"ಅಕ್ರಮವಾಗಿ ಸಂಪಾದಿಸಿದ್ದರೆ ಸರ್ಕಾರದ ಬೊಕ್ಕಸಕ್ಕೇ ಬರೆದುಕೊಡ್ತೀನಿ"
ಬೆಳಗಾವಿ, ಅಕ್ಟೋಬರ್ 3: "ನಾನು ಅಕ್ರಮ ಹಣ ಸಂಪಾದಿಸಿದ್ದರೆ ಅವೆಲ್ಲವನ್ನೂ ಸರ್ಕಾರದ ಬೊಕ್ಕಸಕ್ಕೆ ಬರೆದುಕೊಡುತ್ತೇನೆ" ಎಂದು ಹೇಳಿದ್ದಾರೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್. ಅಷ್ಟಕ್ಕೂ ಈ ಮಾತು ಹೇಳಲು ಒಂದು ಕಾರಣವಿದೆ.
ಅಕ್ರಮ ಆಸ್ತಿ ಸಂಪಾದನೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಇಡಿ ನೋಟಿಸ್ ನೀಡಿದೆ ಎಂಬ ವಿಚಾರ ಹರಿದಾಡುತ್ತಿದ್ದು, ಅದಕ್ಕೆ ಅವರು ಪ್ರತಿಕ್ರಿಯಿಸಿದ ರೀತಿ ಹೀಗಿತ್ತು. ಅಷ್ಟೇ ಅಲ್ಲ, ಈ ಕುರಿತು ಚಾಮುಂಡೇಶ್ವರಿ ದೇವಿ ಮೇಲೆ ಪ್ರಮಾಣ ಮಾಡಿ, ಯಾವುದೇ ಅಕ್ರಮ ಆಸ್ತಿ ಸಂಪಾದನೆ ಮಾಡಿಲ್ಲ ಎಂದೂ ಹೇಳಿಕೊಂಡಿದ್ದಾರೆ.
ಡಿಕೆಶಿ ಆಪ್ತೆ ಲಕ್ಷ್ಮೀ ಹೆಬ್ಬಾಳ್ಕರ್ ಆಸ್ತಿ ವಿವರ; ಕೋಟಿ ಕೋಟಿ ಹಣ ಇದ್ದರೂ ಬಂಗಾರ ಮಾತ್ರ ಇಲ್ಲ
"ಚಾಮುಂಡೇಶ್ವರಿ ದೇವಿ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಾನು ಅಕ್ರಮ ಆಸ್ತಿ ಸಂಪಾದನೆ ಮಾಡಿಲ್ಲ. ಇಡಿಯಿಂದ ಸಿಬಿಐ ಗೆ ಕೇಸ್ ನೀಡುವ ವಿಚಾರವಾಗಿಯೂ ನನಗೆ ಏನೂ ತಿಳಿದಿಲ್ಲ. ಹರ್ಷ ಶುಗರ್ಸ್ ಕಂಪನಿಯಲ್ಲಿ ಯಾವುದೇ ಅವ್ಯವಹಾರವಿಲ್ಲ. ಸಂಬಂಧಪಟ್ಟ ದಾಖಲೆಗಳನ್ನು ಈಗಾಗಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ" ಎಂದು ತಿಳಿಸಿದರು.
ತುಮಕೂರು ಡಿಸಿಸಿ ಬ್ಯಾಂಕ್ ನಿಂದ ಲೋನ್ ಪಡೆದ ಕುರಿತು ಮಾತನಾಡಿದ ಅವರು, "ಸಾಲ ಪಡೆಯುವಾಗ ನಮ್ಮ ಆಸ್ತಿ ಅಡವಿಟ್ಟಿಕೊಳ್ಳುವುದರಿಂದ ಹಿಡಿದು ಎಲ್ಲಾ ರೀತಿಯ ನೀತಿ ನಿಯಮಗಳನ್ನು ಅನುಸರಿಸಿ ಸಾಲ ಪಡೆಯಲಾಗಿದೆ. ಕಾನೂನು ಚೌಕಟ್ಟಿನಲ್ಲಿಯೇ ಎಲ್ಲ ಕಾರ್ಯ ಆಗಿದೆ. ಹರ್ಷ ಶುಗರ್ಸ್ ಈ ಬಾರಿ ಬೆಸ್ಟ್ ಕ್ರಷಿಂಗ್ ಅವಾರ್ಡ್ ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ರೈತರ ಪರವಾಗಿ ಕೆಲಸ ಮುಂದುವರೆಸಲಾಗಿದೆ. ಕೇಂದ್ರದ ಪರಿಹಾರವನ್ನು ಬಕಪಕ್ಷಿಯಂತೆ ಕಾಯುತ್ತಿದ್ದೇವೆ" ಎಂದು ಹೇಳಿದ್ದಾರೆ.