸ ಅನುಭವಿಸಿದ್ದೇನೆ. ನನ್ನ ಜೀವನದಲ್ಲಿ ಇದೊಂದು ಟಾಸ್ಕ್, ನಿಭಾಯಿಸಿದ್ದೇನೆ," ಎಂದು ತಿಳಿಸಿದರು.
"ಕಾನೂನು ಪ್ರಕಾರ ನಡೆದುಕೊಂಡಿದ್ದೇನೆ, ಇನ್ನೊಂದು ಖುಷಿ ವಿಚಾರ ಎಂದರೆ ನನಗೆ ಓದುವ ಹವ್ಯಾಸ ಇರಲಿಲ್ಲ. ಆದರೆ ಜೈಲಿಗೆ ಬಂದ ಮೇಲೆ ಸಾಕಷ್ಟು ಓದುವುದನ್ನು ಕಲಿತಿದ್ದೇನೆ, ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ನನ್ನ ಜೀವನದಲ್ಲಿ ದೊಡ್ಡ ಬದಲಾವಣೆ ಕಂಡುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಯಾವ ರೀತಿ ಹೆಜ್ಜೆ ಇಡಬೇಕು ಎಂಬುದರ ಕುರಿತು ಹಲವಾರು ವಿಚಾರಗಳನ್ನು ಅರಿತಿದ್ದೇನೆ," ಎಂದು ಹೇಳಿದರು.
ಜೈಲಿನಿಂದ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಜಮಾಯಿಸಿದ್ದು, ಜನ ಜಾತ್ರೆ ಉಂಟಾಯಿತು. ಅಲ್ಲದೆ ಕಾರಿನ ಮೂಲಕ ವಿನಯ್ ಕುಲಕರ್ಣಿಯನ್ನು ಮೆರವಣಿಗೆ ಮೂಲಕ ಕರೆದೊಯ್ಯಲಾಗಿದೆ. ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದು ಹಾರ ಹಾಕಿ, ಹೂವು ಎರಚಿ ಸಂಭ್ರಮಿಸಿದರು.
ನಂತರ ವಿನಯ್ ಕುಲಕರ್ಣಿ ಬೆಳಗಾವಿಯ ಶಿವಬಸವ ನಗರದಲ್ಲಿರುವ ನಾಗನೂರು ರುದ್ರಾಕ್ಷಿಮಠಕ್ಕೆ ಭೇಟಿ ನೀಡಿ ಮಠದ ಅಲ್ಲಮಪ್ರಭು ಶ್ರೀಗಳ ಆಶೀರ್ವಾದ ಪಡೆದರು. ರುದ್ರಾಕ್ಷಿಮಠಕ್ಕೆ ಭೇಟಿ ಬಳಿಕ ಮಧ್ಯಾಹ್ನ ಬೆಂಗಳೂರಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸಾಂಬ್ರಾ ಏರ್ಪೋರ್ಟ್ಗೆ ತೆರಳಿ ಮಧ್ಯಾಹ್ನ 3.40ರ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವ ಸಾಧ್ಯತೆ ಇದೆ.
ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯೆ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಗುರುವಾರ ಜಾಮೀನು ನೀಡಲಾಗಿತ್ತು. ಆದರೆ ಶುಕ್ರವಾರ ಕೋರ್ಟ್ ಆದೇಶದ ಪ್ರತಿ ಸಿಗದ ಹಿನ್ನೆಲೆ ಬಿಡುಗಡೆ ಸಾಧ್ಯವಾಗಿರಲಿಲ್ಲ. ಕೋರ್ಟ್ ಆದೇಶ ಪ್ರತಿಯನ್ನು ಇ-ಮೇಲ್ ಮಾಡದೆ, ಪೋಸ್ಟ್ ಮೂಲಕ ಕಳುಹಿಸಲಾಗಿತ್ತು. ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಸರ್ಕಾರಿ ಕಚೇರಿಗಳಿಗೆ ರಜೆ ಇರುವುದರಿಂದ ಪೋಸ್ಟ್ ಮೂಲಕ ಬರಬೇಕಿರುವ ಆದೇಶ ಪ್ರತಿ ತಲುಪುವುದು ವಿಳಂಬವಾಗಿತ್ತು.
ಹೀಗಾಗಿ 2020ರ ನವೆಂಬರ್ 5ರಂದು ಕೊಲೆ ಪ್ರಕರಣದಲ್ಲಿ ಹಿಂಡಲಗಾ ಜೈಲು ಸೇರಿದ್ದ ವಿನಯ್ ಕುಲಕರ್ಣಿಗೆ ಜಾಮೀನು ಸಿಕ್ಕರೂ ಬಿಡಗಡೆ ಭಾಗ್ಯ ಲಭಿಸಿರಲಿಲ್ಲ. ಅಂತಿಮವಾಗಿ ಶನಿವಾರ ಸ್ಪೀಡ್ ಪೋಸ್ಟ್ ಮೂಲಕ ಆದೇಶ ಪ್ರತಿ ಹಿಂಡಲಗಾ ಜೈಲು ತಲುಪಿದ್ದು, ಇದೀಗ ಹೊರ ಬಂದಿದ್ದಾರೆ.