'ಲಕ್ಷ್ಮಿ' ಎದುರಿನಲ್ಲೇ 'ಮಹೇಶ್ವರ'ನ ಧ್ಯಾನ ಮಾಡಿದ ಕಾರ್ಯಕರ್ತರು!
ಬೆಳಗಾವಿ, ಡಿಸೆಂಬರ್.02: ಬೆಳಗಾವಿಯಲ್ಲಿ ರಾಜಕಾರಣವೇ ಹಾಗೆ. ಇಲ್ಲಿ ಯಾವಾಗಾ ಮತದಾರಪ್ರಭುಗಳು ಯಾರಿಗೆ ಜೈಕಾರ ಹಾಕುತ್ತಾರೆ. ಯಾವಾಗ ಧಿಕ್ಕಾರ ಹಾಕುತ್ತಾರೆ ಅನ್ನೋದೇ ಗೊತ್ತಾಗೋದಿಲ್ಲ. ಇತ್ತೀಚಿಗೆ ನಡೆದಿದ್ದೂ ಕೂಡಾ ಅಂಥದ್ದೇ ಒಂದು ಘಟನೆ.
ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೀಗೆ ಆಗುತ್ತೆ ಎಂದು ಸ್ವತಃ ಅವರೇ ಅಂದುಕೊಂಡಿರಲಿಲ್ಲ. ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಪರ ಪ್ರಚಾರಕ್ಕೆ ತೆರಳಿದ ಶಾಸಕಿಯೇ ಮಜುಗರ ಅನುಭವಿಸುವತಾ ಘಟನೆಯೊಂದು ಸತ್ತಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ನನ್ನ ಮುಖ್ಯಮಂತ್ರಿ ಮಾಡಿದ್ದು ಇವರೇ, ಪ್ಲೀಸ್ ಇವರಿಗೆ ವೋಟ್ ಹಾಕಿ
ಹೌದು, ಡಿಸೆಂಬರ್.05ರಂದು ನಡೆಯಲಿರುವ ಅಥಣಿ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಬದಲು ಕೆಲವು ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿಗೆ ಜೈಕಾರ ಹಾಕಿದ್ದಾರೆ.
'ಲಕ್ಷ್ಮಿ' ಎದುರಿನಲ್ಲೇ 'ಮಹೇಶ್ವರ'ನ ಧ್ಯಾನ!
ಮತಯಾಚನೆಗೆ ತೆರಳಿದ ಲಕ್ಷ್ಮಿ ಹೆಬ್ಬಾಳ್ಕರ್ ಭಾಷಣಕ್ಕೆ ಎದ್ದು ನಿಲ್ಲುತ್ತಿದ್ದಂತೆ ಕೆಲವು ಕಾರ್ಯಕರ್ತರು ಮಹೇಶ್ ಕುಮಟಳ್ಳಿಗೆ ಜೈ, ಮಹೇಶ್ ಕುಮಟಳ್ಳಿಗೆ ಜೈ ಎಂದು ಕೂಗಿದರು. ಇದರಿಂದ ಕೆಲಕಾಲ ಲಕ್ಷ್ಮಿ ಹೆಬ್ಬಾಳ್ಕರ್ ಮುಜುಗರಕ್ಕೆ ಈಡಾದರು. ನಂತರ ಕಾಂಗ್ರೆಸ್ ಗೆ ಜೈ ಎನ್ನುವ ಮೂಲಕ ಭಾಷಣ ಆರಂಭಿಸಿದರು. ಕಾಂಗ್ರೆಸ್ ಅಭ್ಯರ್ಥಿ ಗಜಾನನಗೆ ಮತ ನೀಡುವಂತೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತದಾರರಲ್ಲಿ ಮನವಿ ಮಾಡಿಕೊಂಡರು.